;Resize=(412,232))
ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಧಾನಸೌಧಕ್ಕೆ ಮುಕ್ತ ಪ್ರವೇಶ ಕಲ್ಪಿಸುವ ‘ಫ್ರೀಡಂ ಹಬ್ಬ’ಕ್ಕೆ ಸಾವಿರಾರು ಮಕ್ಕಳೊಂದಿಗೆ ಜನಸಾಗರವೇ ಹರಿದು ಬಂತು.
ಬೆಳಗ್ಗೆಯಿಂದ ತಡರಾತ್ರಿವರೆಗೆ ವಿಧಾನಸೌಧ ಆವರಣ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ನೈಜ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆಯಿಂದ ಮಕ್ಕಳ ಕಲರವ ಇದ್ದರೆ, ರಾತ್ರಿ ವೇಳೆಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತ ವಿಧಾನಸೌಧ ಜನರನ್ನು ತನ್ನತ್ತ ಸೆಳೆಯಿತು. ಖ್ಯಾತ ಕಲಾವಿದರಿಂದ ಗಾಯನ, ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ಬಾಣ ಬಿರುಸುಗಳ ಪ್ರದರ್ಶನ ಜರುಗಿತು.
ಮಕ್ಕಳಿಗಾಗಿ ವಿಜ್ಞಾನ ಪ್ರಯೋಗಗಳು, ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಸಾವಿರಾರು ಮಕ್ಕಳು ತಮ್ಮ ಪಾಲಕರೊಂದಿಗೆ ವಿಜ್ಞಾನ ಪ್ರದರ್ಶನಗಳನ್ನು ವೀಕ್ಷಿಸಿ ಸಂತಸ ಪಟ್ಟರು. ವಿಜ್ಞಾನದ ಕುರಿತು ಕುತೂಹಲವನ್ನು ತಣಿಸಿಕೊಂಡರು. ದೇಶದ ವಿವಿಧ ಸಂಸ್ಕೃತಿ ಅನಾವರಣ: ಇಂಡಿಯಾ ಪರೇಡ್ನಲ್ಲಿ ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಉಡುಗು ತೊಡುಗೆಗಳನ್ನು ತೊಟ್ಟ ಜನರು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ಕರ್ನಾಟಕದ ಜಾನಪದ ಕಲೆಗಳು, ವಿವಿಧ ಜಿಲ್ಲೆಗಳ ಪರಂಪರೆ ಹಾಗೂ ಭಾರತದ ನಾನಾ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ 40ಕ್ಕೂ ಹೆಚ್ಚು ಕಲಾತಂಡಗಳ ವರ್ಣರಂಜಿತ ಮೆರವಣಿಗೆ ನಡೆಯಿತು.
ಬ್ರೋಧ ವಿ, ವಾರಿಜಶ್ರೀ ವೇಣುಗೋಪಾಲ, ರಘು ದೀಕ್ಷಿತ್, ಎಂ.ಬಿ. ಪಲ್ಲವಿ ಸೇರಿದಂತೆ ಹೆಸರಾಂತ ಗಾಯಕರು ಸಂಜೆಯಿಂದಲೇ ಹಲವು ದೇಶಭಕ್ತಿ ಗೀತೆ, ಕನ್ನಡ, ಇಂಗ್ಲಿಷ್ ಮತ್ತು ಹಿಂದೆ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಲಕ್ಷಾಂತರ ಜನರಿಗೆ ಮನೋರಂಜನೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಬಾಣಬಿರುಸುಗಳ ಪ್ರದರ್ಶನ ಜರುಗಿತು.
ಸ್ಥಳೀಯ ಖಾದ್ಯಗಳು, ವಿಭಿನ್ನ ಪಾಕಪದ್ಧತಿಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ಮಳಿಗೆಗಳು ತೆರೆಯಲಾಗಿತ್ತು. ವಿಧಾನಸೌಧದ ಸುತ್ತಾಟ, ಸಂತಸ: ವಿಧಾನಸೌಧಕ್ಕೆ ಮಕ್ಕಳೊಂದಿಗೆ ಆಗಮಿಸಿದ್ದ ಸಾವಿರಾರು ಜನರು ವಿಧಾನಸೌಧದ ಮೂಲೆ ಮೂಲೆ ಸುತ್ತಾಡಿದರು. ಗಾಂಧಿ ಪ್ರತಿಮೆ ಸೇರಿದಂತೆ ಆವರಣದ ವಿವಿಧೆಡೆ ಇರುವ ಪ್ರತಿಮೆಗಳ ಎದುರು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟರು. ನೋಂದಣಿ ಮಾಡಿಕೊಂಡಿದ್ದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ಸುಮಾರು 15,000 ಸಾವಿರ ಜನರಿಗೆ ವಿಧಾನಸೌಧಕ್ಕೆ ಪ್ರವೇಶ ನೀಡಲಾಗಿತ್ತು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಜನರು ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರಜಾಪ್ರಭುತ್ವ ಸೌಧದಲ್ಲಿ ಆಚರಿಸಿದ್ದಾರೆ.
- ಕೃಷ್ಣ ಬೈರೇಗೌಡ, ಸಚಿವ, ಬೆಂಗಳೂರು ನಗರಾಭಿವೃದ್ಧಿ
ಮಕ್ಕಳ ಮೇಳ, ಫ್ರೀಡಂ ಪಾತ್
ಮಕ್ಕಳಿಗಾಗಿ ವಿಶೇಷವಾಗಿ ರಸಪ್ರಶ್ನೆ ಸ್ಪರ್ಧೆಗಳು, ಕಥೆ ಹೇಳುವ ಕಾರ್ಯಾಗಾರಗಳು, ಸೃಜನಾತ್ಮಕ ಕರಕುಶಲ ಚಟುವಟಿಕೆಗಳು ಹಾಗೂ ಸಂವಾದಾತ್ಮಕ ಆಟಗಳನ್ನು ಏರ್ಪಡಿಸಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಮತ್ತು ಹೋರಾಟಗಾರರ ಜೀವನ ಚರಿತ್ರೆಯನ್ನು ಸಾರುವ ವಿಶೇಷ ಪ್ರದರ್ಶನ ಮಂಟಪಗಳನ್ನು ವಿಧಾನಸೌಧ ಆವರಣದಲ್ಲಿ ನಿರ್ಮಿಸಲಾಗಿತ್ತು.
3 ಮೆಟ್ರೋ ನಿಲ್ದಾಣದ ಗೇಟ್ಗಳು ಬಂದ್
ಫ್ರೀಡಂ ಹಬ್ಬಕ್ಕೆ ಸಂಜೆ ಜನ ಸಾಗರವೇ ಹರಿದು ಬಂತು.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಬ್ಬನ್ಪಾರ್ಕ್ ಮತ್ತು ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದರು.ರಾತ್ರಿ ಕಾರ್ಯಕ್ರಮ ಮುಗಿದ ನಂತರ ಸುಮಾರು 9-45ರ ನಂತರ ಈ ಎರಡು ರೈಲುಗಳ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸಲಾಯಿತು.