ಬಸವರಾಜ ಹಿರೇಮಠ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ.ರಾ. ಬೇಂದ್ರೆ ಹೆಸರಿನಲ್ಲಿರುವ ಸಾಧನಕೇರಿಯ ಬಾರೋ ಸಾಧನಕೇರಿ ಕೆರೆ ಹಾಗೂ ಉದ್ಯಾನವನಕ್ಕೆ ಕಂಟಕವಾಗಿರುವುದು ಕೊಳಚೆ ನೀರು. ಈ ಚರಂಡಿ ನೀರನ್ನು ಸರಾಗವಾಗಿ ಹೊರ ಹಾಕಲು 20 ವರ್ಷದ ಹಿಂದೆ ನಿರ್ಮಿಸಿದ್ದ ಒಳಚರಂಡಿ ವ್ಯವಸ್ಥೆ ರಹಸ್ಯ ಕೊನೆಗೂ ಬಯಲಾಗಿದೆ.
ನಿತ್ಯ ಕೆರೆಗೆ ಹರಿದು ಬರುತ್ತಿರುವ ಸಾಧನಕೇರಿ ಹಾಗೂ ಮೇಲಿನ ಬಡಾವಣೆಗಳ ಚರಂಡಿ ನೀರು, ಅದರಿಂದ ಸಂಪೂರ್ಣ ಹಾಳಾಗಿರುವ ಕೆರೆ ಹಾಗೂ ಉದ್ಯಾನವನದ ಸ್ಥಿತಿ ಅರಿತ ಸ್ಥಳೀಯರಾದ ವೆಂಕಟೇಶ ತೆಲಗಾರ ಎಂಬುವರು ಪಾಲಿಕೆ ಅಧಿಕಾರಿಗಳ ಬೆನ್ನು ಬಿದ್ದು, 2007ರಲ್ಲಿ ಮೊದಲ ಬಾರಿಗೆ ಕೆರೆ ಹಾಗೂ ಉದ್ಯಾನ ನಿರ್ಮಾಣದ ವೇಳೆ ಹಾಕಿದ್ದ ಸುಮಾರು ಹತ್ತು ಅಡಿ ಭೂಮಿ ಒಳಗಿರುವ ಒಳಚರಂಡಿ ಮಾರ್ಗವನ್ನು ಇದೀಗ ಪತ್ತೆ ಹಚ್ಚಿದ್ದಾರೆ.ಡಾ. ಎಂ.ಎಂ. ಕಲಬುರ್ಗಿ ಅವರು ದ.ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬೇಂದ್ರೆ ಭವನ ಸೇರಿದಂತೆ ಅದ್ಭುತವಾಗಿ ಬಾರೋ ಸಾಧನಕೇರಿ ಕೆರೆ ಹಾಗೂ ಉದ್ಯಾನವನ ನಿರ್ಮಿಸಿದ್ದರು. ಯಾವುದೇ ಕಾರಣಕ್ಕೂ ಚರಂಡಿ ನೀರು ಈ ಕೆರೆಗೆ ಹರಿದು ಬರದಂತೆ ಆಗಲೇ, ದುರ್ಗಾದೇವಿ ದೇವಸ್ಥಾನ ಹಿಂಬದಿ ರಾಜಕಾಲುವೆಯಿಂದ ಕೆರೆಯ ಪಾತ್ ವೇ ಅಡಿಯಲ್ಲಿ ಕೊಳಚೆ ನೀರು ನೇರವಾಗಿ ಕೆರೆಯ ಕೋಡಿ ಹರಿದು ಹೋಗುವ ಜಾಗಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು.
ಒಳಚಂರಡಿ ವ್ಯವಸ್ಥೆ ಸರಿಪಡಿಸಿ:
ಕೊಳಚೆ ನೀರು ತಡೆದರೆ ಸಾಧನಕೇರಿ ಕೆರೆ ತಾನಾಗಿಯೇ ಅಭಿವೃದ್ಧಿ ಆಗಲಿದೆ. ಈ ಹಿನ್ನೆಲೆಯಲ್ಲಿ ಉದ್ಯಾನವನದ ನೀಲನಕ್ಷೆ ಸಿಗದೇ ಇದ್ದರೂ ಸ್ಥಳೀಯರ ಸಹಕಾರದಿಂದ ಉದ್ಯಾನವನದಲ್ಲಿದ್ದ ಒಳಚರಂಡಿ ಮಾರ್ಗ ಪತ್ತೆ ಮಾಡಲಾಗಿದೆ. ಜತೆಗೆ ಅದನ್ನು ಸರಿಪಡಿಸಿ, ಮಂಗಳಗಟ್ಟಿ ಪ್ಲಾಟ್ ಮೂಲಕ ಹರಿದು ಬರುವ ಕಲುಷಿತ ನೀರು, ತ್ಯಾಜ್ಯವನ್ನು ನೇರವಾಗಿ ಕೆರೆಯಿಂದ ಹೊರ ಕಳುಹಿಸುವ ಯೋಜನೆ ಹಾಕಲಾಗಿದೆ. ಇದರೊಂದಿಗೆ ಪೊಲೀಸ್ ಇಲಾಖೆ ಅಡಿಯಲ್ಲಿರುವ ದುರ್ಗಾದೇವಿ ದೇವಸ್ಥಾನದಿಂದ ಕೆರೆಗೆ ಸೇರುವ ಕೊಳಚೆ ನೀರು ಸಹ ತಡೆಯಲು ಇಲಾಖೆಗೆ ತಿಳಿಸಲಾಗಿದೆ ಎಂದು ಪಾಲಿಕೆಯ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಮಾಹಿತಿ ನೀಡಿದರು.
ವೆಂಕಟೇಶ ತೆಲಗಾರ, ಹುಬ್ಲೀಕರ ಪ್ಲಾಟ್ ಹಿರಿಯರು