ಭಾರತಾಂಬೆಯ ಮೊದಲ ಮಗಳು ಕರುನಾಡ ಭುವನೇಶ್ವರಿ: ನಾಗಲಕ್ಷ್ಮೀ ಚೌಧರಿ

KannadaprabhaNewsNetwork | Published : Jun 16, 2025 2:33 AM

ಚಿಕ್ಕಮಗಳೂರು, ಭಾರತಾಂಬೆಯ ಮೊದಲ ಮಗಳು ಕರುನಾಡ ಭುವನೇಶ್ವರಿ. ಆ ತಾಯಿ ಮಡಿಲಿನಲ್ಲಿ ಅಕ್ಕರೆಯಿಂದ ಸೇವೆ ಸಲ್ಲಿಸುತ್ತಿರುವ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ಹೆಣ್ಣಿಗೂ ಜಯವಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದರು.

ಚಿಕ್ಕಮಗಳೂರಿನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತಾಂಬೆಯ ಮೊದಲ ಮಗಳು ಕರುನಾಡ ಭುವನೇಶ್ವರಿ. ಆ ತಾಯಿ ಮಡಿಲಿನಲ್ಲಿ ಅಕ್ಕರೆಯಿಂದ ಸೇವೆ ಸಲ್ಲಿಸುತ್ತಿರುವ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ಹೆಣ್ಣಿಗೂ ಜಯವಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕನ್ನಡದ ಹಬ್ಬ ಅಥವಾ ಜಾತ್ರೆಗಳಲ್ಲಿ ಪಾಲ್ಗೊಳ್ಳಲು ಯಾವುದೇ ಆಹ್ವಾನದ ಅವಶ್ಯಕತೆ ಯಿಲ್ಲ. ಮುಕ್ತವಾಗಿ ಕನ್ನಡತಿಯರು ಪಾಲ್ಗೊಂಡರೆ ಕಾರ್ಯಕ್ರಮಕ್ಕೆ ಕಳೆಬಂದಂತೆ. ತಾವು ಮೂಲತಃ ಆಂಗ್ಲ ಭಾಷೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರೂ ಅಪ್ಪಟ ಕನ್ನಡತಿ. ಇದೀಗ ಕಾರ್ಯನಿಮಿತ್ತ ಎಲ್ಲೆ ತೆರಳಿದರೂ ಕನ್ನಡ ಮಗಳೆನ್ನಲು ಬಹಳಷ್ಟು ಆತ್ಮಾಭಿಮಾನವಿದೆ ಎಂದು ನುಡಿದರು.

ಮಹಿಳೆಯ ಸಾಹಿತ್ಯ ಅಥವಾ ಸ್ವಾಭಿಮಾನದ ಹೋರಾಟ ಹಿಂದಿನಿಂದಲೂ ಇದೆ. ಗಂಡನ ಆಜ್ಞೆ ಹಾಗೂ ಮಕ್ಕಳ ಪಾಲನೆ ಮುಖ್ಯ ಜವಾಬ್ದಾರಿಯೊಂದಿಗೆ ಸಾಹಿತ್ಯ, ಸಂಗೀತ, ದೇಶ ರಕ್ಷಣೆ ಹಾಗೂ ಸಮಾಜದ ವಿವಿಧ ಸ್ಥರಗಳಲ್ಲಿ ತೊಡಗಿಸಿಕೊಂಡು ಕೌಟುಂಬಿಕ ಚಿಂತನೆಗಳ ನಡುವೆಯೂ ಮುಖ್ಯವಾಹಿನಿಯಲ್ಲಿ ಬೆಳಕು ತೋರುತ್ತಿರುವಳು ಎಂದು ಹೇಳಿದರು.ಮನೆಯ ಸಂಭ್ರಮ, ಊರಿನ ಜಾತ್ರೆ, ಪರಿಷತ್ತಿನ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೆಣ್ಣಿದ್ದರೆ ಅದಕ್ಕೊಂದು ಕಳೆ ಯಿದ್ದಂತೆ. ಭವ್ಯವಾಗಿ ಶೃಂಗಾರಗೊಂಡು ಇಡೀ ಹಬ್ಬದ ಸಂಭ್ರಮವನ್ನು ಮೆರಗು ತುಂಬುವವಳು ಹೆಣ್ಣೆಂದರೆ ತಪ್ಪಾಗ ಲಾರದು ಎಂದರು.ಸಾಹಿತಿ ದೀಪಾ ಹಿರೇಗುತ್ತಿ ಮಾತನಾಡಿ, ಮಹಿಳೆಯ ಸೌಂದರ್ಯವನ್ನು ನೋಡಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿಲ್ಲ. ಆಳವಾಗಿ ಅಧ್ಯಯನ ನಡೆಸಿ ರಚಿಸಿದ ಪುಸ್ತಕಗಳಿಗೆ ಪ್ರಶಸ್ತಿ ಬಂದಿದೆ. ಆ ಸಾಲಿನಲ್ಲಿ ಬಾನು ಮುಷ್ತಕ್ ಹಾಗೂ ದೀಪಾಬಾಸ್ತಿ ಸಾಧನೆಗೆ ಅಂತರಾಷ್ಟ್ರೀಯ ಬುಕರ್ ಪಶಸ್ತಿಗಳಿಸಿ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ಆಧುನಿಕತೆ ಜಗತ್ತಿನಲ್ಲಿ ಕೆಲವರು ಸಂವಿಧಾನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುವ ಪ್ರವೃತ್ತಿ ಪ್ರಚಲಿತದಲ್ಲಿದೆ. ಆದರೆ, ಆ ಸಂವಿಧಾನದಿಂದಲೇ ಭಾರತದಲ್ಲಿ ಮಹಿಳೆಯೊಬ್ಬರು ರಾಷ್ಟ್ರಪತಿ ಹುದ್ದೆ ಸೇರಿದಂತೆ ಜನಪ್ರತಿನಿಧಿಗಳಾಗಲು ಸಾಧ್ಯವಾಗಿದೆ ಎಂಬ ಅರಿವು ಟೀಕೆ ಮಾಡುವವರಿಗಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಎಚ್.ಕೆ.ವಿಜಯಲಕ್ಷ್ಮೀ, ಪ್ರಥಮ ಮಹಿಳಾ ಸಮ್ಮೇಳನ ಸರ್ವರ ಸಹಕಾರದಿಂದ ಅದ್ಭುತವಾಗಿ ಮೂಡಿಬಂದಿದೆ. ಅಲ್ಲದೇ ಯುವ ಕವಿಯತ್ರಿಯರು, ಬರಹಗಾರ್ತಿಯರಿಗೆ ಪೂರಕವಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಮನಮುಟ್ಟುವಂತ ಕಾರ್ಯಕ್ರಮ ನಡೆದಿರುವುದು ಹೆಮ್ಮೆ ತಂದಿದೆ ಎಂದರು.ಇದೇ ವೇಳೆ ಡಾ. ಮಂಜುಳಾ ಹುಲ್ಲಳ್ಳಿ, ಸತ್ಯವತಿ ಮತ್ತು ಪ್ರತಿಭಾ ನಂದಕುಮಾರ್ ಅವರಿಗೆ ಸಾಹಿತ್ಯಸಿರಿ ಹಾಗೂ 12 ಮಂದಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಹಿರಿಯ ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ.ಪ್ರಕಾಶ್, ಎಸ್‌ಟಿಜೆ ಕಾಲೇಜು ಪ್ರಾಂಶಪಾಲೆ ಜೆ.ಕೆ.ಭಾರತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೂಪನಾಯ್ಕ್, ಕಸಾಪ ತಾಲ್ಲೂ ಕು ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮ ಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಮಾ ಪ್ರಸಾದ್ ನಿರೂಪಿಸಿದರು. ಮಾವಿನಕೆರೆ ದಯಾನಂದ್ ಸ್ವಾಗತಿಸಿದರು. ಪ್ರಭು ನಿರ್ವಹಿಸಿದರು. ಮಹಾಲಕ್ಷ್ಮೀ ನಾಗರಾಜು ವಂದಿಸಿದರು.--- ಬಾಕ್ಸ್‌ ---

