ರೇಣುಕಾಚಾರ್ಯ, ಇತರರ ಮೇಲೆ ಹಲ್ಲೆ: ಹಲವರ ವಶ, ಬಿಡುಗಡೆ

KannadaprabhaNewsNetwork | Updated : Jun 26 2025, 01:41 PM IST

  ನಗರದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-48 ತಡೆ ನಡೆಸಿದ ವೇಳೆ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾಕಾರರ ಮಧ್ಯೆ ತೀವ್ರ ವಾಕ್ಸಮರ ನಡೆದಿದೆ. ಅಲ್ಲದೇ, ರೇಣುಕಾಚಾರ್ಯ, ಚಂದ್ರಶೇಖರ ಪೂಜಾರ ಸೇರಿದಂತೆ ಅನೇಕರಿಗೆ ರಕ್ತಗಾಯ, ತರಚು ಗಾಯಗಳಾದ ಘಟನೆ ಸಂಭವಿಸಿದೆ.

 ದಾವಣಗೆರೆ :  ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ನೆರೆ ಜಿಲ್ಲೆಗಳಿಗೆ ನೀರೊಯ್ಯುವ ಅವೈಜ್ಞಾನಿಕ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತಿತರ ಮುಖಂಡರ ನೇತೃತ್ವದಲ್ಲಿ ನಗರದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-48 ತಡೆ ನಡೆಸಿದ ವೇಳೆ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾಕಾರರ ಮಧ್ಯೆ ತೀವ್ರ ವಾಕ್ಸಮರ ನಡೆದಿದೆ. ಅಲ್ಲದೇ, ರೇಣುಕಾಚಾರ್ಯ, ಚಂದ್ರಶೇಖರ ಪೂಜಾರ ಸೇರಿದಂತೆ ಅನೇಕರಿಗೆ ರಕ್ತಗಾಯ, ತರಚು ಗಾಯಗಳಾದ ಘಟನೆ ಸಂಭವಿಸಿದೆ.

ಬಾಡಾ ಕ್ರಾಸ್ ಬಳಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಮೀಪ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಮುಖಂಡರಾದ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಧನಂಜಯ ಕಡ್ಲೇಬಾಳು ಸೇರಿದಂತೆ ನೂರಾರು ಜನರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುತ್ತಿದ್ದರು. ಇದರಿಂದ ಪುಣೆ-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸುಮಾರು ಹೊತ್ತು ಅಡ್ಡಿಯಾಗಿತ್ತು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳ ಕೂಗುತ್ತ ಹೆದ್ದಾರಿಯತ್ತ ಧಾವಿಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸ್‌ ಇಲಾಖೆ ಬ್ಯಾರಿಕೇಡ್‌ಗಳನ್ನು ಅಡ್ಡವಿಟ್ಟು, ಸೂಕ್ತ ಮುನ್ನೆಚ್ಚರಿಕೆ ಸಹ ವಹಿಸಿತ್ತು. ಹೆದ್ದಾರಿ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೆದ್ದಾರಿ ಬಂದ್ ಹೋರಾಟ ಕೈಬಿಡುವಂತೆ ಪೊಲೀಸ್ ಅಧಿಕಾರಿಗಳು ರೇಣುಕಾಚಾರ್ಯ ಇತರರ ಮುಖಂಡರ ಮನವೊಲಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಪ್ರತಿಭಟನಾನಿರತರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗುತ್ತಿದ್ದಂತೆಯೇ ಹೆದ್ದಾರಿಯಲ್ಲೇ ಹೈಡ್ರಾಮಾ ನಡೆಯಿತು. ಕೆಲವರು ಧರಣಿ ಕುಳಿತರೆ, ಮತ್ತೆ ಕೆಲವರು ಹೊರಳಾಡಿದರು. ಮತ್ತಷ್ಟು ರೈತರು ಪೊಲೀಸ್ ವಾಹನಗಳ ಮುಂದೆ ಧರಣಿ ಕುಳಿತು ಘೋಷಣೆ ಕೂಗಿದರು.

ಮಾತಿನ ಚಕಮಕಿ ಮಧ್ಯೆಯೇ ಕೆಲ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆಯೇ ಕೆಲವರಿಗೆ ರಕ್ತಗಾಯಗಳಾದರೆ, ರೇಣುಕಾಚಾರ್ಯ, ಚಂದ್ರಶೇಖರ ಪೂಜಾರ, ಲೋಕಿಕೆರೆ ನಾಗರಾಜ ಇತರರಿಗೆ ತೀವ್ರ ತರಚು ಗಾಯಗಳಾಗದವು. ಈ ವಿಚಾರ ತಿಳಿದು ಪ್ರತಿಭಟನಾಕಾರರು ರಾಜ್ಯ ಸರ್ಕಾರ, ನೀರಾವರಿ ಅಧಿಕಾರಿಗಳಲ್ಲದೇ, ಪೊಲೀಸ್ ಅಧಿಕಾರಿಗಳ ವಿರುದ್ಧವೂ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಹಲವರ ಬಂಧಿಸಿ, ಬಿಡುಗಡೆ:

