;Resize=(412,232))
ಬೆಂಗಳೂರು : ಒಳಮೀಸಲಾತಿ ಸೇರಿ ಮತ್ತಿತರ ಸಮಸ್ಯೆಗಳು ನಿವಾರಣೆಯಾದರೆ ರಾಜ್ಯ ಸರ್ಕಾರ ಮುಂದಿನ 6 ತಿಂಗಳಲ್ಲಿ 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದೆ. ಅದಕ್ಕೆ ಪೂರಕವಾಗಿ ಹಣಕಾಸು ಇಲಾಖೆ ಈಗಾಗಲೇ 60 ಸಾವಿರ ಹುದ್ದೆ ಭರ್ತಿಗೆ ಅನುಮತಿಯನ್ನೂ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ಸರ್ಕಾರಿ ಖಾಲಿ ಹುದ್ದೆಗಳ ಭರ್ತಿಗೆ ಬದ್ಧವಾಗಿದೆ. ಈ ಕುರಿತು ಮುಖ್ಯಮಂತ್ರಿ ಅವರು ಬಜೆಟ್ನಲ್ಲಿ ಘೋಷಿಸುವುದಾಗಿ ಭರವಸೆ ನೀಡಿದ್ದು, ಖಾಲಿ ಹುದ್ದೆಗಳ ಭರ್ತಿ ಮಾಡಲಾಗುತ್ತದೆ. ಒಳಮೀಸಲಾತಿ ಸೇರಿ ಮತ್ತಿತರ ಸಮಸ್ಯೆಗಳ ಕಾರಣದಿಂದಾಗಿ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ ಎಂದರು.
2013ರಿಂದ 2018ರವರೆಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1.30 ಲಕ್ಷ ಹುದ್ದೆ ನೇಮಕಾತಿ ಮಾಡಲಾಗಿತ್ತು. ಆ ಅವಧಿಯಲ್ಲಿ ನಾನು ಸಾರಿಗೆ ಸಚಿವನಾಗಿ ಇಲಾಖೆಯಲ್ಲಿ 16 ಸಾವಿರ ನೇಮಕಾತಿ ಮಾಡಿದ್ದೆ. ಅಲ್ಲದೆ, 2023ರಿಂದ ಈವರೆಗೆ ಸಾರಿಗೆ ಇಲಾಖೆ ಮತ್ತು ಸಾರಿಗೆ ನಿಗಮಗಳಲ್ಲಿ ಒಂದು ಸಾವಿರ ಅನುಕಂಪದ ನೇಮಕಾತಿ ಸೇರಿ 10 ಸಾವಿರ ನೇಮಕಾತಿ ಮಾಡಲಾಗಿದೆ ಎಂದು ವಿವರಿಸಿದರು.