ಪೂರ್ವಿಕರು ಕಟ್ಟಿದ ಜಾನಪದ ಸಮಾಜಕ್ಕೆ ತಾಯಿ: ಮೋಟಮ್ಮ

ಚಿಕ್ಕಮಗಳೂರು: ಪೂರ್ವಿಕರು ಕಟ್ಟಿ ಬೆಳೆಸಿದ ಜಾನಪದ ಸಮಾಜಕ್ಕೆ ತಾಯಿಯಾದರೆ, ಆ ಪರಂಪರೆಯಲ್ಲಿ ಜೀವಿಸುತ್ತಿರುವ ಮಹಿಳೆಯರು ಜಾನಪದದ ಮಕ್ಕಳಂತೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲುಕು ಮಹಿಳಾ ಸಮ್ಮೇಳನದಲ್ಲಿ ಜಾನಪದ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಜಾನಪದಕ್ಕೆ ತನ್ನದೆ ನಿಷ್ಟೆ, ಧರ್ಮವಿದೆ. ಸಮಾಜದ ನಾಗರಿಕರು ಅರ್ಥಮಾಡಿ ಕೊಂಡು ಸಾಗಿದರೆ ಬದುಕು ಹಸನಾಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ಮಕ್ಕಳನ್ನು ಜಾನಪದದ ಹಿನ್ನೆಲೆಯಡಿ ಪೋಷಿಸಿ ದರೆ ಮೂಲ ಜಾನಪದದ ಹಿರಿತನ ಶಾಶ್ವತವಾಗಿ ಬೆಳೆಸಲು ಸಾಧ್ಯ ಎಂದರು.

ಮನುಷ್ಯನ ನಡೆ, ನುಡಿ ಎಲ್ಲವೂ ಜಾನಪದ ಮೂಲಬೇರಿನಿಂದಲೇ ಬಂದಿವೆ. ಆದರೆ ತಾಂತ್ರಿಕ ಜಗತಿನಲ್ಲಿ ಎಲ್ಲವೂ ನಶಿಸಿ ಹೋಗುತ್ತಿವೆ. ಇಂದಿನ ಯುವ ಸಮೂಹ ಸಿನಿರಂಗ ಸೇರಿದಂತೆ ಅತಿಹೆಚ್ಚು ಮೊಬೈಲ್ ಹಾಗೂ ಟಿವಿಗಳಿಗೆ ಮಾರುಹೋಗಿ ಜಾನಪದದ ಮೌಲ್ಯ ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.15 ಕೆಸಿಕೆಎಂ 4--

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಕಸಾಪ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಮಾತನಾಡಿದರು.ಪೋಟೋ ಫೈಲ್‌ ನೇಮ್‌ 15 ಕೆಸಿಕೆಎಂ 3