ಬಾಲ್ಯ ವಿವಾಹ, ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ತಡೆ ಕುರಿತು ಜನರಲ್ಲಿ ಜಾಗೃತಿ ಜಾಥಾ

KannadaprabhaNewsNetwork | Published : Jun 8, 2024 12:30 AM

ಚಿಕ್ಕ ವಯಸ್ಸಿನಲ್ಲೆ ಬಾಲಕಿಗೆ ಮದುವೆ ಮಾಡುವುದರಿಂದ ಕಡಿಮೆ ತೂಕದ ಮಕ್ಕಳ ಜನನ, ಬಾಲಕಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ, ವಿದ್ಯಾಭ್ಯಾಸ ಕುಂಠಿತ ಸೇರಿದಂತೆ ಒಟ್ಟಿನಲ್ಲಿ ಭವಿಷ್ಯವೇ ಕಮರಿಹೋಗುವ ಸಂಭವ ಇರುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದಲ್ಲಿ ಬಾಲ್ಯ ವಿವಾಹ 2006, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಅಧಿನಿಯಮ 2012, ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜನಜಾಗೃತಿ ಜಾಥಾ ನಡೆಯಿತು.

ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ನಾರಾಯಣ ಮಾತನಾಡಿ, ಬಾಲ್ಯ ವಿವಾಹವು ಸಮಾಜಕ್ಕೆ ಕೆಡುಕಾಗಿದೆ. ಇದರಿಂದ ಬೆಳೆಯುತ್ತಿರುವ ಮಕ್ಕಳ ಅರೋಗ್ಯದ ಮೇಲೆ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ಎಚ್ಚರಿಸಿದರು.

ಚಿಕ್ಕ ವಯಸ್ಸಿನಲ್ಲೆ ಬಾಲಕಿಗೆ ಮದುವೆ ಮಾಡುವುದರಿಂದ ಕಡಿಮೆ ತೂಕದ ಮಕ್ಕಳ ಜನನ, ಬಾಲಕಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ, ವಿದ್ಯಾಭ್ಯಾಸ ಕುಂಠಿತ ಸೇರಿದಂತೆ ಒಟ್ಟಿನಲ್ಲಿ ಭವಿಷ್ಯವೇ ಕಮರಿಹೋಗುವ ಸಂಭವ ಇರುತ್ತದೆ ಎಂದರು.

ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಕೂಡ ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದಾಗ ಮಾತ್ರ ಹೆಣ್ಣು ಮತ್ತು ಗಂಡು ಮಕ್ಕಳು ಸಮಾನರು ಎಂಬ ತಿಳಿವಳಿಕೆ ಬರುತ್ತದೆ. ಲಿಂಗಾನುಪಾತ ಕುಸಿತವು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತದೆ ಎಂದರು.

ಈ ಬಗ್ಗೆ ಜನ ಜಾಗೃತಿ ಕಾರ್ಯಕ್ರಮಗಳು ವ್ಯಾಪಕವಾಗಿ ಶಾಲಾ ಕಾಲೇಜುಗಳಲ್ಲಿ ಹಾಗೂ ಸಮಾದಾಯಗಳ ನಡುವೆ ನಡೆಸಿ ಸಾರ್ವಜನಿಕರನ್ನು ಪ್ರಜ್ಞಾವಂತರನ್ನಾಗಿ ಮಾಡುವುದು, ಸಮಾಜದಲ್ಲಿ ಸಮತೋಲನ ಕಾಪಾಡುವುದು ಇದರ ಮುಖ್ಯಉದ್ದೇಶವಾಗಿದೆ ಎಂದರು.ಈ ವೇಳೆ ಶಿಶು ಅಭಿವೃದ್ಧಿ ಕಚೇರಿಯ ಹಿರಿಯ ಮಹಿಳಾ ಮೇಲ್ವಿಚಾರಕಿ ಸುಜಾತಾ, ಮೇಲ್ವಿಚಾರಕರಾದ ಭಾಗ್ಯ, ರಾಜೇಶ್ವರಿ, ಶೋಭಾ, ಜಯಲಕ್ಷ್ಮಿ, ಉಮಾ, ನೇತ್ರ, ಅಸ್ಮಾ ಬಾನು ಹಾಗು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಇಂದು ಕಾವೇರಿ ಕಲಾಂಜಲಿ

ಮಂಡ್ಯ:ತಾಲೂಕಿನ ಸಿದ್ದಯ್ಯನಕೊಪ್ಪಲು ಬಳಿ ಇರುವ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಶನಿವಾರ (ಜೂ.೭) ಕಾವೇರಿ ಕಲಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ ತಿಳಿಸಿದ್ದಾರೆ.

ಕಾಲೇಜು ಆವರಣದಲ್ಲಿ ಬೆಳಗ್ಗೆ ೧೦.೩೦ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಚಿತ್ರನಟರಾದ ಆದಿಲೋಕೇಶ್, ವಿಜಯ್‌ಸೂರ್ಯ, ಬಿಗಬಾಸ್‌ ವಿನ್ನರ್ ಪ್ರಥಮ್ ಭಾಗವಹಿಸಲಿದ್ದು, ಸಂಸ್ಥೆಯ ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ, ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪ, ಉಪಸ್ಥಿತರಿದ್ದು, ಸಿಇಆರ್‌ಟಿ ಅಧ್ಯಕ್ಷ ಡಾ.ಎಚ್.ಪಿ.ರಾಜು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.