ಶಿಗ್ಗಾಂವಿ: ಅನೇಕರು ಬಂದು ಅನೇಕ ವಿಚಾರ ಹೇಳುತ್ತಾರೆ. ಶಾಶ್ವತವಾಗಿ ಹಾಲು ಮತ ಸಮಾಜದ ಜತೆಗೆ ಬಸವರಾಜ ಬೊಮ್ಮಾಯಿ ಇರುತ್ತಾರೆ. ಅವರ ಪುತ್ರ ಭರತ್ ಬೊಮ್ಮಾಯಿ ಅವರನ್ನು ನಿಮ್ಮ ಮಗನೆಂದು ತಿಳಿದು ಈ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿ ಎಂದು ಮಾಜಿ ಸಚಿವ ಬೈರತಿ ಬಸವರಾಜ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ತಮ್ಮ ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವ ಸ್ಥಾನ ಕೊಟ್ಟು ಇಡೀ ರಾಜ್ಯ ಸುತ್ತಲೂ ಹೇಳಿ ಸಮುದಾಯದ ಅಭಿವೃದ್ಧಿ ಮಾಡಲು ಹೇಳಿದರು. ಅನೇಕ ಪಟ್ಟಣಗಳಲ್ಲಿ ಸಮುದಾಯ ಭವನಕ್ಕೆ ಜಾಗ ಕೊಟ್ಡು ಹಣ ನೀಡಿದ್ದಾರೆ ಎಂದರು.ಈ ಚುನಾವಣೆಯಲ್ಲಿ ಬೊಮ್ಮಾಯಿ ಅವರು ತಮ್ಮ ಮಗನಿಗೆ ಟಿಕೆಟ್ ಬೇಕು ಅಂತ ಕೇಳಿರಲಿಲ್ಲ. ವರಿಷ್ಠರು ತೀರ್ಮಾನ ಮಾಡಿದ್ದಾರೆ. ಭರತ್ ಬೊಮ್ಮಾಯಿ ಯುವಕ ಇದ್ದಾನೆ, ನಿಮ್ಮ ಮನೆ ಮಗ ಇದ್ದಾನೆ. ಅವನಿಗೆ ಆಶೀರ್ವದಿಸಿ ಎಂದರು.ಮೈಲಾರದಲ್ಲಿ ವಸತಿ ಶಾಲೆ ಮಾಡಲು ನಮ್ಮ ಸಮುದಾಯದ ಸ್ವಾಮೀಜಿ ಹೇಳಿದಾಗ ಬೊಮ್ಮಾಯಿ ಅವರು ಮರು ಮಾತನಾಡದೇ ₹೧೦ ಕೋಟಿ ಕೊಟ್ಟಿದ್ದಾರೆ. ಹೊಸದುರ್ಗ ಶಾಖಾ ಮಠದ ಅಭಿವೃದ್ಧಿಗೆ ಐದು ಕೋಟಿ ನೀಡಿದ್ದಾರೆ. ಚುನಾವಣೆ ಬರುತ್ತವೆ, ಹೋಗುತ್ತವೆ. ಆದರೆ ನಮ್ಮ ಸಮುದಾಯದ ಅಭಿವೃದ್ಧಿ ನಿರಂತರ ಮಾಡುತ್ತಾರೆ. ನಾಲ್ಕು ಬಾರಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಿದ್ದೀರಿ, ಭರತ ಬೊಮ್ಮಾಯಿ ಅವರನ್ನು ನಿಮ್ಮ ಮನೆ ನಿಮ್ಮ ಕುಡಿ ಅಂತ ತಿಳಿದು ಗೆಲ್ಲಿಸಿ ಎಂದರು. ಚುನಾವಣೆಯಲ್ಲಿ ಬೇರೆಯವರು ಬೇರೆ ರೀತಿಯ ಪ್ರಚಾರ ಮಾಡುತ್ತಾರೆ. ಅವರ ಮಾತಿಗೆ ಕಿವಿಗೊಡದೆ ಭರತ್ ಬೊಮ್ಮಾಯಿ ಅವರಿಗೆ ಮತ ನೀಡಿ, ನಾನು ಬೊಮ್ಮಾಯಿ ಸಂಪುಟದಲ್ಲಿ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದೇನೆ. ಅವರು ಎಲ್ಲರನ್ನೂ ಒಟ್ಡಿಗೆ ತೆಗೆದುಕೊಂಡು ಹೋಗುವ ನಾಯಕರಿದ್ದಾರೆ. ಯಾವುದೇ ಸಮುದಾಯವನ್ನು ಅವರು ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಹೇಳಿದರು.ರಾಜೇಂದ್ರ ಹಾವೇರಣ್ಣವರ, ಮೈಲಾರಪ್ಪ ತಳ್ಳಳ್ಳಿ, ನವೀನ್ ರಾಮಗೇರಿ, ಮಾಲಿಂಗಪ್ಪ ಹಲವಳ್ಳಿ, ಮಲ್ಲೇಶಪ್ಪ ತಳ್ಳಳ್ಳಿ, ಬಸವರಾಜು ಮತ್ತೂರ, ನಿಂಗಪ್ಪ ಮಲ್ಲೂರ, ಶಿವಯೋಗಿ ಹುಣಸಗಿ, ರಮೇಶ್ ಹುನಗುಂದ ಇತರರಿದ್ದರು.