ಕನ್ನಡಪ್ರಭ ವಾರ್ತೆ ಮೈಸೂರು
ದೇಶದ ಭವಿಷ್ಯದ ರೂವಾರಿಗಳಾದ ನೀವು ದೇಶ ತಿದ್ದುವ ಒಳ್ಳೆಯ ಪ್ರಾಧ್ಯಾಪಕರಾಗಿ ಎಂದು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಎಸ್. ಅಹಲ್ಯಾ ಕರೆ ನೀಡಿದರು.ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಿಂದ 53 ದಿನ ನಡೆದ ಕೆ -ಸೆಟ್ ಮತ್ತು ಯುಜಿಸಿ- ನೆಟ್ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಅವರು ಮಾತನಾಡಿದರು.
ಭವಿಷ್ಯದ ಪ್ರಾಧ್ಯಾಪಕರಾಗುವ ನೀವು ಮುಂದಿನ ಕುಲಪತಿ, ಕುಲಸಚಿವ, ಪ್ರಾಧ್ಯಾಪಕ, ಪ್ರಾಚಾರ್ಯರು ಇದ್ದೀರಾ, ಖಂಡಿತ ನೀವೆಲ್ಲಾ ಒಳ್ಳೆಯ ಪ್ರಾಧ್ಯಾಪಕರಾಗುತ್ತಿರಾ. ಯಾವುದೇ ಪ್ರತಿಫಲಾಪೇಕ್ಷವಿಲ್ಲದೆ, ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಿ, ನೀವು ಗುರುಗಳಾಗಿ ನಿಮ್ಮಿಂದ ತಿದ್ದುವ ವಿದ್ಯಾರ್ಥಿಗಳಿಗೆ ಸರಿದಾರಿ ತೋರಿಸಿ ಎಂದು ಸಲಹೆ ನೀಡಿದರು.ಇಂದಿನ ಗೂಗಲ್ ಕಾಲದ ಶಿಕ್ಷಣದಲ್ಲಿ ತಂತ್ರಜ್ಞಾನ ಆವರಿಸಿಕೊಂಡಿದೆ. ಆದರೆ, ಕೃತಕ ತಂತ್ರಜ್ಞಾನ (ಎ.ಐ) ಅಥವಾ ಇನ್ಯಾವುದೇ ತಂತ್ರಜ್ಞಾನ ಬಂದರೂ ಪ್ರಾಧ್ಯಾಪಕರ ಸ್ಥಾನ ತುಂಬಲು ಸಾಧ್ಯವಿಲ್ಲ. ಇದೊಂದು ಸದೃಢವಾದ ಕೆಲಸವಾಗಿದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಕೆ- ಸೆಟ್ ಮತ್ತು ಯುಜಿಸಿ- ನೆಟ್ ಪರೀಕ್ಷಾ ತಯಾರಿ ಜೊತೆಗೆ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಕಡೆಗೆ ಗಮನಹರಿಸಿ ನಾಗರಿಕ ಸೇವೆಯಲ್ಲೂ ತೊಡಗಿಸಿಕೊಳ್ಳಿ. ಇಲ್ಲಿನ ತರಬೇತಿ ಶಿಬಿರದಲ್ಲಿ ಬಹುತೇಕ ಮಹಿಳೆಯರೆ ಇದ್ದೀರಾ. ನೀವು ಮನೆಯಲ್ಲೂ ಹಾಗೂ ಸಮಾಜಕ್ಕೂ ಶಿಕ್ಷಕಿಯಾಗಿ ದೇಶವನ್ನು ತಿದ್ದುತಿದ್ದಿರಾ. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು ಎಂದರು.
