ಅಕ್ರಮವಾಗಿ ಪಡೆದಿದ್ದ ₹6.5 ಲಕ್ಷ ಎಚ್ಆರ್‌ಎ ಭರಿಸಲು ಬಿಇಒ ನಿರ್ಧಾರ

KannadaprabhaNewsNetwork |  
Published : May 25, 2025, 01:11 AM ISTUpdated : May 25, 2025, 01:12 AM IST
ಚನ್ನಪ್ಪಗೌಡ | Kannada Prabha

ಸಾರಾಂಶ

ವರದಿಗೆ ಸ್ಪಂದಿಸಿದ ಧಾರವಾಡ ಡಿಡಿಪಿಐ ಎಸ್.ಎ. ಕೆಳದಿಮಠ ಕಾರಣ ಕೇಳಿ ಬಿಇಒಗೆ ನೋಟಿಸ್ ನೀಡಿದ್ದರು.

ಹುಬ್ಬಳ್ಳಿ: ಎರಡೂವರೆ ವರ್ಷ ಹುಬ್ಬಳ್ಳಿ ಶಹರ ಬಿಇಒ ಕಚೇರಿಯಲ್ಲೇ ವಾಸ್ತವ್ಯ ಹೂಡಿ ಅಕ್ರಮವಾಗಿ ಪಡೆದಿದ್ದ ₹ 6.5 ಲಕ್ಷ ಎಚ್‌ಆರ್‌ಎ ಮೊತ್ತವನ್ನು ಕೊನೆಗೂ ಸರ್ಕಾರಕ್ಕೆ ವಾಪಸ್ ನೀಡಲು ಬಿಇಒ ಚನ್ನಪ್ಪಗೌಡ ನಿರ್ಧರಿಸಿದ್ದಾರೆ. ಚನ್ನಪ್ಪಗೌಡ ಅವರ ಪರವಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕನ್ನಡಪ್ರಭಕ್ಕೆ ಕರೆಮಾಡಿ ಎಚ್‌ಆರ್‌ಎ ಸರ್ಕಾರಕ್ಕೆ ವಾಪಸ್ ಭರಿಸುವ ವಾಗ್ದಾನ ನೀಡಿದರು.

ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡ ಅವರು ತಮ್ಮ ಕಚೇರಿಯ ಒಂದು ಭಾಗವನ್ನು ಸುಸಜ್ಜಿತ ಮನೆಯಂತೆ ಪರಿವರ್ತಿಸಿ ಎರಡೂವರೆ ವರ್ಷಗಳಿಂದ ವಾಸವಾಗಿದ್ದ ಮತ್ತು ಅಕ್ರಮವಾಗಿ ಎಚ್‌ಆರ್‌ಎ ಪಡೆದು ಸರ್ಕಾರವನ್ನು ವಂಚಿಸಿದ್ದ ಪ್ರಕರಣವನ್ನು ಕನ್ನಡಪ್ರಭ ಬಯಲು ಮಾಡಿತ್ತು.

ಈ ವರದಿಗೆ ಸ್ಪಂದಿಸಿದ ಧಾರವಾಡ ಡಿಡಿಪಿಐ ಎಸ್.ಎ. ಕೆಳದಿಮಠ ಕಾರಣ ಕೇಳಿ ಬಿಇಒಗೆ ನೋಟಿಸ್ ನೀಡಿದ್ದರು. ಬಿಇಒ ಅವರು ನೋಟಿಸಿಗೆ ನೀಡಿದ ಉತ್ತರದಲ್ಲಿ ನಾನು ಕಚೇರಿಯಲ್ಲಿ ವಾಸ್ತವ್ಯ ಮಾಡಿಲ್ಲ,ಬದಲಾಗಿ ವಿದ್ಯಾನಗರದ ಶಿಕ್ಷಕಿ ಶೈಲಜಾ ಹಿರೇಮಠ ಅವರ ಮನೆಯಲ್ಲಿ ಇರುವುದಾಗಿ ತಿಳಿಸಿ, ಶೈಲಜಾ ಅವರಿಂದ ದೃಢೀಕರಣ ಪತ್ರ ಕೊಡಿಸಿದ್ದರು.

