ಕನ್ನಡಪ್ರಭ ವಾರ್ತೆ ಅಥಣಿ
ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದಿ ನೇತೃತ್ವದಲ್ಲಿ ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐ ಶಿವಾನಂದ ಕಾರಜೋಳ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕ ದುಂಡಪ್ಪ ನಾಯ್ಕೋಡಿ ಜಂಟಿಯಾಗಿ ಅಥಣಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ರಸ್ತೆಗೆದು ಕಬ್ಬು ಸಾಗಿಸುವ ವಾಹನಗಳನ್ನು ತಡೆದು ವಾಹನದ ದಾಖಲಾತಿ, ಚಾಲಕರ ಚಾಲನಾ ಪರವಾನಿಗೆ ಪರಿಶೀಲಿಸಿದರು. ಈ ವೇಳೆ 16 ವರ್ಷದ ಅಪ್ರಾಪ್ತ ಟ್ರ್ಯಾಕ್ಟರ್ ಚಾಲನೆ ಮಾಡಿರುವುದು ಪತ್ತೆಯಾಯಿತು. ದಾಖಲೆಯಿಲ್ಲದ ಮತ್ತು ಚಾಲನಾ ಪರವಾನಿಗೆ ಇಲ್ಲದವರ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ನಿಯಮ ಪಾಲಿಸದ ವಾಹನಗಳಿಂದ ಕಳೆದ ಎರಡು ತಿಂಗಳಲ್ಲಿ ಅಪಘಾತಗಳು ಸಂಭವಿಸಿ ಹತ್ತು ಜನ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಗಳು ಮತ್ತು ಕಬ್ಬುಸಾಗಿಸುವ ವಾಹನಗಳ ಮಾಲೀಕರ ಸಭೆ ನಡೆಸಿ ತಿಳುವಳಿಕೆ ನೀಡಲಾಗಿದೆ. ಆದರೂ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಹೇಳಿದರು.--
ಟ್ರ್ಯಾಕ್ಟರ್ ಮಾಲೀಕರು ಮತ್ತು ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ವಾಹನದ ದಾಖಲೆ ಮತ್ತು ಚಾಲನಾ ಪರವಾನಿಗೆ ಇಲ್ಲದ ಚಾಲಕರ ಮತ್ತು ಮಾಲೀಕರು ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಬೈಕ್ ಸವಾರರು ಕೂಡ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. - ಶ್ರೀಪಾದ ಜಲ್ದೆ, ಡಿವೈಎಸ್ಪಿ ಅಥಣಿ.