ತ್ಯಾಗ ಮತ್ತು ಬಲಿದಾನ ಸಂದೇಶ ಸಾರುವ ಬಕ್ರೀದ್(ಈದ್-ಉಲ್-ಅದ್ಹಾ) ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಪಟ್ಟಣದ ಮತ್ತು ತಾಲೂಕಾದ್ಯಂತ ಆಚರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಮುಂಡಗೋಡ
ತ್ಯಾಗ ಮತ್ತು ಬಲಿದಾನ ಸಂದೇಶ ಸಾರುವ ಬಕ್ರೀದ್(ಈದ್-ಉಲ್-ಅದ್ಹಾ) ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಪಟ್ಟಣದ ಮತ್ತು ತಾಲೂಕಾದ್ಯಂತ ಆಚರಣೆ ಮಾಡಿದರು.ಪಟ್ಟಣದ ಮುಸ್ಲಿಂ ಸಮುದಾಯದವರು ಗುರುವಾರ ಬೆಳಗ್ಗೆ ೮ ಗಂಟೆಗೆ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ನೂರಾನಿ ಮಸೀದಿ ಹತ್ತಿರ ನಗರದ ೫ ಮಸೀದಿಗಳ ಮುಸ್ಲಿಂ ಬಾಂಧವರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಜಮಾವಣೆಗೊಂಡು ನಂತರ ಸಾಮೂಹಿಕವಾಗಿ ಈದ್ಗಾ ಮೈದಾನದಕ್ಕೆ ಕಾಲ್ನಡಿಗೆ ಮೂಲಕ ಅಲ್ಲಾಹನ ನಾಮಸ್ಮರಣೆ ಮಾಡುತ್ತ ಪಟ್ಟಣದ ಕಲಘಟಗಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಅಲ್ಲಿ ಸಾಮೂಹಿಕವಾಗಿ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನೂರಾನಿ ಮಸೀದಿಯ ಹಾಫೀಜ್ ಮುಫ್ತಿ ಮಹ್ಮದ ಇಫ್ತಿಕಾರ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಐದು ಮಸೀದಿಯ ಜಮಾತಿನ ಮುಸ್ಲಿಂ ಬಾಂದವರಿಗೆ ನೂರಾನಿ ಮಸಿದಿಗೆ ಜಿಲ್ಲಾ ವಕ್ಫ್ ಕಮೀಟಿಯಿಂದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ತೌಫೀನ್ ಅಗಡಿ ಶುಭಾಶಯ ಸಲ್ಲಿಸಿದರು. ವಿಶೇಷ ಪ್ರಾರ್ಥನೆ ನಂತರ ಮುಸ್ಲಿಂ ಬಾಂದವರು ಖಬರಸ್ಥಾನ(ಶಂಶಾನ)ಕ್ಕೆ ತೆರಳಿ ಸ್ವರ್ಗಸ್ಥರಾದ ತಮ್ಮ ಬಂಧು ಬಳಗದ ಗೋರಿಗಳಿಗೆ ಹೂವಿನ ಮಾಲೆ ಹಾಕಿ ಸುಗಂಧ ದ್ರವ್ಯ ಸಿಂಪಡಿಸಿ ಪ್ರಾರ್ಥನೆ ಸಲ್ಲಿಸಿದರು.ತಾಲೂಕಿನ ಪಾಳಾ, ಕಾತೂರ, ಮಳಗಿ, ಇಂದೂರ ಮುಂತಾದ ಗ್ರಾಮಗಳಲ್ಲಿ ಕೂಡ ವಿಜೃಂಭಣೆಯಿಂದ ಹಬ್ಬ ಆಚರಿಸಲಾಯಿತು. ಇನ್ನು ಹಬ್ಬದ ಪ್ರಯುಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.
