ಪರ್ಕಳ: ಮೊಬೈಲ್ ಬಳಕೆಯಿಂದಾಗಿ ನಕಾರಾತ್ಮಕ ಮನೋಭಾವ ಬೇರುಬಿಟ್ಟು, ಮಕ್ಕಳನ್ನು ಪ್ರಗತಿ ಪಥದಿಂದ ತಪ್ಪು ದಾರಿಯತ್ತ ಸರಿಸುವ ಅಪಾಯ ಹೆಚ್ಚಾಗಿದೆ. ಹದಿಹರೆಯ ಪ್ರವೇಶಿಸುವಷ್ಟರಲ್ಲಿ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ದಿಕ್ಕು ತಪ್ಪಿದ ಮಕ್ಕಳನ್ನು ಹೊರತರುವ ಶಕ್ತಿ ಚಿತ್ರಕಲೆ, ಸಂಗೀತ, ಕ್ರೀಡೆ ಹಾಗೂ ಇತರೆ ಸೃಜನಾತ್ಮಕ ಹವ್ಯಾಸಗಳಿಗಿದೆ. ಅವು ನಕಾರಾತ್ಮಕತೆಯನ್ನು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸುತ್ತವೆ ಎಂದು ಡಾ. ಎ.ವಿ. ಬಾಳಿಗಾ ಆಸ್ಪತ್ರೆ, ದೊಡ್ಡಣಗುಡ್ಡೆಯ ವೈದ್ಯಕೀಯ ಅಧೀಕ್ಷಕ ಹಾಗೂ ಖ್ಯಾತ ಮನೋವೈದ್ಯ ಡಾ. ಪಿ. ವೆಂಕಟ್ರಾಯ ಭಂಡಾರಿ ಹೇಳಿದ್ದಾರೆ.
ಇಲ್ಲಿನ ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಸುವರ್ಣ ವರ್ಷಾಚರಣೆಯ ಅಂಗವಾಗಿ, ಜನಮೆಚ್ಚಿದ ಶಿಕ್ಷಕ ದಿ. ಶಂಕರ್ ಕುಲಾಲ್ ಅವರ ಸ್ಮರಣಾರ್ಥ ಆಯೋಜಿಸಿದ್ದ ಸುವರ್ಣ ಹರುಷಚಿಣ್ಣರ ಚಿತ್ರ ರಚನಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಮುಖ್ಯ ಅತಿಥಿ, ಉಡುಪಿ ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ, ಹಿರಿಯ ಚಿತ್ರಕಲಾವಿದ ರಮೇಶ್ ರಾವ್ ಮಾತನಾಡಿ, ಚಿತ್ರಕಲೆ ನಮ್ಮನ್ನು ಕಲ್ಪನಾತೀತ ಲೋಕಕ್ಕೆ ಕರೆದೊಯ್ಯುವ ಅಲೌಕಿಕ ಶಕ್ತಿ ಹೊಂದಿದೆ. ಮನದಂಗಳದಲ್ಲಿ ಸಂತಸದ ಹೂಗಳನ್ನು ಅರಳಿಸಿ, ನೋವು,ದುಗುಡಗಳನ್ನು ದೂರ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಚಿತ್ರಕಲೆಯನ್ನು ಹವ್ಯಾಸವನ್ನಾಗಿ ಸ್ವೀಕರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ರಾಮಮೂರ್ತಿ ಭಟ್ ಮಾತನಾಡಿ, ಚಿತ್ರಕಲಾ ಸ್ಪರ್ಧೆಗಳು ಮಕ್ಕಳ ಏಕತಾನತೆಯನ್ನು ಕರಗಿಸಿ, ಒತ್ತಡದಿಂದ ಮುಕ್ತಗೊಳಿಸುವ ಶಕ್ತಿಯುತ ವೇದಿಕೆಯಾಗಿದೆ ಎಂದರು.ಮಣಿಪಾಲದ ಚಿತ್ರ ಕಲಾವಿದ ಸತೀಶ್ಚಂದ್ರ ಒಂದೇ ಗಂಟೆಯಲ್ಲಿ ರಚಿಸಿದ ಅದ್ಭುತ ಜಲವರ್ಣ ಕಲಾಕೃತಿಯು ಪ್ರೇಕ್ಷಕರ ಹೃದಯ ಗೆದ್ದಿತು.ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಮಣಿಪಾಲ, ಉಡುಪಿ ಆರ್ಟಿಸ್ಟ್ಸ್ ಫೋರಂ ಕಾರ್ಯದಶಿ೯ ಸಕು ಪಾಂಗಾಳ, ಪರ್ಕಳ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ ಹಾಗೂ ಬೆಂಗಳೂರು ಗ್ಲೋಬಲ್ ಎಡ್ಜ್ ಸಾಫ್ಟ್ವೇರ್ ಕಂಪನಿಯ ತಾರಾ ಶಶಾಂಕ್ ಅವರು ಮುಖ್ಯ ಅತಿಥಿಗಳಾಗಿದ್ದರು.
ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮಹೇಶ್ ಪ್ರಭು ವಂದಿಸಿದರು. ಖಜಾಂಚಿ ರವೀಂದ್ರ ಆಚಾರ್ಯ ಬಹುಮಾನ ವಿತರಣೆ ನಿರ್ವಹಿಸಿದರು. ಸ್ಪರ್ಧೆಯಲ್ಲಿ ೩೫೦ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.