ಕೆಎಫ್‌ಡಿ ಪ್ರಕರಣ ಹೆಚ್ಚದಂತೆ ಎಚ್ಚರಿಕೆ ವಹಿಸಿ

KannadaprabhaNewsNetwork |  
Published : Feb 14, 2025, 12:30 AM IST
ಪೋಟೋ: 13ಎಸ್ಎಂಜಿಕೆಪಿ01ಶಿವಮೊಗ್ಗದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ತಹಶೀಲ್ದಾರ್ ವಿ.ಎಸ್.ರಾಜೀವ್ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ತಾಲೂಕುಗಳಲ್ಲಿ ಕೆಎಫ್‌ಡಿ ಪ್ರಕರಣಗಳು ಹೆಚ್ಚದಂತೆ ಎಚ್ಚರಿಕೆ ವಹಿಸಬೇಕು. ಕೆಎಫ್‌ಡಿ ಕುರಿತು ಜನರಲ್ಲಿರುವ ಭಯ ಮುಕ್ತಗೊಳಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್ ವಿ.ಎಸ್.ರಾಜೀವ್ ಸಲಹೆ ನೀಡಿದರು.

ಶಿವಮೊಗ್ಗ: ತಾಲೂಕುಗಳಲ್ಲಿ ಕೆಎಫ್‌ಡಿ ಪ್ರಕರಣಗಳು ಹೆಚ್ಚದಂತೆ ಎಚ್ಚರಿಕೆ ವಹಿಸಬೇಕು. ಕೆಎಫ್‌ಡಿ ಕುರಿತು ಜನರಲ್ಲಿರುವ ಭಯ ಮುಕ್ತಗೊಳಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್ ವಿ.ಎಸ್.ರಾಜೀವ್ ಸಲಹೆ ನೀಡಿದರು.

ಗುರುವಾರ ಶಿವಮೊಗ್ಗ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರದ ಭಾಗದಲ್ಲಿ ಪ್ರಕರಣಗಳು ಕಂಡು ಬರುತ್ತಿದ್ದು, ಇದರಿಂದ ಜನರು ಭಯಭೀತರಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜನರನ್ನು ಭಯಮುಕ್ತಗೊಳಿಸಬೇಕು. ಜೊತೆಗೆ ರೋಗ ಬಾರದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಬೇಕು. ಹೆಚ್ಚು ಜನ ಸಂದಣಿ ಹೊಂದಿರುವ ಸ್ಥಳದಲ್ಲಿ ಕರಪತ್ರಗಳು, ಪ್ರಕಟಣೆಗಳು, ಭಿತ್ತಿಚಿತ್ರಗಳ ಮೂಲಕ ಕೆಎಫ್‌ಡಿ ಕಾಯಿಲೆ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಮಂಗನ ಸಾವಿನಿಂದ ಈ ಕಾಯಿಲೆ ಹರಡಲಿದ್ದು, ತಾಲೂಕಿನ ಯಾವುದೇ ಭಾಗದಲ್ಲಿ ಮಂಗನ ಸಾವಾದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅರಣ್ಯ ಇಲಾಖೆ ನಿಯಮಾನುಸಾರ ಕ್ರಮ ಕೈಗೊಂಡು ವಿಲೇವಾರಿ ಮಾಡುತ್ತದೆ. ಈ ಕಾಯಿಲೆ ಹೆಚ್ಚಾಗಿ ಕಾಡಿನಲ್ಲಿ ಕಂಡುಬರುವುದರಿಂದ ಕಾಡಿನ ಕಡೆ ಹೋಗುವುದನ್ನು ಜನರು ಕಡಿಮೆ ಮಾಡಬೇಕು ಎಂದು ಹೇಳಿದರು.

ಡೆಂಘೀ ಪ್ರಕರಣ ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ಪಂಚಾಯಿತಿಗಳು ಮುನ್ನೆಚರಿಕೆ ಕ್ರಮ ವಹಿಸಬೇಕು. 2024ರಲ್ಲಿ ತಾಲೂಕಿನಲ್ಲಿ ಒಟ್ಟು 268 ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಗ್ರಾಮೀಣ ಭಾಗದಲ್ಲಿ 77, ನಗರದ ಭಾಗದಲ್ಲಿ 191 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಜನವರಿಯಲ್ಲಿ ಗ್ರಾಮೀಣ ಭಾಗದಲ್ಲಿ 6 ಪ್ರಕರಣಗಳು ಕಂಡು ಬಂದಿವೆ. ಇದರ ಬಗ್ಗೆ ನಾವೆಲ್ಲರೂ ಈಗಲೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾಗೃತೆಯಿಂದ ಇದ್ದು ಶುಚಿತ್ವವನ್ನು ಕಾಪಾಡಬೇಕು ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ದಢಾರ ಮತ್ತು ರುಬೆಲ್ಲಾ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಲಸಿಕೆ ನೀಡಲಾಗುತ್ತಿದೆ. ತಾಲೂಕಿನ ಆರೋಗ್ಯ ಉಪಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಎಮ್‌ಆರ್ 1 ಲಸಿಕೆಯನ್ನು 9 ರಿಂದ 11 ತಿಂಗಳಿನ ಮಕ್ಕಳಿಗೆ ಮತ್ತು ಎಮ್‌ಆರ್ 2 ಲಸಿಕೆಯನ್ನು 16 ರಿಂದ 24 ತಿಂಗಳಿನ ಮಕ್ಕಳಿಗೆ ನೀಡಲಾಗುತ್ತಿದೆ. ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಮಕ್ಕಳನ್ನೂ ಗುರುತಿಸಿ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ 33 ಟೈಫಾಯ್ಡ್ ಪ್ರಕರಣ ದಾಖಲಾಗಿದ್ದು, ಶುದ್ಧ ನೀರನ್ನು ಉಪಯೋಗಿಸಬೇಕು. ಹೊರಗಿನ ಯಾವುದೇ ಆಹಾರವನ್ನು ತಿನ್ನಬಾರದು. ಬೀದಿಬದಿ ವ್ಯಾಪಾರಿಗಳಿಗೆ ಕೂಡ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ತಂಬಾಕು ಮುಕ್ತ ಯುವ ಅಭಿಯಾನವನ್ನು ಕೈಗೊಳ್ಳಲಾಗುತ್ತಿದ್ದು, ತ್ರೈಮಾಸಿಕದಲ್ಲಿ ಕೋಟ್ಪಾ ಕಾಯ್ದೆ ಅಡಿಯಲ್ಲಿ 19 ದಾಳಿಗಳು, 424 ಪ್ರಕರಣಗಳು ಹಾಗೂ 39,770 ರು. ದಂಡವನ್ನು ಸಂಗ್ರಹಿಸಲಾಗಿದೆ. ಪ್ರತಿ ಶಾಲಾ-ಕಾಲೇಜುಗಳ 100 ಮೀ ಸುತ್ತಮುತ್ತದ ಅಂಗಡಿಯಲ್ಲಿ ದಾಳಿ ನಡೆಸಲಾಗುತ್ತಿದೆ. ಕೋಟ್ಪಾ ಕಾಯ್ದೆ ಕುರಿತು ಜಾಥಾ ಮೂಲಕ ಅರಿವು ಮೂಡಿಸಲಾಗುತ್ತಿದೆ. ಆರ್‌ಬಿಎಸ್‌ಕೆ ಕಾರ್ಯಕ್ರಮದಡಿಯಲ್ಲಿ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ತಪಾಸಣೆ ಕೈಗೊಳ್ಳುತ್ತಿದ್ದು, ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗುತ್ತದೆ ಎಂದು ಹೇಳಿದರು.

ಸಿಡಿಪಿಓ ಸಿ.ಗಂಗಾಬಾಯಿ ಮಾತನಾಡಿದರು.

ಸಭೆಯಲ್ಲಿ ತಾಲೂಕಿನ ಕಾರ್ಯನಿರ್ವಾಹ ಅಧಿಕಾರಿ ಅವಿನಾಶ್, ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತ ಮಂಜುನಾಥ್, ಪಶು ಆಸ್ಪತ್ರೆಯ ವೈದ್ಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!