ಕನ್ನಡಪ್ರಭ ವಾರ್ತೆ ರಾಯಚೂರು
ದೇವದುರ್ಗ ಪೊಲೀಸ್ ಠಾಣೆಗಳ ವಿವಿಧ ವಿಭಾಗಗಳ ಒಟ್ಟು 59 ಪೊಲೀಸರು ಒಕ್ಕೊರಲಿನ ಮನವಿ ಸಲ್ಲಿಸಿದ್ದಾರೆ. ದೇವದುರ್ಗದ ಕಾನೂನು ಸುವ್ಯವಸ್ಥೆ ವಿಭಾಗದ 36 ಹಾಗೂ ಸಂಚಾರಿ ಠಾಣೆಯ 23 ಮುಖ್ಯಪೇದೆ, ಪೇದೆಗಳು ಸೇರಿಕೊಂಡು ಎಸ್ಪಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ದೇವದುರ್ಗ ತಾಲೂಕಿನಲ್ಲಿ ಜೂಜಾಟ, ಅಕ್ರಮ ಮರಳು ದಂಧೆ, ಇಸ್ಪೀಟ್, ಮಟಕಾ, ಕೋಳಿ ಪಂದ್ಯ, ಐಎಂವಿ, ಡಿಡಿ ಪ್ರಕರಣಗಳಲ್ಲಿ ದಾಳಿ ಮಾಡಿದಾಗ ಯಾರನ್ನೇ ಹಿಡಿದುಕೊಂಡು ಬಂದರೂ ನಮ್ಮನ್ನು ಕೇಳಬೇಕು. ಪ್ರಕರಣ ದಾಖಲಿಸುವಾಗ ನಮ್ಮ ಬೆಂಬಲಿಗರು ಹೌದೋ ಅಲ್ಲವೋ ಎಂದು ಖಚಿತಪಡಿಸಬೇಕು ಎಂದು ಶಾಸಕರು ತಿಳಿಸುತ್ತಿದ್ದಾರೆ. ನಮ್ಮ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡ್ತಾರೆ ಎಂದು ಪೊಲೀಸರು ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.ಶಾಸಕಿ ಕರೆಮ್ಮ ಜಿ.ನಾಯಕ ವರ್ತನೆಯಿಂದ ನೈತಿಕ ಸ್ಥೈರ್ಯ ಕುಸಿದು, ಮಾನಸಿಕ ಯಾತನೆ ಅನುಭವಿಸುತ್ತಿದ್ದೇವೆ. ಜೀವದ ಭಯದಲ್ಲಿ ನಾವು ಕೆಲಸ ಮಾಡುವಂತಾಗಿದೆ. ಒಂದು ವೇಳೆ ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ಸಿಬ್ಬಂದಿ ವರ್ಗಾವಣೆ ಅಥವಾ ಅಮಾನತಾದರೆ ನಮ್ಮ ಕುಟುಂಬ ಆತಂಕಕ್ಕೆ ಒಳಗಾಗಬಹುದು. ಒಂದು ವೇಳೆ ಶಿಸ್ತು ಕ್ರಮ ಜರುಗಿಸುವುದಾದರೆ, ದೇವದುರ್ಗ ಠಾಣೆಯ ಎಲ್ಲ ಸಿಬ್ಬಂದಿಯನ್ನು ಸಾಮೂಹಿಕ ವರ್ಗಾವಣೆ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ನಿಖಿಲ್ ಬಿ., ದೇವದುರ್ಗದ ಪೊಲೀಸರು ಕಚೇರಿಯ ಇನ್ ವಾರ್ಡ್ನಲ್ಲಿ ದೂರು ನೀಡಿದ್ದು, ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.