ವರ್ಷಪೂರ್ತಿ ಓದಿದ್ದನ್ನು ಮೂರು ಗಂಟೆಯಲ್ಲಿ ನಿರೂಪಿಸಬೇಕು. ಪರೀಕ್ಷಾ ವೇಳೆಯ ಆ ಮೂರು ಗಂಟೆ ಸಮಯವೇ ನಿಮ್ಮ ಬದುಕು ರೂಪಿಸುವುದು. ಹೀಗಾಗಿ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಿ. ಸಾಧನೆ ತಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಸಲಹೆ ನೀಡಿದರು.ಎಲ್ಲಾ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಬರವಣಿಗೆ ತುಂಬಾ ಮುಖ್ಯ. ಹೀಗಾಗಿ ಬರೆಯುವುದನ್ನು ರೂಢಿಸಿಕೊಳ್ಳಿ. ಓದುವಾಗ ಜೊತೆ ಜೊತೆಗೆ ಕೀನೋಟ್ಸ್ ಮಾಡುವ ಮೂಲಕ ಬರವಣಿಗೆಯ ಶೈಲಿ ಹೆಚ್ಚಿಸಿಕೊಳ್ಳಿ ಎಂದರು.
ಮುಕ್ತ ವಿವಿ ಪ್ರೊ. ಶರಣಪ್ಪ ವಿ.ಹಲಸೆ ಮಾತನಾಡಿ, ಎಲ್ಲಾ ಭವಿಷ್ಯದ ಪ್ರಾಧ್ಯಾಪಕರಿಗೆ ಶುಭಾಶಯಗಳು. ಇಲ್ಲಿನ ಎಲ್ಲಾ ನುರಿತ ಪ್ರಾಧ್ಯಾಪಕರು ನಿಮಗೆ ಮಾರ್ಗದರ್ಶನ ನೀಡಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ಇಂದಿನ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣದ ಕೊರತೆ ಇದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ನೀವೆಲ್ಲಾ ಸಜ್ಜುಗೊಳ್ಳಬೇಕು. ಗುಣಮಟ್ಟದ ಶಿಕ್ಷಣದಿಂದ ದೇಶಕ್ಕೆ ಉನ್ನತವಾದ ಸಂಶೋಧಕರು ಸಿಗುತ್ತಾರೆ. ವಿದ್ಯಾರ್ಥಿಗಳು ನಿಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಜೊತೆಗೆ ಆತ್ಮಾವಲೋಕನ ಮಾಡಿಕೊಂಡು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ವಿವಿ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಮಾತನಾಡಿ, ನಮ್ಮ ಕರ್ನಾಟಕ ರಾಜ್ಯ ಮುಕ್ತ ವಿವಿಯ ನ್ಯಾಕ್ನಿಂದ ಎ+ಮಾನ್ಯತೆ ಪಡೆದಿದೆ. ಇದಕ್ಕೆ ನಮ್ಮ ಕುಲಪತಿಗಳ ಶ್ರಮ ದೊಡ್ಡದು. ಇಂತಹ ವಿವಿಯ ಪರಿಸರದಲ್ಲಿ ತರಬೇತಿ ಪಡೆದ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದರು.ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್. ವಿಶ್ವನಾಥ್, ಶೈಕ್ಷಣಿಕ ಡೀನ್ ಪ್ರೊ. ರಮಾನಾಥಂ ನಾಯ್ಡು, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಹಾಯಕ ಪ್ರಾಧ್ಯಾಪಕರಾದ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್, ಡಾ.ಶೈಲೇಶ್ ರಾಜೇ ಅರಸ್, ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್, ವಿಶೇಷಾಧಿಕಾರಿ ಮಹದೇವ, ಹಿರಿಯ ಪ್ರಾಧ್ಯಾಪಕ ಎನ್.ಎನ್. ಪ್ರಹ್ಲಾದ, ಸಿಬ್ಬಂದಿ ಗಣೇಶ್ ಕೆ.ಜಿ. ಕೊಪ್ಪಲು, ಸಿದ್ದೇಶ್ ಹೊನ್ನೂರು ಇದ್ದರು.