ಕೊಪ್ಪಳ: ಕೇಂದ್ರ ಸರ್ಕಾರದ ಹಿಂದಿ ಸಭೆ ವಿರೋಧಿಸಿ ಹೋರಾಟ ನಡೆಸಿದ ೪೧ ಜನ ಕರವೇ ಕಾರ್ಯಕರ್ತರನ್ನು ಬಂಧಿಸಿರುವ ಕ್ರಮ ಖಂಡನಾರ್ಹ. ಕೇಂದ್ರ ಸರ್ಕಾರ ಬಾಯಲ್ಲಿ ಬೆಣ್ಣೆ, ಕೈಯಲ್ಲಿ ದೊಣ್ಣೆ ವರೆಸೆ ನಡೆಸುತ್ತಿದೆ ಎಂದು ಕರವೇ ಜಿಲ್ಲಾ ಘಟಕ ಪ್ರತಿಭಟಿಸಿ ಕೇಂದ್ರ, ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿದರು.
ಘಟಕದ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ದೇಶವು ಒಕ್ಕೂಟ ರಾಷ್ಟವಾಗಿದ್ದು, ಬಹು ಸಂಸ್ಕೃತಿ, ಬಹುಭಾಷೆ, ಬಹು ಜನರ ಆಗರ. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ ಬಲವಂತವಾಗಿ ಹೇರುವುದು ಖಂಡನೀಯ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು. ಹಿಂದಿ ದಿವಸ್ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ರಾಜ್ಯಭಾಷಾ ಸಂಸತ್ ಸಮಿತಿಯು ಎರಡನೇ ಉಪ ಸಮಿತಿಯ ಸಭೆಯನ್ನು ಕನ್ನಡಿಗರ ಮತ್ತು ಕನ್ನಡದ ವಿನಾಶಕ್ಕೆ ನಡೆಸುತ್ತಿದೆ. ಇದು ಹುನ್ನಾರದ ಭಾಗವಾಗಿದ್ದು, ಭಾರತದ ಭಾಷಾನೀತಿ ಸಂವಿಧಾನದ ೧೭ನೇ ಭಾಗದ ೩೪೩-೩೫೧ನೇ ವಿಧಿಗಳಲ್ಲಿ ಬರೆಯಲಾಗಿದೆ. ಒಕ್ಕೂಟ ವ್ಯವಸ್ಥೆಯ ೨೨ಭಾಷೆಗಳಿಗೂ ಸಮಾನ ಸ್ಥಾನಮಾನಗಳಿದ್ದು, ದಕ್ಷಿಣ ಭಾರತವೂ ಸೇರಿದಂತೆ ದೇಶಾದ್ಯಂತ ಹಿಂದಿ ಉತ್ತೇಜಿಸಲು ರಾಜ್ಯಭಾಷಾ ಸಂಸತ್ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಸಲಹೆ ನೀಡಿದ್ದು, ಅವು ಕನ್ನಡವೂ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಿದೆ. ಇದು ಬಾಯಿಯಲ್ಲಿ ಹಿಂದಿ ಹೇರಿಕೆ ಮಾಡುವುದಿಲ್ಲವೆಂಬ ಸರ್ಕಾರದ ವಾದಕ್ಕೆ ಬಗಲಲ್ಲಿರುವ ದೊಣ್ಣೆಯಾಗಿದೆ. ಇದುವರೆಗೂ ಅಂತಹ ಬಂಬತ್ತು ವರದಿಗಳ ಮಾಹಿತಿಯು ರಾಜ್ಯಭಾಷಾ ಜಾಲತಾಣಗಳಲ್ಲಿ ಲಭ್ಯವಿದೆ. ಕೇಂದ್ರ ಸರ್ಕಾರದ ಈ ಧೋರಣೆಯ ಹಿಂದಿ ಸಭೆ ವಿರೋಧಿಸಿ ಹೋರಾಟ ನಡೆಸಿದ ಬೆಂಗಳೂರಿನ ೪೧ ಜನ ಕರವೇ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡನೀಯ ಎಂದರು.ಶ್ರೀ ಕನಕದಾಸ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಕೃತಿ ದಹನ ಮಾಡಿ ಬೃಹತ್ ಪ್ರತಿಭಟನೆ ಜರುಗಿತು. ಸರ್ಕಾರವು ಕೂಡಲೇ ಬಂಧಿತ ಕರವೇ ಕಾರ್ಯಕರ್ತರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಘಟಕದ ಮಹಿಳಾ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ, ಜಿಲ್ಲಾ ಉಪಾಧ್ಯಕ್ಷ ಸುರೇಶ ಪಾಟೀಲ, ಜಿಲ್ಲಾ ಸಂಚಾಲಕ ಸಂಗಮೇಶ ಗುರಿಕಾರ, ಕುಷ್ಟಗಿ ಅಧ್ಯಕ್ಷ ಪ್ರಕಾಶ ಮನ್ನೆರಾಳ, ಕುಕನೂರು ಅಧ್ಯಕ್ಷ ರಮೇಶ ಚಂಡೂರು, ಗೌರವಾಧ್ಯಕ್ಷ ಆದಪ್ಪ ಉಳಾಗಡ್ಡಿ, ನಗರಾಧ್ಯಕ್ಷ ಫ್ರಪುಲ ಪಾಟೀಲ, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ಪ್ರಕಾಶ ಜೋಷಿ, ವೆಂಕಟೇಶ ತಟ್ಟಿ, ಹನುಮಂತಪ್ಪ ಜೀರಾಳ, ಸಂಜೀವಸಿಂಗ್ ಹಜಾರೆ, ದೇವೆಂದ್ರಪ್ಪ, ಚನ್ನಪ್ಪ ನಾಲಗಾರ, ಮುದ್ದಪ್ಪ ಬಹದ್ದೂರಬಂಡಿ, ಮಹಾಂತೇಶ ಯಲ್ಲಾಪೂರ, ಹನುಮಂತ ಚಂಡೂರು, ಮಾಸಪ್ಪ ಮ್ಯಾಗಳಮನಿ, ಶಂಕ್ರಮ್ಮ ಗೊರೆಬಾಳ, ಗಂಗಮ್ಮ ಕುಂಬಾರ, ಅನೇಕರಿದ್ದರು.