ಮುಂಡರಗಿ: ಟಿವಿ, ಸಿನಿಮಾ, ಮೊಬೈಲ್ ಯುಗದಲ್ಲಿಯೂ ಪ್ರೇಕ್ಷಕರು ಮತ್ತು ನಾಟಕಾಭಿಮಾನಿಗಳು ಮತ್ತೆ ರಂಗಭೂಮಿಯತ್ತ ಮುಖ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ, ಹವ್ಯಾಸಿ ರಂಗಭೂಮಿ ಕಲಾವಿದ ರಾಮಕೃಷ್ಣ ದೊಡ್ಡಮನಿ ತಿಳಿಸಿದರು.
ರಂಗಭೂಮಿ ಮುಚ್ಚಿಹೋಗುತ್ತಿರುವ ಈ ಸಂದರ್ಭದಲ್ಲಿ ಡಾವಣಗೆರೆಯ ಕೆಬಿಆರ್ ಡ್ರಾಮಾ ಕಂಪನಿ ಕಳೆದ 98 ವರ್ಷಗಳಿಂದ ಅನೇಕ ತೊಂದರೆ, ತಾಪತ್ರಯಗಳನ್ನು ಎದುರಿಸುತ್ತ ಉತ್ತಮ ಹಾಗೂ ಗುಣಮಟ್ಟದ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡುತ್ತಾ ಬಂದಿದೆ. ಇದೀಗ ಮುಂಡರಗಿ ಪಟ್ಟಣಕ್ಕೆ ಬಂದಿದ್ದು, ಎಲ್ಲರೂ ನಾಟಕ ವೀಕ್ಷಿಸಿ ಕಲಾವಿದರನ್ನು ಪ್ರೊತ್ಸಾಹಿಸೋಣ ಎಂದರು.
ಹೋರಾಟಗಾರ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದ ವೈ.ಎನ್. ಗೌಡರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಡರಗಿ ಅನ್ನದಾನೀಶ್ವರರ ನೆಲೆಬೀಡಾಗಿದ್ದು, ಕಲಾವಿದರ, ಕಲಾ ಪೋಷಕರ ನೆಲವಾಗಿದೆ. ಹೀಗಾಗಿ ಇಲ್ಲಿಗೆ ಬರುವ ಎಲ್ಲ ನಾಟಕ ತಂಡಗಳ ನಾಟಕಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸುತ್ತಾ ಬರಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ಕೊಟ್ರೇಶ ಅಂಗಡಿ, ಡಿ.ಡಿ. ಮೋರನಾಳ, ಕೊಟ್ರೇಶ ಅಂಗಡಿ, ಮಂಜುನಾಥ ಮುಂಡವಾಡ, ಶೇಖರ್ ಜುಟ್ಲಣ್ಣವರ, ವಿ.ಎಸ್. ಗಟ್ಟಿ, ಧ್ರುವಕುಮಾರ ಹೊಸಮನಿ, ಚಿಂದೋಡಿ ಶ್ರೀಕಂಟೇಶ್ವರ, ರಾಜಾಭಕ್ಷಿ ಬೆಟಗೇರಿ, ಎ.ಪಿ. ದಂಡಿನ, ಯಲ್ಲಪ್ಪ ಹೂಲಗೇರಿ, ಎಫ್.ಇ. ಮರಿಗೌಡ್ರ, ಈರಣ್ಣ ಕರಿಬಿಷ್ಠಿ ಇತರರು ಇದ್ದರು. ಇದೇ ಸಂದರ್ಭದಲ್ಲಿ ಕೆಬಿಆರ್ ಕಂಪನಿಯಿಂದ ರಂಗಭೂಮಿ ದಿನಾಚರಣೆ ಅಂಗವಾಗಿ ಕಲಾವಿದ ರಾಘವೇಂದ್ರ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು. ಸಂಘದ ವ್ಯವಸ್ಥಾಪಕ ಶಂಬುಲಿಂಗಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ನಿರೂಪಿಸಿ, ವಂದಿಸಿದರು.