ಸೌಹಾರ್ದತೆ ಬೆಸೆದ ಬಸವ ಬುತ್ತಿ ಕಾರ್ಯಕ್ರಮ

KannadaprabhaNewsNetwork |  
Published : Apr 24, 2026, 01:15 AM IST
ಪೋಟೋಬಸವ ಬುತ್ತಿಯನ್ನು ಹೊತ್ತು ಮೆರವಣಿಗೆಯೊಂದಿಗೆ ಮಠಕ್ಕೆ ಅರ್ಪಿಸಲು ಹೊರಟಿರುವ ಲಂಬಾಣಿ ಮಹಿಳೆಯರು.  | Kannada Prabha

ಸಾರಾಂಶ

ಸಮಾನತೆ ಹರಿಕಾರ ಬಸವಣ್ಣವರ ಜಯಂತಿ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಿಂಗಳ ಪರ್ಯಂತ ಆಧ್ಯಾತ್ಮ ಪ್ರವಚನ ಹಮ್ಮಿಕೊಂಡು ದುಶ್ಚಟ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಡಾ.ಚನ್ನಮಲ್ಲಶ್ರೀಗಳು ಪಣ

ಎಂ. ಪ್ರಹ್ಲಾದ್ ಕನಕಗಿರಿ

ಬಸವ ಜಯಂತಿ ಭಾಗವಾಗಿ ಇಲ್ಲಿನ ಸುವರ್ಣಗಿರಿ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಸುವರ್ಣಗಿರಿ ವೈಭವ ಭವ್ಯ ಸಮಾರಂಭಕ್ಕೆ ತಾಲೂಕಿನ ಅಡವಿಬಾವಿ ತಾಂಡಾದ ಮಹಿಳೆಯರು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಭಜನೆಯೊಂದಿಗೆ ಶ್ರೀಮಠಕ್ಕೆ ಬಸವ ಬುತ್ತಿ ಅರ್ಪಿಸಿ ಸೌಹಾರ್ದತೆ ಬೆಸೆದಿದ್ದಾರೆ.

ಸಮಾನತೆ ಹರಿಕಾರ ಬಸವಣ್ಣವರ ಜಯಂತಿ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಿಂಗಳ ಪರ್ಯಂತ ಆಧ್ಯಾತ್ಮ ಪ್ರವಚನ ಹಮ್ಮಿಕೊಂಡು ದುಶ್ಚಟ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಡಾ.ಚನ್ನಮಲ್ಲಶ್ರೀಗಳು ಪಣತೊಟ್ಟು ನಿಂತಿದ್ದು, ಯುವ ಸಮೂಹದ ಪರಿವರ್ತನೆಗೆ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಹಿಂದುಳಿದ, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚು ಒತ್ತು ನೀಡಿದ್ದು, ಮಾನಸಿಕ ರೋಗಿಗಳಿಗೆ ಉಚಿತ ಔಷಧ ವಿತರಣೆ, ಉಚಿತ ಆರೋಗ್ಯ ಶಿಬಿರ ಹೀಗೆ ನಾನಾ ಸಾಮಾಜಿಕ ಸೇವೆ ಶ್ರೀಮಠವು ಮಾಡುತ್ತಿದೆ.

ಈ ಎಲ್ಲ ಸೇವೆಗಳ ಜತೆಗೆ ಹಳ್ಳಿ-ಹಳ್ಳಿಗೂ ಬಸವೇಶ್ವರರ ಪರಿಕಲ್ಪನೆ, ಅವರ ವಿಚಾರ ತಲುಪುವ ನಿಟ್ಟಿನಲ್ಲಿ ಚನ್ನಮಲ್ಲ ಶ್ರೀಗಳು ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳುತ್ತಿದ್ದು, ಜನರಿಗೆ ಸದ್ವಿಚಾರ ತಿಳಿಸಿಕೊಟ್ಟು ದುಶ್ಚಟ ಮುಕ್ತರಾಗಿಸಲು ಸಮಾಜ ಪರಿವರ್ತನೆಯ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಶ್ರೀಗಳ ಕಾರ್ಯ ಮೆಚ್ಚಿ ತಾಲೂಕಿನ ಅಡವಿಬಾವಿ ತಾಂಡಾ, ಆಗೋಲಿ, ಗಾಣದಾಳ ಹಾಗೂ ಬಸರಿಹಾಳ ಗ್ರಾಮದ ನೂರಾರು ಭಕ್ತರು ಸೇರಿ ರೊಟ್ಟಿ, ಕಾಳು ಪಲ್ಯ, ಚಟ್ನಿ ಪುಡಿ, ಮಾದಲಿ ಸೇರಿ ನಾನಾ ದಿನಸಿ ಖಾದ್ಯ ಶ್ರೀಮಠಕ್ಕೆ ಸಮರ್ಪಣೆ ಮಾಡಿ ಧನ್ಯತೆ ಮೆರೆದರು.

