ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಪ್ರಾರಂಭವಾಗಿ 60 ವರ್ಷ ತುಂಬಿದ ಹಿನ್ನಲೆ ಸವಿನೆನಪಿಗಾಗಿ ಜಿಲ್ಲೆಯ ಜನತೆಗೆ ವಿಶಿಷ್ಟ ಕೊಡುಗೆ ನೀಡಲು ಮುಂದಾಗಿದೆ.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಚಿತ್ರದುರ್ಗ ನಗರದಲ್ಲಿ ಹತ್ತು ಹಾಸಿಗೆಗಳ ಡಯಾಲಿಸಿಸ್ ಕೇಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರ, ಪಿಸಿಯೋಥೆರಪಿ ಸೆಂಟರ್, ಲ್ಯಾಬೋರೇಟರಿ ಸ್ಥಾಪನೆ ಮಾಡಲಾಗಿದೆ ಎಂದು ಕ್ಲಬ್ ನ ಕಾರ್ಯದರ್ಶಿ ಕೆ.ಮಧುಪ್ರಸಾದ್ ತಿಳಿಸಿದರು.
ಬಾಲ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಯಾಲಿಸಿಸ್ ಕೇಂದ್ರದ ಉಪಕರಣಗಳಿಗಾಗಿ ರೋಟರಿ ಪೌಂಡೇಶನ್ನಿಂದ 1.12 ಕೋಟಿ ರು. ಗ್ರಾಂಟ್ ಪಡೆಯಲಾಗಿದೆ.ನಗರದ ವ್ಯಾಪಾರೋದ್ದಿಮೆಗಳಾದ ಎಸ್ಆರ್ಬಿಎಂಎಸ್ ನ ಮಾಲೀಕರಾದ ಲಕ್ಷಿಕಾಂತ ರೆಡ್ಡಿ ಹಾಗೂ ಎಸ್.ವೀರೇಶ್ ದೇಣಿಗೆಯಿಂದ ಚಳ್ಳಕೆರೆ ರಸ್ತೆಯಲ್ಲಿನ ಕೃಷ್ಣಪ್ಪ ಲೇ ಔಟ್ನಲ್ಲಿ ಸ್ಥಳ ಪಡೆಯಲಾಗಿದೆ. ರೋಟರಿ ಸೇವಾ ಭವನವನ್ನು ಚಿತ್ರದುರ್ಗ ರೋಟರಿ ಟ್ರಸ್ಟನ ಅಡಿಯಲ್ಲಿ ನಿರ್ಮಿಸಲಾಗಿದೆ. ಕಿಡ್ನಿ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ 10 ಹಾಸಿಗೆಗಳ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿದೆ. ಯಂತ್ರಗಳು, ಕಟ್ಟಡಗಳು, ಸೋಲಾರ್ ಪ್ಯಾನಲ್ಗಳ ಸಂಪೂರ್ಣ ವೆಚ್ಚವನ್ನು ನಗರದ ರೋಟರಿ ಕ್ಲಬ್ ಸದಸ್ಯರು ಭರಿಸಿದ್ದಾರೆ ಎಂದರು.
ಸೆಲ್ಕೋ ಫೌಂಡೇಶನ್ ಸೋಲಾರ್ ಪ್ಯಾನಲ್ಗಳು, ಬ್ಯಾಟರಿಗಳು ಮತ್ತು ಅಗತ್ಯ ಉಪಕರಣಗಳನ್ನು ಅಳವಡಿಸಿದೆ. 22 ಕಿಲೋ ವ್ಯಾಟ್ ಸೋಲಾರ್ ವ್ಯವಸ್ಥೆಯನ್ನು ಈಗಾಗಲೇ 30 ಲಕ್ಷ ರು.ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಆಸ್ಪತ್ರೆಗೆ ದಿನಕ್ಕೆ 50 ರಿಂದ 60 ಯೂನಿಟ್ ವಿದ್ಯುತ್ ಅಗತ್ಯವಿದ್ದು, ಸಂಪೂರ್ಣ ಆಸ್ಪತ್ರೆ ಸೌರಶಕ್ತಿಯಿಂದ ನಡೆಯುತ್ತದೆ ಎಂದರು.ಚಿತ್ರದುರ್ಗ ಮತ್ತು ಅಕ್ಕಪಕ್ಕದ ಪಟ್ಟಣಗಳ ಪಾಲಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹತ್ತು ಡಯಾಲಿಸಿಸ್ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗಿದೆ. ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಅವರ ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ.
