ಕನ್ನಡಪ್ರಭವಾರ್ತೆ ಕುಶಾಲನಗರ
ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಪೋಷಕರು ಮತ್ತು ಮಕ್ಕಳು ಶಾಲೆಯಲ್ಲಿ ಅಕ್ಷರ ದಾಸೋಹದೊಂದಿಗೆ ಅನ್ನದಾಸೋಹ ಕೂಡ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಅರ್ಧ ಎಕರೆ ವಿಸ್ತೀರ್ಣದ ವ್ಯಾಪ್ತಿಯ ಈ ಶಾಲಾ ಆವರಣದಲ್ಲಿ ಉತ್ತಮ ಉದ್ಯಾನವನ ನಿರ್ಮಿಸಲಾಗಿದ್ದು ಹಲವು ರೀತಿಯ ಹೂ ಗಿಡಗಳು ಗಿಡಮರಗಳನ್ನು ಬೆಳೆಸಿದ್ದು ಈ ಶಾಲೆಯ ಅಂದ ಹೆಚ್ಚಿಸಿದೆ. ಆಂಗ್ಲ ಮಾಧ್ಯಮದ ಭರಾಟೆಯ ನಡುವೆ ಈ ಸರ್ಕಾರಿ ಕನ್ನಡ ಶಾಲೆ ಗುಣಮಟ್ಟ ಕಾಯ್ದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಥಳೀಯ ನಿವಾಸಿ ಹಾಗೂ ಕುಶಾಲನಗರ ಪುರಸಭೆಯ ಮಾಜಿ ಸದಸ್ಯರಾದ ಜಗದೀಶ್ ತಿಳಿಸಿದ್ದಾರೆ.
ಖಾಸಗಿ ವ್ಯಾಮೋಹದಿಂದ ವಿದ್ಯಾರ್ಥಿಗಳ ಕೊರತೆ: ಖಾಸಗಿ ಶಾಲೆಗಳ ಮೇಲಿನ ಮಕ್ಕಳ ಪೋಷಕರ ವ್ಯಾಮೋಹದ ಕಾರಣ ಶಾಲೆಯಲ್ಲಿ ಒಂದನೇ ತರಗತಿಗೆ ಮಕ್ಕಳ ಕೊರತೆ ಉಂಟಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.ಮುಖ್ಯ ಶಿಕ್ಷಕಿ ಸೇರಿದಂತೆ ಐದು ಮಂದಿ ಶಿಕ್ಷಕಿಯರು ಮತ್ತು ಓರ್ವ ಅತಿಥಿ ಶಿಕ್ಷಕರು ಇಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ ಎಂದು ಸ್ಥಳೀಯರು ಕನ್ನಡ ಪ್ರಭ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸ್ಥಳೀಯ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪೋಷಕರು ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಸೇರ್ಪಡೆಗೊಳಿಸಿ ಕನ್ನಡ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಬೆಂಬಲ ನೀಡಬೇಕಾಗಿದೆ ಎನ್ನುತ್ತಾರೆ ಶಿಕ್ಷಕರು. 85 ಮಕ್ಕಳು: ಪ್ರಾರಂಭದಲ್ಲಿ 120ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಪ್ರಸಕ್ತ 85 ವಿದ್ಯಾರ್ಥಿಗಳನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಥಳೀಯ ಸರ್ಕಾರಿ ವಸತಿ ನಿಲಯಗಳಲ್ಲಿ ಉಳಿದು ತಮ್ಮ ಶಿಕ್ಷಣಕ್ಕೆ ಈ ಶಾಲೆಯನ್ನು ಅವಲಂಬಿಸಿದ್ದಾರೆ.