ಲಂಬಾಣಿ ಉಡುಗೆಯಲ್ಲಿ ಖಾದ್ಯ ಅರ್ಪಣೆ:ತಾಲೂಕಿನ ಅಡವಿಬಾವಿ ತಾಂಡಾದ ಭಕ್ತರು ಇಲ್ಲಿನ ವೀರಭದ್ರೇಶ್ವರ ದೇಗುಲದಿಂದ ಶ್ರೀಮಠದವರೆಗೆ ಲಂಬಾಣಿ ವೇಷಭೂಷಣದಲ್ಲಿ ಬಂದಿದ್ದ ಮಹಿಳೆಯರು ತಾವೇ ತಯಾರಿಸಿದ ಖಾದ್ಯ ಬಿದುರಿನ ಬುಟ್ಟಿಯಲ್ಲಿ ಹೊತ್ತು ಲಂಬಾಣಿ ಹಾಡು ಹಾಡುತ್ತಾ ಮೆರವಣಿಗೆ ಮೂಲಕ ಮಠಕ್ಕೆ ಅರ್ಪಣೆ ಮಾಡುವುದು ವಿಶೇಷವಾಗಿತ್ತು. ಹೀಗೆ ಶ್ರೀಮಠದ ಮುಖ್ಯದ್ವಾರದಲ್ಲಿ ಬಂದಿದ್ದ ಬಸವ ಬುತ್ತಿ ವಿಶೇಷ ಪೂಜೆ, ಆರತಿಯೊಂದಿಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮ ಸಂಪನ್ನದ ಬಳಿಕ ಸಾಮೂಹಿಕ ಭೋಜನ ಸವಿದರು. ಬಂಜಾರ ಸಮುದಾಯದವರು ಲಂಬಾಣಿ ವೇಷ ತೊಟ್ಟು ಬಸವ ಬುತ್ತಿ ಮೆರವಣಿಗೆಗೆ ಹೊಸ ಭಾಷ್ಯ ಬರೆದಿದ್ದು, ನೆರದಿದ್ದವರ ಗಮನ ಸೆಳೆಯಿತು.

ಏನಿದು ಬಸವ ಬುತ್ತಿ ಕಾರ್ಯಕ್ರಮ?: ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಆಚರಿಸುವ ಕಾರ್ಯಕ್ರಮ ಇದಾಗಿದ್ದು, ಸಂಸ್ಕೃತಿಯಲ್ಲಿ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಯಾಗಿದೆ. ಇದು ಮುಖ್ಯವಾಗಿ ಬಸವೇಶ್ವರರ ಜಯಂತಿಯಲ್ಲಿ ಆಚರಿಸಲಾಗುತ್ತದೆ. ಸಾಮಾಜಿಕ ಸೌಹಾರ್ದತೆಗಾಗಿ ಎಲ್ಲ ವರ್ಗದ ಮನಸ್ಸು ಕೂಡಿಕೊಂಡು ಬಸವಣ್ಣನಿಗೆ ಅರ್ಪಿಸುವ ಆಹಾರದ ಸಂಕೇತವಾಗಿ ಆಚರಿಸಲಾಗುತ್ತಿದೆ.

ಹಲವು ವರ್ಷಗಳಿಂದ ಭಕ್ತರು ಬಸವ ಜಯಂತಿ ವೇಳೆ ಭಕ್ತರಿಗೆ ಉಣಬಡಿಸುವುದಕ್ಕಾಗಿ ಬಸವಣ್ಣನವರ ಹೆಸರಿನಲ್ಲಿ ಬುತ್ತಿ ತರುತ್ತಾರೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮಕ್ಕೆ ಹೊಸ ರೂಪ ಬರುತ್ತಿದ್ದು, ಜನರಲ್ಲಿ ಸೌಹಾರ್ದತೆ ಬೆಳೆಯುತ್ತಿದೆ ಎಂದು ಮಠದ ಭಕ್ತ ವಾಗೀಶ ಹಿರೇಮಠ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಗಳೂರು: ಗಾಳಿ ಮಳೆಗೆ ಮರ, ಕಂಪೌಂಡ್‌ ಬಿದ್ದು ಮನೆ, ವಾಹನ ಜಖಂ
ಕುಲಶೇಖರ: ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ ಮೆರವಣಿಗೆ