ಆದರೆ, ಈ ಪ್ರಕರಣದ ಸತ್ಯಾಸತ್ಯತೆ ಕುರಿತಂತೆ ಪೂರಕ ದಾಖಲೆಗಳೊಂದಿಗೆ ಶಿಕ್ಷಕ ಸಂಘಟನೆಯ ಎಸ್.ವಿ. ಗಡದಿನ್ನಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು.

ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಡಿಡಿಪಿಐ ಇತ್ತೀಚೆಗೆ ಬಿಇಒ ಕಚೇರಿಗೆ ಬಂದು ವಿಚಾರಣೆ ನಡೆಸಿದಾಗ ಅಲ್ಲಿನ ಸಿಸಿ ಟಿವಿ, ಪಕ್ಕದ ಪೊಲೀಸ್ ಠಾಣೆಯ ಸಿಸಿ ಟಿವಿ ಪುಟೇಜ್ ಮತ್ತು ಚನ್ನಪ್ಪಗೌಡ ಅವರ ಮೊಬೈಲಿನ ಎರಡೂವರೆ ವರ್ಷದ ಲೋಕೇಷನ್ ಪಡೆದಿದ್ದರು.16 ಶಿಕ್ಷಕರು ಹೇಳಿಕೆ ನೀಡಿ, ದಾಖಲೆ ಒದಗಿಸಿದ್ದರು.

ಪ್ರಕರಣದ ಗಂಭೀರತೆ ಅರಿತ ಮತ್ತು ಮುಂದಿನ ತಿಂಗಳು ನಿವೃತ್ತಿ ಆಗುತ್ತಿರುವ ಚನ್ನಪ್ಪಗೌಡ ಅವರಿಗೆ ಪೆನ್ಶನ್ನಿಗೆ ಎನ್.ಒ.ಸಿ. ಪಡೆಯುವುದು ಕಷ್ಟಸಾಧ್ಯ ಎನಿಸಿದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಮೊರೆ ಹೋಗಿದ್ದಾರೆ. ಈ ಪ್ರಕರಣ ಆಲಿಸಿದ ಹೊರಟ್ಟಿ ಅವರು, ಸರ್ಕಾರಿ ಕಚೇರಿಯಲ್ಲಿ ಅಕ್ರಮ ವಾಸ್ತವ್ಯ ಹೂಡಿಯೂ ₹6.5 ಲಕ್ಷ ಎಚ್ ಆರ್ ಎ ಪಡೆದು ಸರ್ಕಾರವನ್ನು ವಂಚಿಸುವುದು ತಪ್ಪು ಎಂದು ಚನ್ನಪ್ಪಗೌಡರಿಗೆ ಬುದ್ಧಿವಾದ ಹೇಳಿ ತಕ್ಷಣ ಆ ಹಣ ಸರ್ಕಾರಕ್ಕೆ ಮರುಪಾವತಿ ಮಾಡುವಂತೆ ಸೂಚಿಸಿದ್ದಾರೆ.

ಈ ವಿಷಯವನ್ನು ಹೊರಟ್ಟಿ ಅವರು ಕನ್ನಡಪ್ರಭಕ್ಕೆ ದೃಢಪಡಿಸಿದರು.

ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡ ಕಚೇರಿಯಲ್ಲಿ ವಾಸ್ತವ್ಯ ಹೂಡಿಯೂ ಅಕ್ರಮವಾಗಿ ಎಚ್ ಆರ್ ಎ ಪಡೆದು ಸರ್ಕಾರಕ್ಕೆ ವಂಚಿಸಿದ್ದು ತಪ್ಪು. ಆ ಎಲ್ಲ ಎಚ್ ಆರ್ ಎ ಮೊತ್ತವನ್ನು ಸರ್ಕಾರಕ್ಕೆ ವಾಪಸ್ ಭರಿಸಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹೇಳುತ್ತೇನೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಜ ಕೃಷಿ; ಆನಂದಮಯ ಜೀವನಕ್ಕೆ ದಾರಿ ಕುರಿತು 3 ದಿನಗಳ ತರಬೇತಿ
ಸಿದ್ದರಾಮಯ್ಯ ಪರ, ವಿರುದ್ಧ ಡಿನ್ನರ್ ಮೀಟಿಂಗ್‌ಗೆ ಸೀಮಿತ