ಭಾರಿ ಹರಸಾಹಸದ ನಂತರ ಪ್ರತಿಭಟನಾನಿರತ ರೇಣುಕಾಚಾರ್ಯ, ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ, ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ಸಂತೋಷ ಪೈಲ್ವಾನ, ಪ್ರವೀಣ ಜಾಧವ್ ಸೇರಿದಂತೆ ಸುಮಾರು 60 ಜನರನ್ನು ಪೊಲೀಸರು ವಶಕ್ಕೆ ಪಡೆದು, ಸೀದಾ ಪೊಲೀಸ್ ಕವಾಯಿತು ಮೈದಾನಕ್ಕೆ ಕರೆತಂದರು. ಡಿಎಆರ್ ಮೈದಾನದಲ್ಲೂ ಪ್ರತಿಭಟನೆ ಮುಂದುವರಿಯಿತಲ್ಲದೇ, ಜಿಲ್ಲಾಧಿಕಾರಿಗಳು ಸ್ವತಃ ಸ್ಥಳಕ್ಕೆ ಬಂದು, ತಮ್ಮ ಅಹವಾಲು ಆಲಿಸಬೇಕು ಎಂಬುದಾಗಿ ರೇಣುಕಾಚಾರ್ಯ ಇತರರು ಪಟ್ಟು ಹಿಡಿದು ಕುಳಿತರು. ಸಂಜೆ ವೇಳೆಗೆ ಪೊಲೀಸರು ತಮ್ಮ ‍ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಿದರು.

* ಡಿಸಿ, ಎಸ್‌ಪಿ ಸ್ಥಳಕ್ಕೆ ಆಗಮಿಸಲು ಪಟ್ಟು

ದಾವಣಗೆರೆ: ದಾವಣಗೆರೆ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಹೆದ್ದಾರಿ ತಡೆ ನಡೆಸಿದ್ದ ವೇಳೆ ಪೊಲೀಸರು ತಮ್ಮೆಲ್ಲರ ಮೇಲೆ ದೌರ್ಜನ್ಯ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾರ್ಯ ತಮ್ಮ ಕುತ್ತಿಗೆ, ಕೈ, ಎದೆ ಭಾಗಕ್ಕೆ ಆದ ತರಚು ಗಾಯಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪೊಲೀಸ್ ಕವಾಯಿತು ಮೈದಾನದ ಆವರಣದಲ್ಲೇ ಬುಧವಾರ ಪ್ರತಿಭಟಿಸಿದ ಅವರು, ತಮಗೆ, ಚಂದ್ರಶೇಖರ ಪೂಜಾರ ಇತರರಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಳ್ಳಾಟ, ನೂಕಾಟದಲ್ಲಿ ಆದ ಹಲ್ಲೆ, ತರಚು ಗಾಯಗಳನ್ನು ಪ್ರದರ್ಶಿಸುವ ಜೊತೆಗೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾಂಗ್ರೆಸ್ ಸರ್ಕಾರದ ಏಜೆಂಟರಂತೆ ವರ್ತಿಸಿದ್ದಾರೆ ಎಂದರು.

ರೈತಪರ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದು, ತಮ್ಮಗಳ ಮೇಲೆ ಹಲ್ಲೆ ಅಕ್ಷಮ್ಯ. ನಾವು ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ರೈತರ ಪರ ನ್ಯಾಯಯುತ ಹೋರಾಟ ನಡೆಸಿದ್ದ ವೇಳೆ ನಮ್ಮ ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು, ರೈತ ಪರ ಹೋರಾಟವನ್ನು ಹತ್ತಿಕ್ಕುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಸ್ವತಃ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೊಲೀಸ್ ಕವಾಯಿತು ಮೈದಾನಕ್ಕೆ ಬರುವವರೆಗೂ ನಾವ್ಯಾರೂ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದು ಕುಳಿತರು. ಸಂಜೆ 5ರ ಹೊತ್ತಿಗೆ ಸ್ಥಳಕ್ಕೆ ಭೇಟಿ ನೀಡಿದ ಡಿಸಿ, ಎಸ್‌ಪಿ ಬಳಿ ಶಾಂತಿಯುತ ಪ್ರತಿಭಟನೆ ನಡೆಸಿದ್ದವರ ಮೇಲೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ದೌರ್ಜನ್ಯ ಬಗ್ಗೆ ಪ್ರತಿಭಟನಾಕಾರರು ದೂರಿದರು.

ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಏಳು ಅಡಿ ಆಳದಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಯನ್ನು ತಕ್ಷಣ ಕೈಬಿಡಬೇಕು. ಡ್ಯಾಂನ ಬಫರ್ ಝೋನ್‌ನಲ್ಲಿ ಕಾಮಗಾರಿ ಕೈಗೊಳ್ಳುವುದು ನಿಷಿದ್ಧ. ಆದರೂ, ಡ್ಯಾಂಗೆ ಅಪಾಯ ಆಗುವಂತಹ ಕಾಮಗಾರಿ ಕೈಗೊಳ್ಳಲಾಗಿದೆ. ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಅಚ್ಚುಕಟ್ಟು ರೈತರ ಬದುಕು, ಜೀವನ, ನೆಮ್ಮದಿಗೆ ಭಂಗ ತರುವಂತಹ ಇಂತಹ ಕಾಮಗಾರಿ ಕೈಬಿಡುವಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮುಖಾಂತರ ಅವರು ಒತ್ತಾಯಿಸಿದರು.

ಕುಡಿಯುವ ನೀರು ಪೂರೈಸುವುದಕ್ಕೆ ನಮ್ಮ ಅಭ್ಯಂತರವಾಗಲೀ, ತಕರಾರಾಗಲೀ ಇಲ್ಲ. ನಮ್ಮ ಸರ್ಕಾರವಿದ್ದಾಗ ಭದ್ರಾ ಡ್ಯಾಂನ ಹಿನ್ನೀರಿನಿಂದ ನೀರು ಲಿಫ್ಟ್ ಮಾಡುವಂತೆ ಅನುಮೋದನೆ ನೀಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಸದ್ದಲ್ಲದೇ ಭದ್ರಾ ಡ್ಯಾಂಗೆ ಅಪಾಯ ತಂದೊಡ್ಡಿ, ಅಚ್ಚುಕಟ್ಟು ರೈತರ ಬದುಕನ್ನೇ ನಾಶಗೊಳಿಸಲು ನಾವು ಬಿಡುವುದಿಲ್ಲ. ಇದೇ ಜೂ.28ರ ಶನಿವಾರ ದಾವಣಗೆರೆ ಬಂದ್ ಮಾಡಲಿದ್ದೇವೆ. ನಂತರದಲ್ಲಿ ಭದ್ರಾ ಅಚ್ಚುಕಟ್ಟಿಗೆ ಒಳಪಡುವ ತಾಲೂಕುಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ನಮ್ಮೆಲ್ಲರ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಸಹ ದಾವಣಗೆರೆ ಬಂದ್‌ನಲ್ಲಿ ಭಾಗವಹಿಸುವರು. ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು, ವರ್ತಕರು, ಸಾರ್ವಜನಿಕರು, ಆಟೋ ಸೇರಿದಂತೆ ಪ್ರಯಾಣಿಕ ವಾಹನಗಳು, ಗೂಡ್ಸ್ ವಾಹನಗಳ ಚಾಲಕರು, ಮಾಲೀಕರು ಸಹ ನಮ್ಮ ರೈತರ ಹೋರಾಟಕ್ಕೆ ಬೆಂಬಲಿಸಿ, ಯಶಸ್ವಿಗೊಳಿಸಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದರು.

 ಕದ್ದು ಮರಳು ಹೊಡಿಯುತ್ತಿದ್ದ ಚನ್ನಗಿರಿ ಶಾಸಕರಂತೆ ನಾವು ಹಗಲು ದರೋಡೆ ಮಾಡುವುದಿಲ್ಲ. ಅವರ ದಂಧೆ ಏನು ಹೇಳಬೇಕಾ? ನನಗಿಂತಲೂ ನಮ್ಮ ರೈತರು ಚೆನ್ನಾಗಿ ಹೇಳುತ್ತಾರೆ. ನನ್ನ ಕ್ಷೇತ್ರದಲ್ಲೇ ಕದ್ದು ಮರಳು ಹೊಡೆಯುತ್ತಿದ್ದ ಅವರನ್ನು ಬಂಧಿಸಲು ನಾವು ಪ್ರಯತ್ನಿಸಿದಾಗ ಇದೇ ಮಾಡಾಳ್ ಮಲ್ಲಿಕಾರ್ಜುನ ಹೋಗಲಿ ಬಿಡ್ರಣ್ಣಾ ಪಾಪ ಅಂತಾ ತಡೆದಿದ್ದರು. ಯಾವುದೋ ಲಾಟರಿಯಲ್ಲಿ ಗೆದ್ದ ಲಕ್ಕಿ ಅವರು. ಪ್ರಚಾರಕ್ಕೋಸ್ಕರ ಏನೇನೋ ಹೇಳಿಕೆಗಳನ್ನೂ ನೀಡುತ್ತಿದ್ದಾರೆ.

- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ 

Read more Articles on