ಮರಿಯಮ್ಮನಹಳ್ಳಿ: ಕಲಾವಿದರು ಮೊದಲು ಶಿಸ್ತು ಮತ್ತು ಸಮಯ ಪಾಲನೆಯನ್ನು ರೂಢಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹೇಳಿದರು.
ನಿರಂತರ ಅಭ್ಯಸದೊಂದಿಗೆ ಕಲೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಪ್ರತಿಭಾವಂತ ಕಲಾವಿದರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ. ಕಲಾವಿದರು ರಂಗಭೂಮಿ ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡರೆ ರಂಗಭೂಮಿ ಕಲಾವಿದರಿಗೆ ಉತ್ತಮ ಸ್ಥಾನಮಾನ ಕಲ್ಪಿಸಿಕೊಡುತ್ತದೆ. ಹಣವನ್ನು ಯಾವುದೇ ರೀತಿಯಿಂದ ಸಂಪಾದಿಸಬಹುದು. ಆದರೆ ಹೆಸರು ಸಂದಾಪನೆ ಮಾಡಬೇಕಾದರೆ ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಶ್ರದ್ಧೆ ಇದ್ದಾಗ ಮಾತ್ರ ಹೆಸರು ಸಂಪಾದಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕಲಾವಿದರು ಉತ್ತಮ ಹೆಸರು ಸಂಪಾದನೆ ಮಾಡಲು ಮುಂದಾಗಬೇಕು ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹಾಗೂ ಹಿರಿಯ ರಂಗಕಲಾವಿದೆ ಡಾ.ಕೆ.ನಾಗರತ್ನಮ್ಮ ಮಾತನಾಡಿ, ರಂಗ ಕಲೆ ಜೀವಂತಿಕೆಗೆ ಕಲಾವಿದರ ಕೊಡುಗೆ ಅಪಾರವಾಗಿದೆ. ನಾಟಕಗಳು ಸಮಾಜ ತಿದ್ದುವ ಕಾರ್ಯ ಮಾಡುತ್ತದೆ. ನಾಟಕ ಕಲೆ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದರು.ರಂಗ ನಿರ್ದೇಶಕ ಬಿ.ಎಂ.ಎಸ್. ಪ್ರಭು, ಪತ್ರಕರ್ತ ಹಾಗೂ ರಂಗಕಲಾವಿದ ಸಿ.ಕೆ. ನಾಗರಾಜ, ಮಸಾರಿ ನೆಲ್ಕುದ್ರಿಯ ರಂಗಲೋಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಎಂ.ಮಹಾಂತೇಶ್ ಸಭೆಯಲ್ಲಿ ಮಾತನಾಡಿದರು.