ರಾಜ್ಯದಲ್ಲಿ 2-3 ದಿನ ಸೆಕೆಯ ವಾತಾವರಣ : ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಸೆಕೆ ಹೆಚ್ಚಾಗಿದ್ದು, ಇನ್ನೂ ಎರಡ್ಮೂರು ದಿನ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Follow Us

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಸೆಕೆ ಹೆಚ್ಚಾಗಿದ್ದು, ಇನ್ನೂ ಎರಡ್ಮೂರು ದಿನ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 ರಾಜ್ಯದಲ್ಲಿ ಪೂರ್ವ ಮುಂಗಾರು ಅಬ್ಬರ ಕಡಿಮೆಯಾಗಿದೆ. ಹೀಗಾಗಿ, ಬಿಸಿಲು ಹೆಚ್ಚಾಗಿದೆ. ಇದರ ಪರಿಣಾಮ ಸೆಕೆ ಹೆಚ್ಚಾಗುತ್ತಿದೆ. ಏ.28 ರಿಂದ ಮತ್ತೆ ರಾಜ್ಯದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಆಗ ಸೆಕೆ ಕಡಿಮೆಯಾಗಲಿದೆ. ಉಳಿದಂತೆ ಅಲ್ಲಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಾಮಾಜ್ಯವಾಗಿ ಉಷ್ಣಾಂಶ ಹೆಚ್ಚಾದ ಸಂದರ್ಭದಲ್ಲಿ ಮೋಡ ಹಾಗೂ ವಾತಾವರಣದಲ್ಲಿ ತೇವಾಂಶ ಇರುವಾಗ ಸೆಕೆ ಹೆಚ್ಚಾಗುತ್ತದೆ. ಅದೇ ವಾತಾವರಣ ಇದೀಗ ನಿರ್ಮಾಣಗೊಂಡಿದೆ. ಇನ್ನೂ ಎರಡ್ಮೂರು ದಿನ ಹೆಚ್ಚಿನ ಸೆಕೆ ಇರಲಿದೆ.

3 ಜಿಲ್ಲೆಯಲ್ಲಿ 40 ಡಿಗ್ರಿಗೂ ಬಿಸಿಲು:

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಿದೆ. ಈಗಾಗಲೇ ಬೀದರ್‌, ಕಲಬುರಗಿ ಹಾಗೂ ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು 42.6 ಡಿ.ಸೆ ದಾಖಲಾದರೆ, ಬೀದರ್‌ ನಲ್ಲಿ 41.2, ರಾಯಚೂರಿನಲ್ಲಿ 40.6 ಡಿ.ಸೆ. ದಾಖಲಾಗಿದೆ. ಉಳಿದಂತೆ ರಾಜ್ಯದ ವಿವಿ ಜಿಲ್ಲೆಗಳಾದ ಕೊಪ್ಪಳದಲ್ಲಿ 38.1, ವಿಜಯಪುರ 37.8, ಬಾಗಲಕೋಟೆ 37.6, ಗದಗ 37.5, ಕಾರಾವಾರ 37.2, ದಾವಣಗೆರೆ 36.5, ಬೆಳಗಾವಿ ವಿಮಾನ ನಿಲ್ದಾಣ 36.4, ಹಾವೇರಿ 36, ಚಿತ್ರದುರ್ಗದಲ್ಲಿ 35.9, ಶಿವಮೊಗ್ಗ 35.6, ಧಾರಾವಾಡ 35.4 ಡಿ.ಸೆ ದಾಖಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ 35 ಡಿ.ಸೆಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ.