ಅಣ್ಣಿಗೇರಿ:
ಬುಧವಾರ ಸಂಜೆ ಪಟ್ಟಣದ ನಿಂಗಮ್ಮ ಎಸ್. ಹೂಗಾರ ಸಮೂಹ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ಕೊಡುಮಾಡುವ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಮಾಜಿಕ ಸಂಘಟನೆ ಮಾಡಿ ಯಾವ ಸ್ವಾರ್ಥವಿಲ್ಲದೆ ರೈತ ಸಂಘಟನೆ, ಕಾರ್ಮಿಕ ಸಮಸ್ಯೆಗಳ ಧ್ವನಿಯಾಗಿ ಹೋರಾಟ ಮಾಡುತ್ತಾ ಪತ್ರಿಕಾ ರಂಗದಲ್ಲೂ ಡಾ. ಸಿದ್ಧನಗೌಡರು ಮುಂಚೂಣಿಯಲ್ಲಿದ್ದಾರೆ. ಅವರಿಗೆ ಅಣ್ಣಿಗೇರಿಯ ನಿಂಗಮ್ಮ ಎಸ್. ಹೂಗಾರ ಶಿಕ್ಷಣ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿರುವುದು ಅಭಿನಂದನಾರ್ಹ ಎಂದರು.ಪ್ರಶಸ್ತಿ ಸ್ವೀಕರಿಸಿದ ಡಾ. ಸಿದ್ದನಗೌಡ ಪಾಟೀಲ, ಸಾಮಾಜಿಕ ಹೋರಾಟ, ಚಳವಳಿಯೇ ನನ್ನ ಬದುಕಿನ ದಾರಿ. ಕನ್ನಡಪರ ಹೋರಾಟ, ಗೋಕಾಕ ಚಳವಳಿ ಮತ್ತು ಪೋಸ್ಕೋ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆಸಿದ ಹೋರಾಟಗಳು ನನಗೆ ಸಾಕಷ್ಟು ಅನುಭವದ ಜತೆಗೆ ಜಯವು ತಂದುಕೊಟ್ಟಿದೆ. ಹಲವು ಹೋರಾಟ, ಚಳವಳಿಯಲ್ಲಿ ನಟ ಡಾ. ರಾಜಕುಮಾರ, ಡಾ. ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಮಹನಿಯರ ಜತೆ ಪಾಲ್ಗೊಂಡ ಆತ್ಮತೃಪ್ತಿ ನನಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಶ್ರೀ ಮಾತನಾಡಿ, ಕನ್ನಡ ನಾಡು, ನುಡಿಯ ಬಗ್ಗೆ ಕಾಳಜಿ, ಪ್ರೀತಿ ಹೊಂದಿರುವ ಡಾ. ಸಿದ್ಧನಗೌಡ ಪಾಟೀಲರಿಗೆ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ನೀಡಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಪ್ರೊ. ಎಸ್.ಎಸ್. ಹರ್ಲಾಪುರ, ಚಂದ್ರಶೇಖರ ವಸ್ತ್ರದ, ಡಾ. ಶಶಿಧರ ತೋಡಕರ, ಡಾ. ಸುಧಾ ಕೌಜಗೇರಿ, ವಿಜಯಮಹಾಂತ ದೇವರು, ಮಲ್ಲಿಕಾರ್ಜುನ ಸುರಕೋಡ, ಶಿವಯೋಗಿ ಹುಬ್ಬಳ್ಳಿ, ಮೃತ್ಯುಂಜಯ ನವಲಗುಂದ, ಅನ್ವರ್ ಹುಬ್ಬಳ್ಳಿ ಸೇರಿದಂತೆ ಹಲವರಿದ್ದರು.