ಶುಲ್ಕಗಳು ಇನ್ನೂ ನಿಗದಿಯಾಗಿಲ್ಲ. ಆಶಾಕಿರಣ ಡಯಾಲಿಸಿಸ್ ಸೆಂಟರ್, ಶ್ರೀ ಕನ್ಯಕಾ ಪರಮೇಶ್ವರಿ ಸೌಹಾರ್ದ ಸಹಕಾರಿ ಕೌಶಲ್ಯಾಭಿವೃದ್ಧಿ ಕೇಂದ್ರ, ನಿರ್ಮಲಾ ಕೀರ್ತಿಕುಮಾರ್ ಪಿಸಿಯೋಥೆರಪಿ ಸೆಂಟರ್, ಲ್ಯಾಬೋರೇಟರಿ, ಕ್ಲಿನಿಕ್ ಹಾಗೂ ಫಾರ್ಮಸಿ ಸೌಲಭ್ಯಗಳು ಏಕಕಾಲದಲ್ಲಿ ಒಂದೇ ಕಟ್ಟಡದಲ್ಲಿ ಲಭ್ಯ ಎಂದರು.ಕೈಗಾರಿಕೋದ್ಯಮಿಗಳಾದ ಪ್ರವೀಣ ಚಂದ್ರರವರು ಪ್ರತಿ ತಿಂಗಳು 200 ಡಯಾಲಿಸಿಸ್ಗಳನ್ನು ಉಚಿತವಾಗಿ ಪ್ರಾಯೋಜಿಸಿದ್ದಾರೆ. ಈ ಕಟ್ಟಡವನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದು. ಡಯಾಲಿಸಿಸ್ ಕೇಂದ್ರದ ಅನುಕೂಲಕ್ಕಾಗಿ ಹವಾನಿಯಂತ್ರಣ ಸೌಲಭ್ಯವನ್ನು ಒದಗಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಶಿರಸಿಯ ಯುವಜಯ ಪೌಂಡೇಷನ್ನ ಸಹಯೋಗ ಪಡೆದಿದ್ದು ಇದರಲ್ಲಿ ಬಿಎ, ಬಿಕಾಂ, ಬಿಎಸ್ಸಿ ಪದವೀಧರರಿಗೆ 2 ರಿಂದ ಮೂರು ತಿಂಗಳ ತರಬೇತಿ ನೀಡಲಾಗುತ್ತದೆ.
ಸಂವಹನ ಕಲೆ, ಟೀಮ್ ವರ್ಕ್, ಇಂಗ್ಲಿಷ್ ಸಂಭಾಷಣೆ ಹಾಗೂ ಇತರ ವಿಷಯಗಳಲ್ಲಿ ತರಬೇತಿ ನೀಡಿ ಅವರಿಗೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡಲಾಗುವುದು. ಸುಮಾರು 50ಕ್ಕೂ ಹೆಚ್ಚು ಕಂಪನಿಗಳ ಜೊತೆ ಸಂಪರ್ಕ ಹೊಂದಿದ್ದೇವೆ ಎಂದು ಹೇಳಿದರು.ರೋಟರಿ ಟ್ರಸ್ಟ್ ಅಧ್ಯಕ್ಷ ಪಿ.ಎಸ್ ಶಂಭುಲಿಂಗಪ್ಪ ಮಾತನಾಡಿ, ಏ.30ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಡಾ.ಸಾಧು ಗೋಪಾಲ ಕೃಷ್ಣ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ ನೆರವೇರಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಸಿ ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್, ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಅರೋಗ್ಯ ಅಧಿಕಾರಿ ರೇಣುಪ್ರಸಾದ್, ರೋಟೇರಿಯನ್ ಗಳಾದ . ರವಿ ವಡ್ಲಮಣಿ, ಬಿ.ಚಿನ್ನಪ್ಪ ರೆಡ್ಡಿ, ರವೀಂದ್ರ, ರಮೇಶ್ ವಂಗಲ, ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜಿ.ಎನ್ ವೀರಣ್ಣ, ಎಸ್.ವೀರೇಶ್, ಕೆ.ಎಸ್.ಚಂದ್ರಮೋಹನ್, ಜಯಶ್ರೀ ಷಾ, ತರುಣ್ ಷಾ, ಮೂರ್ತಿ, ವೆಂಕಟೇಶ್, ವಿಶ್ವನಾಥ್, ಸೂರ್ಯನಾರಾಯಣ ಇದ್ದರು.