ಹೊಸಕೋಟೆ: ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ರಾತ್ರಿ ವೇಳೆ ಕಳವು ಮಾಡುತ್ತಿದ್ದ ಕುಖ್ಯಾತ ಮನೆಗಳ್ಳರಿಬ್ಬರನ್ನ ತಿರುಮಲಶೆಟ್ಟಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಇಮ್ತಿಯಾಜ್ ಅಹಮದ್ ತಾಲೂಕಿನ ಸಮೇತನಹಳ್ಳಿ ಗ್ರಾಮದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ನೆಲೆಸಿದ್ದ. ರಾತ್ರಿ ವೇಳೆ ಬೈಕಲ್ಲಿ ತೆರಳುವ ಈತ ಬೀಗ ಹಾಕಿರುವ ಮನೆಗಳ ಬೀಗ ಮುರಿದು ಚಿನ್ನಾಭರಣ, ನಗದು ದೋಚುತ್ತಿದ್ದ.
ಕುದುರೆ ಜೂಜಿಗಾಗಿ ಹಣ:ಕಳವು ಮಾಡುತ್ತಿದ್ದ ಚಿನ್ನವನ್ನು ತನ್ನ ಸ್ನೇಹಿತೆ ನಗೀನತಾಜ್ಗೆ ಕೊಟ್ಟು ಅವಳ ಮುಖಾಂತರ ಬ್ಯಾಂಕ್, ಜ್ಯೂವೆಲ್ಲರಿ, ಗಿರವಿ ಅಂಗಡಿಗಳಲ್ಲಿ ಅಡಮಾನ ಇಡುವುದು ಹಾಗೂ ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣದಿಂದ ಕುದುರೆ ರೇಸು ಮೋಜು-ಮಸ್ತಿ ಮಾಡುತ್ತಿದ್ದ.
ಮನೆಗಳ್ಳತನ ಮಾಡುತ್ತಿದ್ದ ಇಮ್ತಿಯಾಜ್ ಅಹಮದ್ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಠಾಣೆಯಲ್ಲಿ 10, ಅನುಗೊಂಡನಹಳ್ಳಿ ವ್ಯಾಪ್ತಿಯಲ್ಲಿ 5 ಸೇರಿದಂತೆ ಬೆಂಗಳೂರಿನ ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ಸುಬ್ರಮಣ್ಯಪುರ, ಮೈಕೋಲೇಔಟ್ ಜೀವನ್ ಭೀಮಾ ನಗರ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗಳ 42 ಕಳವು ಪ್ರಕರಣಗಳ ಆರೋಪಿಯಾಗಿದ್ದಾನೆ.
ಕಳೆದ 10 ತಿಂಗಳ ಹಿಂದೆ ಕಳವು ಪ್ರಕರಣದಲ್ಲಿ ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದರು. ಮತ್ತೇ ಜಾಮೀನು ಮೇಲೆ ಹೊರಬಂದಿದ್ದ, ಬಳಿಕ ಸಮೇತನಹಳ್ಳಿ ಬಳಿ ನೆಲೆಸಿದ್ದ. ಮತ್ತೆ ತನ್ನ ಅದೇ ಕಸುಬನ್ನು ಮುಂದುವರಿಸಿ 15 ಕಡೆ ಕಳ್ಳತನ ಮಾಡಿದ್ದ. ಶಂಕರ್ಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕಲ್ಲಪ್ಪ ಎಸ್. ಖರಾತ, ಪಿಎಸ್ಐ ನಾರಾಯಣಸ್ವಾಮಿ, ಸಿಬ್ಬಂದಿ ವೆಂಕಟೇಶಯ್ಯ, ನರಸಿಂಹಯ್ಯ, ಶಿವರಾಜ್, ಮುರ್ತುಜ, ಜಹಾಂಗೀರ್ ಬಾಬು, ಲಕ್ಷ್ಮಿಕಾಂತ್, ದೇವೇಂದ್ರ ಬಡಿಗೇರ್, ಸುನಿತಾ ಬಣ್ಣದ್, ನಾಗೇಶ್, ಉಮೇಶ್ ಅವರನ್ನು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಪುರುಷೋತ್ತಮ್ ಅಭಿನಂದಿಸಿದ್ದಾರೆ.ಫೋಟೋ : 20 ಹೆಚ್ಎಸ್ಕೆ 1ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಪೊಲೀಸರು ಕುಖ್ಯಾತ ಮನೆಗಳ್ಳನನ್ನು ಬಂಧಿಸಿ, 629 ಗ್ರಾಂ ಚಿನ್ನ ಹಾಗೂ 719 ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.