ಶಿರಸಿ: ಭಾರತೀಯ ಪ್ರದರ್ಶನ ಕಲೆಗಳಿಗೆ, ಭರತನ ನಾಟ್ಯ ಶಾಸ್ತ್ರವೇ ಆಧಾರವಾದುದಲ್ಲದೇ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಕಲಾ ಸಂವಿಧಾನವಾಗಿದೆ ಎಂದು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಹೇಳಿದರು.
ಅಭ್ಯಾಗತರಾಗಿ ಆಗಮಿಸಿದ್ದ ಪತ್ರಕರ್ತ ನಾಗರಾಜ ಮತ್ತಿಗಾರ ಮಾತನಾಡಿ, ಮನುಷ್ಯನ ಬದುಕೇ ಕಲಾತ್ಮಕವಾದದ್ದು, ಕಲೆಯು ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ, ಅಲ್ಲದೇ ಬೇರೆಲ್ಲ ಪ್ರಾಣಿಗಳಿಗಿಂತ ಭಿನ್ನನಾಗಿ ಗುರುತಿಸಿಕೊಳ್ಳಲು ಕಲೆಯು ಕಾರಣವಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಶಂಭು ಭಟ್ಟ ಮಾತನಾಡಿ, ಪೂರ್ಣಾ ಭಟ್ಟ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಭಾರತೀಯ ಕಲೆಯನ್ನು ಅಮೆರಿಕದಲ್ಲಿ ಕಲಿತು ವಿಶ್ವ ಮಟ್ಟಕ್ಕೊಯ್ಯಲು ಪ್ರಯತ್ನಿಸುವುದು ಶ್ಲಾಘನೀಯ ಎಂದರು. ಪೂರ್ಣಾ ಭಟ್ ಅವರ ತಾಯಿ ಸುವರ್ಣಾ ಭಟ್ಟ ಉಪಸ್ಥಿತರಿದ್ದರು.ಆಮೇಲೆ ಸುವರ್ಣಾ ಅವರು ಸ್ವರ, ಲಯಮ್, ತ್ರಿಪುರ ಸುಂದರಿ, ದಶಾವತಾರಮ್, ಅಭಯಂಕರಮ್ ಹಾಗೂ ಕೊನೆಯಲ್ಲಿ ಶಂಭೋ ಹರ ಹರ ಶಂಭೋ ನಾಟ್ಯವನ್ನು ಪ್ರಸ್ತುತ ಪಡಿಸಿದರು. ತಂಜಾವೂರು ಶೈಲಿಯ ಈ ನಾಟ್ಯವು ಸಹೃದಯರ ಮನಸೊರೆಗೊಂಡಿತು.
ಈ ಮಧ್ಯೆ ಪೃಥ್ವಿ ಹೆಗಡೆ ಬೊಮ್ನಳ್ಳಿ ಅವರ ಗಾನಸುಧೆ ಗಮನ ಸೆಳೆಯಿತು. ವಿದುಷಿ ರೇಖಾ ದಿನೇಶ್ ಅವರ ಶಿಷ್ಯೆಯಾಗಿರುವ ಇವರು ದಾಸರ ಪದ, ಮರಾಠಿ ಅಭಂಗಗಳ ಮೂಲಕ ಭರವಸೆಯ ಗಾಯಕಿಯಾಗಿ ತೋರಿಸಿಕೊಂಡರು. ಇವರಿಗೆ ಹಾರ್ಮೋನಿಯಂನಲ್ಲಿ ಅಂಜನಾ ಹೆಗಡೆ ಶಿರಸಿ, ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಸಾಥ್ ನೀಡಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.