ಸಾರ್ಥಕ ಬದುಕಿಗೆ ಬಸವಣ್ಣನವರ ತತ್ವಗಳು ಅವಶ್ಯಕ: ರಾಜಶೇಖರ ಹೊಕ್ರಾಣಿ

KannadaprabhaNewsNetwork | Updated : May 13 2024, 12:06 AM IST

ಸಾರಾಂಶ

ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಜಯಂತಿ ನಡೆಯಿತು. ಹಲವು ಗಣ್ಯರು ಪಾಲ್ಗೊಂಡು ಬಸವೇಶ್ವರರ ಸ್ಮರಣೆ ಮಾಡಿದರು.

ಕುಷ್ಟಗಿ: ಬಸವಣ್ಣವರ ವಚನಗಳನ್ನು ಹಾಗೂ ಅವರ ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸಿದಾಗ ಸಾರ್ಥಕ ಬದುಕು ಸಾಧ್ಯವಾಗುತ್ತದೆ ಎಂದು ರಾಜಶೇಖರ ಹೊಕ್ರಾಣಿ ಹೇಳಿದರು.

ತಾಲೂಕಿನ ಕೇಸೂರು ಗ್ರಾಮದ ಶ್ರೀ ವಿಜಯ ಮಹಾಂತೇಶ್ವರ ಮಠದಲ್ಲಿ ನಡೆದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಹಾನ್ ಮಾನವತಾವಾದಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಂಡವರು. ಲಿಂಗ ಸಮಾನತೆ, ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುಂದಾದವರು. ಬಸವಣ್ಣನವರ ಸರಳತೆ, ವಿಚಾರಧಾರೆಗಳು ಎಲ್ಲರಿಗೂ ಅನುಕರಣೀಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ವಚನಗಳನ್ನು ಓದುವುದು, ಅರ್ಥೈಸಿಕೊಳ್ಳುವುದನ್ನು ಕಲಿಸಬೇಕು ಎಂದರು.

ಶಿಕ್ಷಕ ನಾಗರಾಜ ಪಟ್ಟಣಶೆಟ್ಟರ ಮಾತನಾಡಿ, ಅನುಭವ ಮಂಟಪದ ಮೂಲಕ ಮೊದಲ ಸಂಸತ್‌ ರಚಿಸಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ. ಆ ಸಮಯದಲ್ಲಿ ಸುಮಾರು 19,600 ಶರಣರು ಇದ್ದರು. ಅವರಿಗೆ ಲಿಂಗದೀಕ್ಷೆ ಕೊಟ್ಟು ಸಮಾನತೆ, ಜಾತ್ಯತೀತ, ಸ್ತ್ರೀ ಸಮಾನತೆಯ ಸಲುವಾಗಿ ವಚನಗಳನ್ನು ರಚನೆ ಮಾಡುವ ಮೂಲಕ ದೊಡ್ಡಕ್ರಾಂತಿಯನ್ನೆ ಸೃಷ್ಟಿ ಮಾಡಿದರು. ಅವರು ಜಾತ್ಯತೀತ ನಾಯಕರಾಗಿದ್ದಾರೆ ಎಂದರು.

ಬಸವಣ್ಣನವರು 12ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಕಲ್ಯಾಣ ಕ್ರಾಂತಿಯ ಮೂಲಕ ದೇವನೊಬ್ಬ ನಾಮ ಹಲವು, ಕಾಯಕವೇ ಕೈಲಾಸ ಎಂಬ ತತ್ವಗಳನ್ನು ಜಗತ್ತಿಗೆ ಸಾರಿದ ದೈವ ಸ್ವರೂಪಿಯಾಗಿದ್ದಾರೆ. 12ನೇ ಶತಮಾನ ಇಡೀ ಜಗತ್ತಿಗೆ ಮಹತ್ವದ ಕಾಲಘಟ್ಟವಾಗಿತ್ತು. ಬಸವಣ್ಣನವರು ಜಾತಿ ಪದ್ಧತಿ, ಮೂಢನಂಬಿಕೆ, ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಮಹಿಳಾ ಸಮಾನತೆ ಮೂಲಕ ದಿವ್ಯ ಸಂದೇಶ ನೀಡಿದ್ದಾರೆ. ಅವರ ತತ್ವಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದರು.

ಸಂಗಪ್ಪ ಕಡಿವಾಲ, ವೀರಯ್ಯ ಮಳಿಮಠ, ಆನಂದಪ್ಪ ಸುರಪುರು, ಸಣ್ಣ ಈರಪ್ಪ ಅಂಗಡಿ, ಕರಬಸಪ್ಪ ಪಟ್ಟಣಶೆಟ್ಟರ, ಶಿವಾನಂದಯ್ಯ ಸರಗಣಾಚಾರಿ, ಶೇಖರಪ್ಪ ಕೇಣೆದ, ಮಲ್ಲಪ್ಪ ಕೇಣೆದ, ಶಿವಪುತ್ರಪ್ಪ ಕರಡಿ, ಮಹಾಂತೇಶ ನೀರಲಕೇರಿ, ಚನ್ನಪ್ಪ ಜವಳಿ, ಈರಣ್ಣ ಖಾನಾಪುರ, ಶಿವಕುಮಾರ ಬೂದಿಹಾಳ, ಗವಿಸಿದ್ದಯ್ಯ ವಿರಕ್ತಮಠ, ಗುಂಡಪ್ಪ ಹುಬ್ಬಳ್ಳಿ, ಮಂಜುನಾಥ ಅಂಗಡಿ, ಪರಶಿವಮೂರ್ತಿ ಮಾಟಲದಿನ್ನಿ ಇದ್ದರು.

Share this article