ಕನ್ನಡಪ್ರಭ ವಾರ್ತೆ ಮೈಸೂರು
3ನೇ ದಿನದ ಕಾರ್ಯಕ್ರಮದಲ್ಲಿ ಎಂದಿನಂತೆ ಕಿಕ್ಕಿರಿದ ಜನಸಾಗರದಿಂದ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಎತ್ತಿಹಿಡಿಯುವ 57 ಕಲಾ ತಂಡಗಳಿಂದ ಕಾರ್ಯಕ್ರಮಗಳು ಅದ್ಧೂರಿಯಾಗಿ ಪ್ರದರ್ಶನಗೊಂಡಿತು.
ಯುವ ಸಂಭ್ರಮದಲ್ಲಿ ತಿಲಕ್ ನಗರ ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ವತಿಯಿಂದ ಹಿಂದುಳಿದ ವರ್ಗದ ನಾಯಕ ಡಿ. ದೇವರಾಜ ಅರಸು ಅವರ ಸಾಧನೆಯ ನೃತ್ಯ ಪ್ರದರ್ಶನ ಎಲ್ಲರ ಮನಸೆಳೆಯಿತು.ಚಾಮರಾಜನಗರದ ವೈ.ಎಂ. ಮಲ್ಲಿಕಾರ್ಜುನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಮಹಾನ್ ದೇಶಭಕ್ತ ನಾಡಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿತು ಪ್ರದರ್ಶನ, ನಗರದ ಹುಣಸೂರ ತಾಲೂಕಿನ ವಿ. ಎಸ್.ಎಸ್ ಪ್ರಥಮ ದರ್ಜೆ ಕಾಲೇಜಿನಿಂದ ರಾಷ್ಟ್ರೀಯ ಭಾವೈಕ್ಯತೆ ವಿವಿಧತೆಯಲ್ಲಿ ಏಕತೆ ಹಾಗೂ ನಗರದ ಜಯಲಕ್ಷ್ಮಿಪುರಂನ ವಿವೇಕಾನಂದ ಪದವಿ ಪೂರ್ವ ಕಾಲೇಜುನಿಂದ ಸಂವಿಧಾನ ಮತ್ತು ಶಾಸನಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರದರ್ಶಿಸಿದರು.
ದಸರಾ ಮಹೋತ್ಸವದಲ್ಲಿ ಜಾನಪದ ಕಲಾವಿದರ ಬಗ್ಗೆ ನಿರ್ಲಕ್ಷ್ಯ ತೋರಿಸಲಾಗುತ್ತಿದೆ ಎಂದು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಉಡಿಗಾಲ ಮಹದೇವಪ್ಪ ಆರೋಪಿಸಿದ್ದಾರೆ.ಜಾನಪದ ಕಲಾವಿದರನ್ನು ಯಾವುದೇ ಸಮಿತಿಗೆ ನೇಮಿಸುವುದಿಲ್ಲ. ಯುವ ದಸರಾ, ಅರಮನೆ ಸಂಗೀತೋತ್ಸವ ಮತ್ತಿತರ ಕಾರ್ಯಕ್ರಮಗಳಿಗೆ ಕಲಾವಿದರಿಗೆ ಲಕ್ಷಾಂತರ ಸಂಭಾವನೆ ನೀಡಿ ಕರೆಸಿಕೊಳ್ಳುವ ಜಿಲ್ಲಾಡಳಿತ ಜಾನಪದ ಕಲಾವಿದರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡುವುದಿಲ್ಲ. ಸಂಭಾವನೆ ಕೂಡ ಅತ್ಯಂತ ಕಡಿಮೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.
ದಸರಾ ಜನರ ಹಬ್ಬವಾಗಬೇಕೆ ಹೊರತು ಅಧಿಕಾರಿಗಳ ದರ್ಬಾರ್ ಆಗಬಾರದು. ಜಂಬೂಸವಾರಿಯಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೆ ಐದು ಸಾವಿರ ರು, ಸಂಭಾವನೆ, ಊಟ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ಆಗ್ರಹಿಸಿದರು. ಒಕ್ಕೂಟದ ಉಪಾಧ್ಯಕ್ಷ ಕಂಸಾಳೆ ರವಿ, ಸಂಘಟನಾ ಕಾರ್ಯದರ್ಶಿ ರೇವಣ್ಣ, ಕಾರ್ಯದರ್ಶಿ ಕಿರಾಳು ಮಹೇಶ್, ಖಜಾಂಚಿ ಮಲ್ಲೇಶಪ್ಪ, ಗಜೇಂದ್ರ ಇದ್ದರು.