ಬೇಲೂರು: ತಾಲೂಕಿನ ಬಿಕ್ಕೋಡು ಮುಖ್ಯ ರಸ್ತೆಯಲ್ಲಿ ಏಕಾಂಗಿಯಾಗಿ ತಿರುಗಾಡುತ್ತಿದ್ದ ಭೀಮ ಕಾಡಾನೆ ಜನರಲ್ಲಿ ಭೀತಿ ಮೂಡಿಸಿತ್ತು. ಭಾನುವಾರ ಜಗಬೋರನಹಳ್ಳಿ ಗ್ರಾಮದಲ್ಲಿ ಕ್ಯಾಪ್ಟನ್ ಹಾಗೂ ಭೀಮ ಎಂಬ ಕಾಡಾನೆಗಳ ನಡುವೆ ನಡೆದ ಕಾಳಗದಲ್ಲಿ ಭೀಮ ಆನೆಯ ದಂತ ಮುರಿದಿದ್ದು ತೀವ್ರವಾಗಿ ಗಾಯಗೊಂಡಿದೆ.
ಭೀಮ ಹಾಗೂ ಕ್ಯಾಪ್ಟನ್ ಆನೆಗಳ ಕಾದಾಟದಲ್ಲಿ ಮುಂದುವರಿದು ಗ್ರಾಮದ ಮನೆಗಳ ಆವರಣದಲ್ಲಿ ಗುದ್ದಾಟ ನಡೆಸಿದ್ದು ಗ್ರಾಮಸ್ಥರು ಓಡಿಹೋಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜನರ ಕೂಗಾಟ ಕೇಳಿದರೂ ಅಲ್ಲಿಂದ ಕದಲದ ಆನೆಗಳು ಮನೆಯ ಅಂಚಿನವರೆಗೂ ಬಂದಿವೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ಕಿತ್ತಾಡಿವೆ. ನಂತರ ಸ್ವಲ್ಪ ಹೊತ್ತು ಕಳೆದ ಮೇಲೆ ಭೀಮ ಹಾಗೂ ಕ್ಯಾಪ್ಟನ್ ಆನೆ ತೆರಳಿವೆ. ಆದರೆ ಈ ಸಂದರ್ಭದಲ್ಲಿ ಭೀಮ ಆನೆಯ ದಂತ ಮುರಿತಗೊಂಡಿದೆ.
ಮನೆಯಂಗಳದಲ್ಲೇ ಸುತ್ತುತ್ತಿರುವ ಕಾಡಾನೆಗಳು:ಸುಮಾರು ೫೦ಕ್ಕೂ ಹೆಚ್ಚು ಕಾಡಾನೆಗಳು ಕೋಗಿಲೆ ಮನೆಕೊಪ್ಪಲು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ರೈತರ ಬೆಳೆಗಳನ್ನು ತುಳಿದು ನಾಶಪಡಿಸಿವೆ. ಗ್ರಾಮದ ಬಸವೇಗೌಡ, ಧರ್ಮೇಗೌಡ ಎಂಬುವವರಿಗೆ ಸೇರಿದ ಜೋಳ, ಭತ್ತ, ಕಾಫಿ, ಬಾಳೆ ಬೆಳೆಗಳನ್ನು ತುಳಿದು ೪ ಎಕರೆ ಬೆಳೆನಾಶ ಮಾಡಿವೆ. ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರಲು ಗ್ರಾಮಸ್ಥರು ಭಯಪಡುವಂತಾಗಿದೆ.