ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿ ಆಯ್ಕೆಯಾದ ರಾಜೀವ್ ಶೆಟ್ಟಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಬ್ರಹ್ಮಗಿರಿಯ ರೆಡ್ಕ್ರಾಸ್ ಭವನದಲ್ಲಿ ನಡೆಯಿತು.ಸನ್ಮಾನ ಸ್ವೀಕರಿಸಿದ ಮಾತನಾಡಿದ ಬಸ್ರೂರು ರಾಜೀವ ಶೆಟ್ಟಿ, ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಮಾನವಾಗಿ ನೋಡಿಕೊಳ್ಳುವುದರೊಂದಿಗೆ ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದ ಅವರು, ತಮ್ಮ ಸೇವಾ ಅನುಭವವನ್ನು ಹಂಚಿಕೊಂಡರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಮಾತನಾಡಿ, ರಾಜ್ಯ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿ ಆಯ್ಕೆಯಾದ ಬಸ್ರೂರು ರಾಜೀವ ಶೆಟ್ಟಿಯವರು ರೆಡ್ ಕ್ರಾಸ್ ಸಂಸ್ಥೆಯ ಮೂಲಕ ರಾಜ್ಯಕ್ಕೆ ವಿದ್ಯಾರ್ಥಿ ಶಕ್ತಿಯನ್ನು ಪಸರಿಸುವ ಧ್ಯೇಯ ಹೊಂದಿದ್ದು, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಡಿಡಿಆರ್ಸಿ ಸಂಸ್ಥೆಗೆ ರಾಜ್ಯದಿಂದ ಇನ್ನಷ್ಟು ಹೆಚ್ಚು ಉತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ನೀಡುವಂತಾಗಲಿ ಎಂದು ಹೇಳಿದರು.ಜಿಲ್ಲಾ ರೆಡ್ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಮಾತನಾಡಿ, ಬಸ್ರೂರು ರಾಜೀವ ಶೆಟ್ಟಿ ರಾಜ್ಯ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿಯಾಗಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ. ಹಲವಾರು ಏಳುಬೀಳುಗಳನ್ನು ಎದುರಿಸಿ ಇಂದು ಉನ್ನತ ಸ್ಥಾನ ಪಡೆದಿದ್ದು ಸಂತಸದ ವಿಷಯ ಎಂದು ಶುಭ ಹಾರೈಸಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಮಾತನಾಡಿದರು.ಈ ಸಂದರ್ಭ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನ ಸುವರ್ಣ, ರಾಜ್ಯ ರೆಡ್ ಕ್ರಾಸ್ ರಾಜ್ಯ ಪ್ರತಿನಿಧಿಗಳಾಗಿದ್ದ ವಿ.ಜಿ. ಶೆಟ್ಟಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನಾಧಿಕಾರಿ ಶಿವಾಜಿ ಎ.ಕೆ., ರೆಡ್ಕ್ರಾಸಿನ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ್, ಮಾಜಿ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ ಮತ್ತು ರತ್ನಾಕರ ಶೆಟ್ಟಿ, ಡಿಡಿಆರ್ಸಿ ನೋಡಲ್ ಅಧಿಕಾರಿ ಜಯಶ್ರೀ, ಡಿಡಿಆರ್ಸಿ ಹಾಗೂ ರೆಡ್ ಕ್ರಾಸ್ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ ನಿರೂಪಿಸಿದರು. ಖಚಾಂಚಿ ರಮಾದೇವಿ ವಂದಿಸಿದರು.