ಮನೆಗೇ ಬರುತ್ತೆ ಅಡುಗೆ ಸಿಲಿಂಡರ್‌ : ಗ್ಯಾಸ್‌ ಏಜೆನ್ಸಿ ಮುಂದೆ ಕ್ಯೂ ನಿಲ್ಬೇಡಿ

Published : Mar 30, 2026, 06:22 AM IST
LPG gas

ಸಾರಾಂಶ

ರಾಜ್ಯಕ್ಕೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಶೇ.68 ರಷ್ಟು ಹೆಚ್ಚಿಸಲಾಗಿದ್ದು, ರಾಜ್ಯ ಸರ್ಕಾರ ಭಾನುವಾರದಿಂದಲೇ ಹೆಚ್ಚುವರಿ ವಾಣಿಜ್ಯ ಸಿಲಿಂಡರ್‌ಗಳನ್ನು ಅವಶ್ಯಕತೆ ಹಾಗೂ ಆದ್ಯತೆಗೆ ತಕ್ಕಂತೆ ಪೂರೈಕೆ ಮಾಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

  ಬೆಂಗಳೂರು :  ರಾಜ್ಯಕ್ಕೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಶೇ.68 ರಷ್ಟು ಹೆಚ್ಚಿಸಲಾಗಿದ್ದು, ರಾಜ್ಯ ಸರ್ಕಾರ ಭಾನುವಾರದಿಂದಲೇ ಹೆಚ್ಚುವರಿ ವಾಣಿಜ್ಯ ಸಿಲಿಂಡರ್‌ಗಳನ್ನು ಅವಶ್ಯಕತೆ ಹಾಗೂ ಆದ್ಯತೆಗೆ ತಕ್ಕಂತೆ ಪೂರೈಕೆ ಮಾಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಗ್ರಾಹಕರು ಡಿಸ್ಟ್ರಿಬ್ಯೂಟರ್ಸ್‌ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು. ಮೊಬೈಲ್‌ ಮೂಲಕ ಬುಕ್‌ ಮಾಡಿದವರಿಗೆ ಮನೆ ಬಾಗಿಲಿಗೆ ಸಿಲಿಂಡರ್‌ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹೆಚ್ಚು ಹಣ ಪಡೆದರೆ ಪರವಾನಗಿ ರದ್ದು:

ಯಾರೂ ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಬಾರದು. ಇದು ಶಿಕ್ಷಾರ್ಹ ಅಪರಾಧ. ಜತೆಗೆ ಡಿಸ್ಟ್ರಿಬ್ಯೂಟರ್‌ಗಳು ಹೆಚ್ಚುವರಿ ಹಣ ಪಡೆದರೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಶಿಕ್ಷಣ ಸಂಸ್ಥೆ, ವಸತಿ ನಿಲಯ, ಆಸ್ಪತ್ರೆ ಮತ್ತು ಇತರ ಅವಶ್ಯಕ ಸಂಸ್ಥೆಗಳಿಗೆ 4,200 ಸಿಲಿಂಡರ್ ಹಂಚಿಕೆ ಮಾಡಲಾಗಿದೆ. ವಿಮಾನ ನಿಲ್ದಾಣ, ರೈಲು ಹಾಗೂ ಬಸ್‌ ನಿಲ್ದಾಣದ ಕ್ಯಾಂಟೀನ್‌, ಸರ್ಕಾರಿ ಹಾಗೂ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಗೆ 1,200 ಸಿಲಿಂಡರ್‌, ಹೋಟೆಲ್, ಢಾಬಾ, ರೆಸ್ಟೋರೆಂಟ್, ಕ್ಯಾಂಟೀನ್, ಕೆಫೆ, ಬೇಕರಿ, ಸಮುದಾಯ ಅಡುಗೆ ಕೇಂದ್ರ, ಪಿ.ಜಿ. ಕ್ಯಾಂಟೀನ್‌ನಂಥ ಉದ್ಯಮಕ್ಕೆ 17,500 ಸಿಲಿಂಡರ್ ಹಂಚಿಕೆ ಮಾಡಲಾಗಿದೆ. ಈವರೆಗೆ ಪೂರೈಸುತ್ತಿದ್ದ 10,000 ಸಿಲಿಂಡರ್‌ಗಿಂತ ಹೆಚ್ಚುವರಿ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇನ್ನು ಬೀಜ ಸಂಸ್ಕರಣೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಮೀನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆ ಕೇಂದ್ರಗಳಿಗೆ 6,000 ಸಿಲಿಂಡರ್‌ ಸೇರಿ ಒಟ್ಟು 29,463 ವಾಣಿಜ್ಯ ಸಿಲಿಂಡರ್‌ ವಿತರಿಸಲಾಗುತ್ತಿದೆ ಎಂದರು.

ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣ:

ಗ್ಯಾಸ್‌ ಬಿಕ್ಕಟ್ಟಿಗೂ ರಾಜ್ಯಕ್ಕೂ ಸಂಬಂಧವಿಲ್ಲ. ಇದಕ್ಕೆ ಕಾರಣ ಕೇಂದ್ರ ಸರ್ಕಾರ. ಪರಿಹರಿಸಬೇಕಾದ ಹೊಣೆಯೂ ಅವರ ಮೇಲಿದೆ. ಈಗಾಗಲೇ ಪ್ರಧಾನಿ ಅವರ ಜತೆಗೆ ಸಭೆ ನಡೆಸಿದ್ದು, ಮಾ.31ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಅಂದು ವಾಣಿಜ್ಯ ಸಿಲಿಂಡರ್‌ಗಳ ಬಿಕ್ಕಟ್ಟಿನ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಳ ಮಾಡಿರುವ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಗ್ಯಾಸ್‌ ಅಕ್ರಮ 27 ಎಫ್‌ಐಆರ್‌ ದಾಖಲು

ಗೃಹ ಬಳಕೆಯ ಸಿಲಿಂಡರ್‌ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 1,169 ಪ್ರಕರಣಗಳಲ್ಲಿ 1,603 ಸಿಲಿಂಡರ್‌ ವಶಪಡಿಸಿಕೊಳ್ಳಲಾಗಿದೆ. ತಪ್ಪಿತಸ್ಥರ ಮೇಲೆ 27 ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಮುನಿಯಪ್ಪ ತಿಳಿಸಿದರು.

ಆಟೋ ಎಲ್‌ಪಿಜಿ ದರ ಹೆಚ್ಚಿಸದಂತೆ ಸೂಚನೆ

ಆಟೋ ರಿಕ್ಷಾಗಳಿಗೂ ಎಲ್‌ಪಿಜಿ ಪೂರೈಕೆ ಮಾಡುತ್ತಿದ್ದು, ಬೇಡಿಕೆ ಇದ್ದಂಥ ಕಡೆ 3,000 ಸಿಲಿಂಡರ್‌ ಕೊಡುತ್ತಿದ್ದೇವೆ. ಆದರೆ ಖಾಸಗಿ ಏಜೆನ್ಸಿಗಳಲ್ಲಿ ದರ ಹೆಚ್ಚಿಸಿರುವುದರಿಂದ ಖಾಸಗಿಯಲ್ಲಿ ಪಡೆಯುತ್ತಿದ್ದ ಆಟೋ ಚಾಲಕರು ಇಂಡಿಯನ್‌ ಆಯಿಲ್‌ನಂಥ ಬಂಕ್‌ಗಳಿಗೆ ಬರುತ್ತಿದ್ದಾರೆ. ಹೀಗಾಗಿ ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ವಿನಾಕಾರಣ ದರ ಹೆಚ್ಚಳ ಮಾಡದಂತೆ ಖಾಸಗಿ ಏಜೆನ್ಸಿಗಳಿಗೆ ಆದೇಶಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಆಟೋ ಎಲ್‌ಪಿಜಿ ಪೂರೈಕೆಯನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯಾದ್ಯಂತ 72 ಆಟೋ ಎಲ್‌ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳು (ALDS) ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೇವಲ ಬೆಂಗಳೂರು ನಗರವೊಂದರಲ್ಲೇ 31 ಕೇಂದ್ರಗಳು ಲಭ್ಯವಿವೆ. ವಿನಾಕಾರಣ ದರ ಹೆಚ್ಚಳ ಮಾಡಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದರು.

- ಹೋಟೆಲ್‌ ಸಿಲಿಂಡರ್‌ ಪೂರೈಕೆ 68%ಕ್ಕೆ ಹೆಚ್ಚಳ

- 10 ಸಾವಿರ ಬದಲು 17500 ಸಿಲಿಂಡರ್ ಪೂರೈಕೆ

- ಮನೆ ಗ್ಯಾಸ್‌ ಹೋಟೆಲ್‌ಗೆ ಬಳಸಿದರೆ ಶಿಕ್ಷೆ: ಸಚಿವ

- ಗೃಹ ಬಳಕೆಯ ಸಿಲಿಂಡರ್‌ಗಳನ್ನು ಯಾರೂ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು. ಅದು ಶಿಕ್ಷಾರ್ಹ ಅಪರಾಧ

- ಗ್ಯಾಸ್‌ ಡಿಸ್ಟ್ರಿಬ್ಯೂಟರ್‌ಗಳು ಜನರಿಂದ ಹೆಚ್ಚುವರಿ ಹಣ ಪಡೆಯಬಾರದು. ಹಾಗೆ ಮಾಡಿದರೆ ಲೈಸೆನ್ಸ್‌ ರದ್ದು

- ಹೋಟೆಲ್‌, ಡಾಬಾ, ರೆಸ್ಟೋರೆಂಟ್‌, ಕ್ಯಾಂಟೀನ್‌, ಕೆಫೆ, ಬೇಕರಿ, ಪಿಜಿಗಳಿಗೆ 17500 ಸಿಲಿಂಡರ್‌ಗಳ ಪೂರೈಕೆ

- ಅವಶ್ಯಕತೆ, ಆದ್ಯತೆಗೆ ತಕ್ಕಂತೆ ಹೆಚ್ಚುವರಿ ವಾಣಿಜ್ಯ ಸಿಲಿಂಡರ್‌ಗಳು ಭಾನುವಾರದಿಂದ ಪೂರೈಕೆ: ಮುನಿಯಪ್ಪ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜಿಬಿಎ ಬಜೆಟ್‌ಗೆ ರಾಜ್ಯ, ಕೇಂದ್ರ ಸರ್ಕಾರದಿಂದ ₹4196 ಕೋಟಿ ನೀರಿಕ್ಷೆ
ಡಿಜಿಪಿ ಅಲೋಕ್ ಕುಮಾರ್‌ಗೆ ಕಳಂಕ ತರಲು ಜೈಲು ದೃಶ್ಯ ವೈರಲ್ ಮಾಡಿದ ಕೈದಿಗಳು