ಚಳ್ಳಕೆರೆ: ರೈತರು ತೋಟಗಾರಿಕೆ ಬೆಳೆಯ ಜೊತೆಗೆ, ಹೈನುಗಾರಿಕೆ ಮಾಡುವ ಮೂಲಕ ಉತ್ತಮ ಲಾಭಪಡೆಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ವಿಶೇಷವಾಗಿ ಮಿಶ್ರ ತಳಿಹಸು-ಕರು ಪ್ರದರ್ಶನ, ಬಡರು ರಾಸುಗಳ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡಲು ಈ ಕಾರ್ಯಕ್ರಮ ಯೋಜಿಸಿದೆ ಎಂದು ತಿಳಿಸಿದರು.
ಸಹಕಾರಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಾಲು ಒಕ್ಕೂಟವೂ ಸಹ ಸೇರ್ಪಡೆಯಾಗಿದೆ. ನಾನು ಸಹ ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವೆ. ಹೈನುಗಾರಿಕೆಗೆ ಹೆಚ್ಚು ಆದ್ಯತೆ ನೀಡಲು ಸಹಕಾರಿ ಕ್ಷೇತ್ರದಲ್ಲೂ ಹಲವಾರು ಯೋಜನೆಗಳಿವೆ. ರೈತರು ಇದರ ಮಾಹಿತಿ ಪಡೆದು ಯೋಜನೆಗಳ ಸದುಪಯೋಗಕ್ಕೆ ಮುಂದಾಗಬೇಕಿದೆ. ಒಕ್ಕೂಟದ ಅಧಿಕಾರಿಗಳು ಹಾಗೂ ನಿರ್ದೇಶಕರು ಹೈನುಗಾರಿಕೆಯನ್ನು ಗ್ರಾಮ, ಗ್ರಾಮಗಳಿಗೂ ವಿಸ್ತರಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ನರಹರಿ ಪ್ರತಿಷ್ಠಾಪನದ ವೈ.ರಾಜರಾಂಸ್ವಾಮೀಜಿ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಗೋವನ್ನು ಮಾತೃಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಗೋವಿನಿಂದ ಹಲವಾರು ಉಪಯೋಗವನ್ನು ಪ್ರತಿನಿತ್ಯ ಪಡೆದುಕೊಳ್ಳುತ್ತೇವೆ. ಗೋವಿನ ಪೂಜೆಯಿಂದ ನಮ್ಮೆಲ್ಲರಿಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ ಎಂದ ಅವರು, ರೈತರಿ ಹೈನುಗಾರಿಕೆ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಆಯೋಜಿಸಿದ್ದು, ಇದರ ಸದುಪಯೋಗ ರೈತ ಸಮುದಾಯಕ್ಕೆ ಹೆಚ್ಚು ದೊರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಂಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ವಹಿಸಿದ್ದರು. ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಶುಸಂಗೋಪನೆ ಜಿಲ್ಲಾ ಉಪನಿರ್ದೇಶಕ ಕುಮಾರಸ್ವಾಮಿ, ಪಶುವೈದ್ಯಾಧಿಕಾರಿ ಡಾ.ರೇವಣ್ಣ, ಶ್ರೀನಿವಾಸ್ಬಾಬು, ಡಾ.ಮುಕುಂದನಾಯಕ್, ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ, ನಿರ್ದೇಶಕ ಜಿ.ಪಿ.ರೇವಣಸಿದ್ದಪ್ಪ, ಜಿ.ಬಿ.ಶೇಖರಪ್ಪ, ಎನ್.ಜಿ.ಶೇಖರ್, ಕೆ.ಆರ್.ಮುರುಳೀಧರ, ಡಾ.ಎನ್.ಎಂ.ಮೂರ್ತಿ, ವಿಸ್ತಾರಣಾಧಿಕಾರಿ ನಯಾಜ್ಬೇಗ್, ಕೃಷ್ಣಕುಮಾರ್, ಗ್ರಾಪಂ ಸದಸ್ಯರಾದ ಎನ್.ಮಂಜುನಾಥ, ಪಿಡಿಒ ಎಂ.ರಾಮಚಂದ್ರಪ್ಪ, ಮುಖಂಡ ಶಶಿಧರ, ಶೈಲಜಾ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.