ಇತರರು ಮೆಚ್ಚಿಸಲು, ತೋರಿಕೆಗಾಗಿ ಬಲಿದಾನ ನೀಡಬೇಡಿ:
ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ತಾಲೂಕಿನ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸಿದ್ದಾಪುರ ಪಟ್ಟಣದ ಈದ್ಗಾ ಮೈದಾನದಲ್ಲಿ ಸೇರಿದ ಮುಸ್ಲಿಮರು ಈದ್ ಉಲ್ ಅದಾ (ಬಕ್ರೀದ್)ನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರು ಮೌಲಾನಾ ಮಹಮೂದ್ ರಝ ಪ್ರವಾದಿ ಇಬ್ರಾಹಿಂ ತಮ್ಮ ಮಗ ಇಸ್ಮಾಯಿಲ್ ನನ್ನು ಅಲ್ಲಾಹ್ ನ ಆದೇಶದಂತೆ ಬಲಿಕೊಡಲು ಮುಂದಾದ ತ್ಯಾಗವನ್ನು ವಿವರಿಸಿ ಶಕ್ತರಾದವರು ಬಲಿದಾನ ಅರ್ಪಣೆ ಮಾಡುವಾಗ ಅಲ್ಲಾಹ್ ಹಾಗೂ ಮಹಾನ್ ಮಾನವತಾವಾದಿ ಪ್ರವಾದಿ ಮುಹಮ್ಮದ್ ಸ.ಅ. ಸಲಹೆ ಸೂಚನೆಯಂತೆ ನೆರವೇರಿಸಿ. ಇತರನ್ನು ಮೆಚ್ಚಿಸಲು ತೋರಿಕೆಗಾಗಿ ಬಲಿದಾನ ನೀಡಬೇಡಿ ಎಂದು ಕರೆ ನೀಡಿ ಪ್ರತಿಯೊಬ್ಬರು ಉಮ್ರಾ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಸೌಭಾಗ್ಯ ಲಭಿಸಲಿ ಎಂದು ಪ್ರಾರ್ಥಿಸಿದರು.ಬದ್ರಿಯಾ ಜಾಮಿಯಾ ಮಸ್ಜಿದ್ ಕಮಿಟಿ ಅಧ್ಯಕ್ಷ ಖಾದರಬಾಷಾ ಎಫ್. ಸಾಬ್ ಈದ್ ಶುಭಾಶಯ ಕೋರಿದರು. ಉಪಾಧ್ಯಕ್ಷ ರಿಯಾಜ್ ಹೊಸೂರ್ ಮಸೀದಿ ಶಾದಿಮಹಲ್ ಹಾಗೂ ಸ್ಮಶಾನಕ್ಕಾಗಿ ಕೈಗೊಳ್ಳಲಿರುವ ಕಾರ್ಯದ ಕುರಿತು ಮಾತನಾಡಿದರು. ನಂತರ ಜೋಗ ರಸ್ತೆಯಲ್ಲಿರುವ ದರ್ಗಾಕ್ಕೆ ತೆರಳಿ ವಿಶ್ವಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಮಸೀದಿ ಕಮಿಟಿಯ ಕಾರ್ಯದರ್ಶಿ ಫಿರೋಜ್ ಸಾಬ್ ಖಜಾಂಚಿ ಇಬ್ರಾಹಿಂ ಸಾಬ್, ಸದಸ್ಯರಾದ ಮುನವ್ವರ್ ಗುರ್ಕಾರ್, ಇಲಿಯಾಸ್ ಇಬ್ರಾಹಿಂ ಸಾಬ್, ಸಿರಾಜ್ ಶೇಕ್ ,ಮುನಾಫ್ ಎಂ. ಸಾಬ್, ಸ್ಯೆಯದ್ ಮುಷೀರ್ ಫಯಾಜ್, ಅಹ್ಮದ್ ಹಮೀದ್ ಎಂ. ಖಾನ್ ,ಅಬ್ದುಲ್ ರಶೀದ್ ಸತ್ತಾರ್ ಸಾಬ್ ಹಾಗೂ ನೌ ಜವಾನ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.