ಆ. 13ರಂದು ಬೆಳಗ್ಗೆ 9.30ಕ್ಕೆ ಬಾಗೇವಾಡಿಯ ಶರಣ ಟಿ.ಎಸ್. ಪಾಟೀಲ ಪ್ರೌಢಶಾಲೆಯಲ್ಲಿ ಜನ್ಮದಿನದ ನೆನಪಿಗಾಗಿ 92 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುಂಡರಗಿ: ಆ. 13ರಂದು ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲವರ 92ನೇ ಜನ್ಮದಿನದ ಅಂಗವಾಗಿ ಶರಣರ ದೃಷ್ಟಿಯಲ್ಲಿ ಜೀವನ ಮಾರ್ಗ ಧರ್ಮಸಭೆ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಉದ್ಘಾಟನೆ ಹಾಗೂ ಶರಣ ಕುರುಬಗೊಲ್ಲಾಳೇಶ್ವರ ವಚನಗಳ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವೇಶ್ವರ ವಿದ್ಯಾಪೀಠ ಹಾಗೂ ಶರಣಬಸವೇಶ್ವರ ವಿದ್ಯಾಪೀಠ ಕಲಕೇರಿ, ಎಸ್.ಎಸ್. ಪಾಟೀಲ ಪ್ರತಿಷ್ಠಾನ ಕಲಕೇರಿ, ಶರಣ ಟಿ.ಎಸ್. ಪಾಟೀಲ ಪ್ರೌಢಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಬಾಗೇವಾಡಿ, ಎಸ್ಎಸ್‌ ಕೇರ್ ಟ್ರಸ್ಟ್ ಹಾಗೂ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ದಾವಣಗೆರೆ, ಮುಂಡರಗಿ ತಾಲೂಕಿನ ಎಲ್ಲ ಸಹಕಾರ ಸಂಘಗಳು ಇವುಗಳ ಸಹಯೋಗದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಆ. 13ರಂದು ಬೆಳಗ್ಗೆ 9.30ಕ್ಕೆ ಬಾಗೇವಾಡಿಯ ಶರಣ ಟಿ.ಎಸ್. ಪಾಟೀಲ ಪ್ರೌಢಶಾಲೆಯಲ್ಲಿ ಜನ್ಮದಿನದ ನೆನಪಿಗಾಗಿ 92 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಶರಣರ ದೃಷ್ಟಿಯಲ್ಲಿ ಜೀವನಮಾರ್ಗ ಧರ್ಮಸಭೆ ಹಾಗೂ ಶರಣ ಕುರುಬಗೊಲ್ಲಾಳೇಶ್ವರ ವಚನಗಳ ಗ್ರಂಥ ಲೋಕಾರ್ಪಣೆ ಜರುಗಲಿದ್ದು, ಗದುಗಿನ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಲಕೇರಿ- ವಿರುಪಾಪುರದ ಮುಧುಕೇಶ್ವರ ಶಿವಾಚಾರ್ಯ ಸ್ವಾಮಿಜಿ, ಅಭಿನವ ಗುರು ಮುಧುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು. ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಅರುಣಕುಮಾರ ಅಜ್ಜಪ್ಪ ಆಗಮಿಸಲಿದ್ದಾರೆ. ನಂತರ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ನಡೆಯಲಿದೆ. ಜತೆಗೆ ಇಸಿಜಿ, ಸಕ್ಕರೆ ಕಾಯಿಲೆ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಸ್ಥೂಲಕಾಯ ಪರೀಕ್ಷೆಗಳನ್ನು ಮಾಡಲಾಗುವುದು.

ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಯಶಸ್ವಿನಿ ಕಾರ್ಡ್, ಆಯುಷ್ಮಾನ್ ಭಾರತ್ ಯೋಜನೆ ಅಥವಾ ಎಸ್.ಎಸ್. ಕೇರ್ ಸೆಂಟರ್ ಮೂಲಕ ದಾವಣಗೆರೆ ಹಾಗೂ ಇತರ ಆಸ್ಪತ್ರೆಗಳಿಗೆ ಕರೆದೊಯ್ದು ಉಚಿತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು. ಆ. 12ರಂದು ಸಂಜೆ 6 ಗಂಟೆಗೆ ತಾಲೂಕಿನ ಕಲಕೇರಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪರಿಸರ ಮಾಲಿನ್ಯ ಕುರಿತು ಜಾಗೃತಿ ಕಾರ್ಯಕ್ರಮ ಜರುಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಿವಪ್ಪ ಅಂಕದ, ಶ್ರೀಕಾಂತಗೌಡ ಪಾಟೀಲ, ಉಮೇಶ ಹಿರೇಗೌಡ್ರ, ಶಿವನಗೌಡ ಪಾಟೀಲ, ಮಲ್ಲಪ್ಪ ಕ್ಯಾದಿಗಿಹಳ್ಳಿ, ಶಿದ್ದಯ್ಯ ಮುಂಡರಗಿಮಠ, ಹೇಮಣ್ಣ ಪೂಜಾರ, ಎಚ್.ಎನ್. ಗೊಂಡಬಾಳ, ಎಸ್.ವಿ. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು