ಅನರ್ಹ ಪಡಿತರ ಚೀಟಿ ಪತ್ತೆಗೆ ಮನೆ ಮನೆ ಸರ್ಚಿಂಗ್‌ : ಪಿಡಿಒ, ಗ್ರಾಮ ಲೆಕ್ಕಿಗರಿಂದ ಖುದ್ದು ಪರಿಶೀಲನೆ

Published : Mar 11, 2025, 06:57 AM IST
Ration card

ಸಾರಾಂಶ

ಅನರ್ಹ ಬಿಪಿಎಲ್‌ ಫಲಾನುಭವಿಗಳನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ, ಮನೆಗಳಿಗೆ ಭೇಟಿ ನೀಡಿ, ಖುದ್ದಾಗಿ ಪರಿಶೀಲಿಸಲು ಉದ್ದೇಶಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

 ವಿಧಾನ ಪರಿಷತ್ : ಅನರ್ಹ ಬಿಪಿಎಲ್‌ ಫಲಾನುಭವಿಗಳನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ, ಮನೆಗಳಿಗೆ ಭೇಟಿ ನೀಡಿ, ಖುದ್ದಾಗಿ ಪರಿಶೀಲಿಸಲು ಉದ್ದೇಶಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

ಸೋಮವಾರ ಪರಿಷತ್‌ನಲ್ಲಿ ಬಿಜೆಪಿಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಪಿಎಲ್‌ ಕಾರ್ಡ್‌ ಹೊಂದಿರುವರ ಪೈಕಿ ಸುಮಾರು 20 ಲಕ್ಷ ಅನರ್ಹರಿದ್ದಾರೆ, ಇವರೆಲ್ಲರೂ ಎಪಿಎಲ್‌ ಕಾರ್ಡ್‌ ಪಡೆಯಬೇಕಿತ್ತು. ಈ ಹಿಂದೆ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಲು ಪರಿಷ್ಕರಣೆಗೆ ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ, ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ, ಗ್ರಾಮ ಲೆಕ್ಕಿಗ ಸೇರಿದಂತೆ ಮುಂತಾದವರನ್ನು ಒಳಗೊಂಡ ಸಮಿತಿ ರಚಿಸಿ, ಈ ಸಮಿತಿ ಮೂಲಕ ಖುದ್ದಾಗಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದರು.

ಸುಮಾರು 91 ಸಾವಿರ ಅರ್ಜಿಗಳನ್ನು ಪರಿಶೀಲಿಸಿ ಪಡಿತರ ಚೀಟಿ ನೀಡುವುದು ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಬಿಪಿಎಲ್‌ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು. ಕೇಂದ್ರ ಸರ್ಕಾರದ ಮಾನದಂಡಗಳನ್ನು ಮುಂದಿಟ್ಟುಕೊಂಡು ಪರಿಷ್ಕರಣೆ ಮಾಡಲಾಗುವುದು, ಇದಕ್ಕೆ ಎಲ್ಲ ಪಕ್ಷದ ನಾಯಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಸಿ.ಟಿ.ರವಿ ಮಾತನಾಡಿ, ಕಳೆದ ವರ್ಷದಿಂದ ಯಾರಿಗೂ ಪಡಿತರ ಚೀಟಿ ಕೊಡದೆ ಸ್ಥಗಿತಗೊಳಿಸಲಾಗಿದೆ. ಅರ್ಜಿ ಹಾಕಿದವರಿಗೂ ಕೊಡುತ್ತಿಲ್ಲ. ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ನಿಗದಿತ ದಿನದಲ್ಲಿ ಮಾತ್ರ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಅಥವಾ ತೆಗೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸರ್ವರ್‌ ಡೌನ್‌ ಸಮಸ್ಯೆ ಎದುರಾಗುತ್ತಿದೆ. ಈ ಎಲ್ಲ ಸಮಸ್ಯೆ ಬಗೆಹರಿಸಬೇಕು. ಕಾಲಮಿತಿಯಲ್ಲಿ ಪಡಿತರ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಅನರ್ಹರು ಅಕ್ರಮ ಮಾರ್ಗದಲ್ಲಿ ಪಡಿತರ ಚೀಟಿ ಪಡೆದಿರುವ ಅಂದಾಜಿದೆ

ಇವರ ಪತ್ತೆಗೆ ಈ ಹಿಂದೆ ಆರಂಭಿಸಿದ್ದ ತಪಾಸಣೆ ಅಭಿಯಾನಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ರೇಕ್‌

ಇದೀಗ ಕೇಂದ್ರ ಸರ್ಕಾರದ ಮಾನದಂಡ ಆಧರಿಸಿ ಹೊಸದಾಗಿ ಮನೆಮನೆ ಪರಿಶೀಲಿಸಲು ಸರ್ಕಾರ ನಿರ್ಧಾರ

ಮನೆ ಮನೆಗೆ ತೆರಳಿ ಅವರು ಹೊಂದಿರುವ ಸೌಕರ್ಯಗಳನ್ನು ಆಧರಿಸಿ ಅವರ ಬಿಪಿಎಲ್‌ ಅರ್ಹತೆ ನಿರ್ಧಾರ

ಒಂದು ವೇಳೆ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ ಬಿಪಿಎಲ್‌ ಬದಲಾಗಿ ಎಪಿಎಲ್‌ ಕಾರ್ಡ್‌ ವಿತರಣೆ

ಅದಾದ ಬಳಿಕ ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿ ವಿತರಣೆ ಆರಂಭ: ಸಚಿವ ಮುನಿಯಪ್ಪ ಭರವಸೆ

ಶೀಘ್ರ ಹೊಸ ಪಡಿತರ

ಚೀಟಿ ವಿತರಣೆ ಶುರು

91000 ಅರ್ಜಿ ಪರಿಶೀಲಿಸಿ ಪಡಿತರ ಚೀಟಿ ನೀಡುವುದು ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಬಿಪಿಎಲ್‌ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು. ಜೊತೆಗೆ ಕೇಂದ್ರ ಸರ್ಕಾರದ ಮಾನದಂಡಗಳನ್ನು ಮುಂದಿಟ್ಟುಕೊಂಡು ಪರಿಷ್ಕರಣೆ ಮಾಡಲಾಗುವುದು,

ಕೆ.ಎಚ್‌.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗ್ಯಾರಂಟಿಯಿಂದಾಗಿ ತಲಾ ಆದಾಯದಲ್ಲಿ ರಾಜ್ಯ ನಂ.1 : ಸಿದ್ದರಾಮಯ್ಯ
ಅರ್ಹರು ಪಂಚ ಗ್ಯಾರಂಟಿ ಯೋಜನೆಗಳನ್ನು ಸದ್ಬಳಸಿಕೊಳ್ಳಿ