ಯಲಬುರ್ಗಾ: ವಿವಿಧ ಬೇಡಿಕೆ ಈಡೇರಿಸಿವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ತಾಲೂಕು ಸಮಿತಿಯ ಆಶಾ ಕಾರ್ಯಕರ್ತೆಯರು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಡಾ. ವಿದ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷೆ ಶಂಕ್ರಮ್ಮ ಹಳ್ಳಿಕೇರಿ ಮಾತನಾಡಿ, ಆಶಾ ಕಾರ್ಯಕರ್ತೆಯರ ಮೇಲೆ ನಿರಂತರವಾಗಿ ಇಲಾಖೆಯ ಬೇರೆ ಬೇರೆ ಕೆಲಸಗಳ ಹೊರೆ ಹಾಕುತ್ತಿದ್ದು, ಅದಕ್ಕೆ ತಕ್ಕ ವೇತನ ಅಥವಾ ಪ್ರೋತ್ಸಾಹಧನ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಅನುಮೋದನೆ ಹಾಗೂ ಅನುದಾನವಿಲ್ಲದ ೯ ಚಟುವಟಿಕೆಗಳನ್ನು ಆಶಾ ಕಾರ್ಯಕರ್ತೆಯರ ಮೇಲೆ ಹೇರಿರುವುದು ಖಂಡನೀಯ. ಸರ್ಕಾರ ಈ ಕುರಿತು ಸ್ಪಷ್ಟ ಆದೇಶ ಹೊರಡಿಸಿ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಿಪ್ಪಮ್ಮ, ಮಹಾದೇವಿ, ಸುನಂದಾ, ಶೋಭಾ, ಸಕ್ರವ್ವ, ರೇಖಾ, ನಾಗಮ್ಮ, ರಾಜೇಶ್ವರಿ, ಅನ್ನಪೂರ್ಣ, ಶಿವಮ್ಮ, ದೇವಕ್ಕ, ಲತಾ, ಗೀತಾ, ಅಕ್ಕಮಹಾದೇವಿ, ಲಕ್ಷ್ಮಿ, ವಿಜಯಲಕ್ಷ್ಮೀ, ಶಶಿಕಲಾ, ಕರಿಯಮ್ಮ, ಅಲಿಮಾ, ಶಾಂತಮ್ಮ,ಶಕುಂತಲಾ, ಶರಣಮ್ಮ, ಪದ್ಮಾವತಿ, ನೀಲವ್ವ, ಲಕ್ಷ್ಮೀದೇವಿ ಸೇರಿದಂತೆ ನೂರಾರು ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.