-ದೂರು ನೀಡಿದ್ರೂ ಅಧಿಕಾರಿಗಳ ನಿರ್ಲಕ್ಷ್ಯ। ನಗರದ ನಿವಾಸಿಯಿಂದ ಪತ್ರ ಬರೆದು ಮನವಿ
--
ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಪೀಣ್ಯ ಪ್ರದೇಶದಲ್ಲಿನ ಹದಗೆಟ್ಟಿರುವ, ಗುಂಡಿಗಳಿಂದ ತುಂಬಿರುವ ರಸ್ತೆಗಳನ್ನು ಸರಿಪಡಿಸುವಂತೆ ಕೋರಿ ದೀಪಕ್ ಎಂಬುವರು ಪ್ರಧಾನಮಂತ್ರಿ ಅವರ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ನಗರದ ಪ್ರಮುಖ ಕೈಗಾರಿಕೆ ಪ್ರದೇಶವಾಗಿರುವ ಪೀಣ್ಯದಲ್ಲಿ ವಿಶಾಲ ರಸ್ತೆಗಳಿವೆ. ಆದರೆ, ಬಹುತೇಕ ಎಲ್ಲಾ ರಸ್ತೆಗಳಲ್ಲೂ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಅನೇಕ ವರ್ಷಗಳಿಂದ ರಸ್ತೆ ಗುಂಡಿಗಳು ಬಿದ್ದಿವೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಅನೇಕ ಬಾರಿ ದೂರು ನೀಡಿದ್ದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ, ಪ್ರಧಾನಿ ಕಚೇರಿ ಮಧ್ಯಪ್ರವೇಶಿಸಬೇಕೆಂದು ಪತ್ರದಲ್ಲಿ ಕೋರಲಾಗಿದೆ.
ಪೀಣ್ಯದ ಟಿವಿಎಸ್ ಕ್ರಾಸ್ನಿಂದ ರಿಂಗ್ ರಸ್ತೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ಮಾತ್ರವಲ್ಲದೇ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ರಸ್ತೆಗಳು ಹಾಳಾಗಿವೆ. ಆದರೆ, ರಸ್ತೆಗಳನ್ನು ಸರಿಪಡಿಸುವ ಪ್ರಯತ್ನವನ್ನು ಪಾಲಿಕೆ ಅಧಿಕಾರಿಗಳು ಮಾಡುತ್ತಿಲ್ಲ ಎಂದು ದೀಪಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಲತಾಣಗಲ್ಲಿ ವಿಡಿಯೋ ಹಾಕಿದಾಗ ಕಾಟಾಚಾರಕ್ಕೆ ಎಂಬಂತೆ ಗುಂಡಿ ಮುಚ್ಚುತ್ತಾರೆ. ಅದು ಕೆಲವೇ ದಿನಗಳಲ್ಲಿ ಕಿತ್ತು ಬರುತ್ತದೆ ಎಂದು ದೀಪಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೀಣ್ಯ 100 ಅಡಿ ರಸ್ತೆ, ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಸಂಪರ್ಕ ರಸ್ತೆಗಳ ಗುಂಡಿ ಮುಚ್ಚುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮುರುಳಿ ಶ್ರೀನಿವಾಸ ಎಂಬುವರು ಮನವಿ ಮಾಡಿದ್ದಾರೆ. ಎಕ್ಸ್ನಲ್ಲಿ ರಸ್ತೆಯ ದುಸ್ಥಿತಿಯನ್ನು ವಿವರಿಸಿರುವ ಅವರು, ಪೀಣ್ಯ-ರಾಜಾಜಿನಗರ ನಡುವಿನ ಮಾರ್ಗದಲ್ಲಿಯು ಭಾರಿ ಪ್ರಮಾಣದ ಗುಂಡಿಗಳು ಸೃಷ್ಟಿಯಾಗಿವೆ. ಚಂದ್ರನ ಮೇಲಿನ ಕುಳಿಗಳು ಹೇಗಿರುತ್ತವೆ ಎಂದು ಅರಿಯಲು ಮಕ್ಕಳನ್ನು ಈ ರಸ್ತೆಗೆ ಕರೆತರಬೇಕು ಎಂದು ಮುರುಳಿ ಶ್ರೀನಿವಾಸ ವ್ಯಂಗ್ಯವಾಡಿದ್ದಾರೆ.
ನಗರದ ಕೇಂದ್ರ ಭಾಗವಾಗಿರುವ ಮೆಜೆಸ್ಟಿಕ್ ಬಳಿಯ ಓಕಳಿಪುರ ಜಂಕ್ಷನ್ ಬಳಿ ಗುಂಡಿಗಳಿಂದ ವಾಹನ ಸವಾರರು ಪರದಾಡುವಂತಾಗಿದೆ. ಮೆಜೆಸ್ಟಿಕ್ ಕಡೆಯಿಂದ ಓಕಳಿಪುರ ಜಂಕ್ಷನ್ ಮಾರ್ಗವಾಗಿ ಮಾಗಡಿ ರಸ್ತೆಯ ಕಡೆ ತೆರಳುವ ಓಕಳಿಪುರ ಬಸ್ ನಿಲ್ದಾಣ ಬಳಿ ರಸ್ತೆಯಲ್ಲಿ ಹಲವು ಗುಂಡಿಗಳು ಬಿದ್ದಿವೆ. ದಿನದ 24 ಗಂಟೆಯು ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿನ ಗುಂಡಿಗಳಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತವೆ. ಇದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.