ಹೆದ್ದಾರಿಗೆ ಚಾಚಿದ ಮುಳ್ಳುಕಂಟಿ, ವಾಹನ ಸಂಚಾರಕ್ಕೆ ತೊಂದರೆ

KannadaprabhaNewsNetwork |  
Published : Oct 28, 2025, 12:36 AM IST
ಹೆದ್ದಾರಿಗೆ ಚಾಚಿರುವ ಮುಳ್ಳುಕಂಟಿ. | Kannada Prabha

ಸಾರಾಂಶ

ಮುಂಡರಗಿ ತಾಲೂಕು ಕೇಂದ್ರದಿಂದ ಡಂಬಳ ಹೋಬಳಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬಹುತೇಕ ಕಡೆ ಎರಡೂ ಬದಿಗೆ ಮುಳ್ಳು ಕಂಟಿಗಳು ಎತ್ತರಕ್ಕೆ ಬೆಳೆದು ರಸ್ತೆಗೆ ಚಾಚಿವೆ.

ರಿಯಾಜಅಹ್ಮದ ದೊಡ್ಡಮನಿ

ಡಂಬಳ: ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಅರಭಾವಿ- ಚಳ್ಳಕೆರೆ ರಾಜ್ಯ ಹೆದ್ದಾರಿಯುದ್ದಕ್ಕೂ ಮುಳ್ಳು ಕಂಟಿಗಳು ಬೆಳೆದು ಕೊಂಬೆಗಳು ರಸ್ತೆಗೆ ಚಾಚಿದ್ದು, ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ.

ಮುಂಡರಗಿ ತಾಲೂಕು ಕೇಂದ್ರದಿಂದ ಡಂಬಳ ಹೋಬಳಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬಹುತೇಕ ಕಡೆ ಎರಡೂ ಬದಿಗೆ ಮುಳ್ಳು ಕಂಟಿಗಳು ಎತ್ತರಕ್ಕೆ ಬೆಳೆದು ರಸ್ತೆಗೆ ಚಾಚಿವೆ. ಮುಂಡರಗಿ ಪಟ್ಟಣದಿಂದ ಬರದೂರ, ಮೇವುಂಡಿ, ಡಂಬಳ, ಜಂತ್ಲಿ ಶಿರೂರ, ಚುರ್ಚಿಹಾಳ, ಡೋಣಿ ಕ್ರಾಸ್, ಕದಾಂಪುರ, ಪಾಪನಾಶಿ, ಅಡವಿಸೋಮಾಪುರ ಮಾರ್ಗವಾಗಿ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗೆ ಹುಲುಸಾಗಿ ಬೆಳೆದಿರುವ ಹುಲ್ಲು ಮತ್ತು ಮುಳ್ಳುಕಂಟಿಗಳಿಂದ ಸಂಚಾರ ದುಸ್ತರವಾಗಿದೆ. ಎದುರು ಬರುವ ವಾಹನಗಳು ಸರಿಯಾಗಿ ಗೋಚರಿಸದೇ ಅಪಘಾತಗಳು ಸಂಭವಿಸುತ್ತಿವೆ.

ಸುರಕ್ಷತಾ ಫಲಕಗಳಿಲ್ಲ: ಈ ರಸ್ತೆಯುದ್ದಕ್ಕೂ ಅಳವಡಿಸಿರುವ ಸುರಕ್ಷತಾ ಫಲಕಗಳು ಹಾಳಾಗಿವೆ. ಅಲ್ಲದೇ ಹಲವೆಡೆ ಅಪಘಾತದ ವಲಯ, ಮಾರ್ಗಸೂಚಿಗಳ ಫಲಕಗಳನ್ನು ಹಾಕಿಲ್ಲ. ಡಂಬಳ ಗ್ರಾಮದಿಂದ ತೆರಳುವಾಗ ಡೋಣಿ ಕ್ರಾಸ್ ಬಳಿ ಅಳವಡಿಸಿರುವ ಲೋಹದ ತಡೆಗೋಡೆ ಸಂಪೂರ್ಣ ಹಾಳಾಗಿದೆ. ಜಂಧಿಪೀರಾ ದರ್ಗಾಕ್ಕೆ ಹೋಗುವ ರಸ್ತೆಯ ತಿರುವಿನಲ್ಲಿ ಹಾಳಾಗಿ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ ಎಂದು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಾರೆ ಗ್ರಾಮಸ್ಥರು.

ಕೂಡಲೇ ಸಂಬಂಧಪಟ್ಟವರು ರಸ್ತೆಗೆ ಚಾಚಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸಬೇಕು. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ವಿವಿಧ ಗ್ರಾಮಸ್ಥರು, ಸಂಘಟನೆಗಳ ಮುಖಂಡರು.

ಎರಡೆರಡು ಟೋಲ್: ಎರಡು ಟೋಲ್‌ಗಳ ಮಧ್ಯೆ ಕನಿಷ್ಠ 60 ಕಿಮೀ ಅಂತರವಿರಬೇಕು ಎಂಬ ನಿಯಮವಿದೆ. ಆದರೆ ಕೊರ್ಲಹಳ್ಳಿ ಭಾಗದಲ್ಲಿ ಇರುವ ಟೋಲ್ ಮತ್ತು ಕದಾಂಪುರ ಮತ್ತು ಪಾಪನಾಶಿ ಗ್ರಾಮದ ಮಧ್ಯೆ ಟೋಲ್‌ಗಳು 60 ಕಿಮೀಗಿಂತ ಕಡಿಮೆ ಅಂತರವಿದೆ. ಹೀಗಾಗಿ ಈ ಭಾಗದಲ್ಲಿ ಸಂಚರಿಸುವ ಕಾರು, ಲಾರಿ, ಬಸ್‌ ಸೇರಿದಂತೆ ವಿವಿಧ ವಾಹನಗಳು ಎರಡು ಕಡೆ ಟೋಲ್‌ ಕಟ್ಟುತ್ತಿದ್ದಾರೆ. ಕದಾಂಪುರ ಟೋಲ್ ಗೇಟ್ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ಮಾಡಿವೆ. ಆದರೂ ಸ್ಪಂದಿಸುತ್ತಿಲ್ಲ. ಅಲ್ಲದೇ ರಸ್ತೆ ಸುರಕ್ಷಾ ಪ್ರಾಧಿಕಾರದ ನಿಯಮ ಪಾಲಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಈ ಕುರಿತು ಕೆಆರ್‌ಡಿಸಿಎಲ್‌ ಎಇಇ ಅವರನ್ನು ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.

ರಸ್ತೆಯುದ್ದಕ್ಕೂ ಮುಳ್ಳಿಕಂಟಿ ಬೆಳೆದು ಚಾಚಿರುವ ಕಾರಣ ತಿರುವು ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುತ್ತಿಲ್ಲ. ಈ ಭಾಗ ಅಪಘಾತ ವಲಯವಾಗಿದ್ದರಿಂದ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಕಾರು ಚಾಲನೆ ಮಾಡುವಂತಾಗಿದೆ ಎಂದು ಕಾರು ಚಾಲಕ ಎಸ್. ಹನುಮಂತಪ್ಪ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