ಕನ್ನಡಪ್ರಭ ವಾರ್ತೆ ಬೆಳಗಾವಿ
ಚಿತ್ರನಟರಾದ ಡಾಲಿ ಧನಂಜಯ, ನಿನಾಸಂ ಸತೀಶ, ವಸಿಷ್ಠ ಸಿಂಹ, ನಟಿಯರಾದ ಸಪ್ತಮಿಗೌಡ, ರಾಗಿಣಿ ಅವರು ವೇದಿಕೆ ಹತ್ತುತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಈ ವೇಳೆ ನಟ-ನಟಿಯರು ತಮ್ಮ ಸಿನಿಮಾದ ಹಾಡುಗಳಿಗೆ ಸಖತ್ ಸ್ಪೆಪ್ ಹಾಕಿದರು.
ಬಳಿಕ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಡಾಲಿ ಧನಂಜಯ, ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ ಎಂಬ ವಚನದಂತೆ ಎಲ್ಲರೂ ಕೂಡಿಕೊಂಡು ಪ್ರೀತಿಯಿಂದ ಅದ್ಧೂರಿಯಾಗಿ ಬೆಳಗಾವಿ ಉತ್ಸವ ಆಯೋಜಿಸಿದ್ದಾರೆ. ಜನಸಾಗರ ನೋಡಿ ತುಂಬಾ ಖುಷಿ ಆಗುತ್ತಿದೆ. ಪ್ರೀತಿ ಪ್ರೀತಿಯನ್ನು ಹುಟ್ಟು ಹಾಕುತ್ತದೆ ಎನ್ನುವ ಪರಿಕಲ್ಪನೆ ಇಟ್ಟುಕೊಂಡು ಬೆಳಗಾವಿ ಉತ್ಸವ ಆಯೋಜಿಸಿದ್ದಾರೆ. ನಾವು ಏನು ಕೊಡುತ್ತೆವೋ, ನಮಗೆ ವಾಪಸ್ಸು ಅದೇ ಬರುತ್ತದೆ. ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು. ಎಲ್ಲ ಭಾಷೆ, ಧರ್ಮಗಳವರು ಸಹಬಾಳ್ವೆಯಿಂದ ಇದ್ದಾಗ ಜೀವನ ಸುಂದರವಾಗಿರುತ್ತದೆ. ಹೀಗಾಗಿ, ಪರಸ್ಪರ ಪ್ರೀತಿಸುವುದನ್ನು ನಾವೆಲ್ಲರೂ ಕಲಿಯಬೇಕಿದೆ. ತುಂಬಾ ಕಷ್ಟದ ಜತೆಗೆ ಒಳ್ಳೆಯ ಕನಸ್ಸು ಕಟ್ಟಿಕೊಂಡು ಕೆಲಸ ಮಾಡಿದಾಗ ಬಡವರ ಮಕ್ಕಳು ಬೆಳೆಯುತ್ತಾರೆ. ತಂದೆ-ತಾಯಿ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಿ. ಅಭಿಮಾನಿಗಳು ಚೆನ್ನಾಗಿದ್ದಾಗ ಮಾತ್ರ ನಟರಿಗೆ ಖುಷಿಯಾಗುತ್ತದೆ ಎಂದರು.ನೀನಾಸಂ ಸತೀಶ ಮಾತನಾಡಿ, ಬೆಳಗಾವಿ ಮೈಸೂರಿನಷ್ಟೇ ಸುಂದರವಾಗಿದೆ. ಇಲ್ಲಿನ ಪರಿಸರ ತುಂಬಾ ಚೆನ್ನಾಗಿದೆ. ಅದರಂತೆಯೇ ಇಲ್ಲಿನ ಜನರೂ ಇದ್ದಾರೆ. ಕುಂದಾ, ಮಿರ್ಚಿ, ಮಂಡಕ್ಕಿ ಸವಿದೇವು. ಇದರ ಸವಿಯಂತೆಯೇ ಉತ್ತರ ಕರ್ನಾಟಕದ ಜನರ ಪ್ರೀತಿ ನಮ್ಮ ಮೇಲೆ ಇರುತ್ತದೆ. ಉತ್ತರ ಕರ್ನಾಟಕ ಭಾಗದ ಜನರು ಕೊಡುವ ಪ್ರೀತಿ ಸಾವಿರ ಕೋಟಿಗೆ ಸಮ ಎಂದು ಹಾಡಿ ಹೊಗಳಿದರು.ನಟ ವಶಿಷ್ಠ ಸಿಂಹ ಮಾತನಾಡಿ, ಬೆಳಗಾವಿ ಗಡಿ ಭಾಗ ತುಂಬಾ ಸೂಕ್ಷ್ಮ ಪ್ರದೇಶ. ಇಲ್ಲಿ ಹತ್ತು ಹಲವು ಸವಾಲುಗಳಿವೆ. ಅದಕ್ಕೆಲ್ಲ ಎದೆಗೊಟ್ಟು ನಮ್ಮ ಕನ್ನಡತನವನ್ನು ಬೆಳೆಸುವ ಕಾರ್ಯ ಇಲ್ಲಿನ ಜನ ಮಾಡುತ್ತಿದ್ದಾರೆ. ಭಾಷಾಭಿಮಾನ, ಭಾಷೆಯ ಪ್ರೀತಿ ಬೆಳಗಾವಿಯಲ್ಲಿ ಪ್ರಶಂಸನೀಯವಾಗಿದೆ. ಕುಂದಾದಷ್ಟೇ ಸಿಹಿಯಾದ ಪ್ರೀತಿ, ಇಲ್ಲಿನ ಜನರಲ್ಲಿದೆ ಎಂದರು.
ಆಯೋಜಕ, ಸಿನಿಮಾ ನಿರ್ಮಾಪಕ ಶಿವಾನಂದ ನೀಲಣ್ಣವರ ಮಾತನಾಡಿ, ಪ್ರತಿ ವರ್ಷ ಡಿ.27ಕ್ಕೆ ಬೆಳಗಾವಿ ಉತ್ಸವ ಆಯೋಜಿಸುತ್ತೇವೆ. ಇಡೀ ದೇಶಕ್ಕೆ ಮಾದರಿ ಆಗುವ ನಿಟ್ಟಿನಲ್ಲಿ, ಅದೇಷ್ಟೇ ಖರ್ಚಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾಡು, ನುಡಿ, ಬಡವರಿಗೆ ಸಹಾಯ ಮಾಡಲು ನಾನು ಸದಾಸಿದ್ಧ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಟಿಯರಾದ ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಅಭಿಲಾಷ, ಸೇರಿ ಮತ್ತಿತರ ಗಣ್ಯರು ಇದ್ದರು. ನಂತರ ಖ್ಯಾತ ಗಾಯಕ ರಾಜೇಶ ಕೃಷ್ಣನ್ ಮತ್ತು ತಂಡದಿಂದ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.