ನರೇಗಲ್ಲ: ಮಕ್ಕಳಲ್ಲಿ ಹುದುಗಿರುವ ಆತ್ಮ ಸ್ಥೈರ್ಯವನ್ನು ಜಾಗೃತಗೊಳಿಸುವ ಮೂಲಕ ಪರೀಕ್ಷಾ ಭಯ ಹೊಡೆದೋಡಿಸಿ ಅವರು ಸಂತೋಷದಿಂದ ಪರೀಕ್ಷೆ ಎದುರಿಸುವಂತೆ ಮಾಡುವ ಮಹತ್ಕಾರ್ಯವೇ ಸಾಮರ್ಥ್ಯ ಆಧಾರಿತ ತರಬೇತಿ ಶಿಬಿರ, ಇದನ್ನು ಪ್ರತಿಯೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಆಲಿಸುವುದರಿಂದ ನಿಮ್ಮ ಪರೀಕ್ಷಾ ಭಯ ನಿವಾರಣೆಯಾಗಿ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಬಹುದಾಗಿದೆ ಎಂದು ಮಂಗಳೂರಿನ ಯುನಿವರ್ಸಲ್ ನಾಲೇಡ್ಜ ಮತ್ತು ವಿಕಾಸ ಸೊಸೈಟಿಯ ಸಂಸ್ಥಾಪಕ ರೋಹಾನ್ ಷಿರಿ ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ವಿಷಯ ವಸ್ತು ಅತ್ಯಂತ ಮನಃ ಪೂರ್ವಕವಾಗಿ ಅಧ್ಯಯನ ಮಾಡಲು ತಾವು ಅಭ್ಯಸಿಸುವ ಸ್ಥಳದಲ್ಲಿ ವಿಷಯಕ್ಕೆ ಸಂಬಂಧಿಸಿದ ವಸ್ತು ಅಂಟಿಸಿ, ಅಧ್ಯಯನ ಮಾಡಲು ಅನುವಾಗುವಂತೆ ವಾತಾವರಣ ಸೃಷ್ಟಿಸಿಕೊಳ್ಳಿ. ಪ್ರತಿಯೊಬ್ಬರು ತಮ್ಮಲ್ಲಿರುವ ಆಂತರಿಕ ದುಗುಡ ಹೊಡೆದೊಡಿಸಿ ಆತ್ಮಸ್ಥೈರ್ಯ ಹೊಂದಿ ಇತರರನ್ನು ಹೋಲಿಕೆ ಮಾಡಿಕೊಳ್ಳದೇ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳಿ ದಿನದಿಂದ ದಿನಕ್ಕೆ ನಿಮ್ಮ ಮನಸ್ಸಿನ ಮೇಲಿನ ಹಿಡಿತ ಬಿಗಿಗೊಳಿಸಿಕೊಳ್ಳುವ ಮೂಲಕ ಕೇಂದ್ರಿಕೃತ ಅಧ್ಯಯನ ಕೈಗೊಳ್ಳಿ ದಿನದಿಂದ ದಿನಕ್ಕೆ ನಿಮ್ಮ ಆತ್ಮವಿಶ್ವಾಸ ಇಮ್ಮುಡಿಗೊಳ್ಳುತ್ತದೆ. ಇದರಿಂದ ಪರೀಕ್ಷೆಯನ್ನು ನಿರ್ಭಿತಿಯಿಂದ ಎದುರಿಸಬಲ್ಲಿರಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಈ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳುವ ಮೂಲಕ ನಿರ್ಭಿತಿಯಿಂದ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ಹೊಂದಬೇಕು ಎಂದರು.ಕಾರ್ಯಾಗಾರದಲ್ಲಿ ನರೇಗಲ್ಲ, ಅಬ್ಬಿಗೇರಿ, ಜಕ್ಕಲಿ, ನಿಡಗುಂದಿ, ಹಾಲಕೆರೆ, ಮಾರನಬಸರಿಯಿಂದ ಒಟ್ಟು 11 ಶಾಲೆಯ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರತಿ ಶಾಲೆಯಿಂದ ಇಬ್ಬರು ಶಿಕ್ಷಕರು ಭಾಗವಹಿಸಿದ್ದರು.