ಕಾರಟಗಿ: ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್ ಭೈರಪ್ಪ ಭಾರತೀಯ ಸಾಹಿತ್ಯದ ಮೇರು ಪರ್ವತದಂತಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಶಿಕ್ಷಕ ಬಸವರಾಜ ರ್ಯಾವಳದ ಹೇಳಿದರು.
ಕಾದಂಬರಿ ಕ್ಷೇತ್ರದಲ್ಲಿ ಅನೇಕ ಮಹತ್ವದ ಕೃತಿ ಕೊಟ್ಟ ಕೀರ್ತಿ ಭೈರಪ್ಪನವರಿಗೆ ಸಲ್ಲುತ್ತದೆ. ಅವರ ವಂಶವೃಕ್ಷ, ದಾಟು, ತಬ್ಬಲಿ ನೀನಾದೆ ಮಗನೆ, ಪರ್ವ ಮುಂತಾದ ಜನಪ್ರಿಯ ಕಾದಂಬರಿ ಕನ್ನಡವಷ್ಟೇ ಅಲ್ಲದೇ ಇಡೀ ಭಾರತೀಯ ಭಾಷೆಗಳಿಗೆ ತುರ್ಜುಮೆಗೊಂಡು ಅವರ ಖ್ಯಾತಿಯನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೊಯ್ದವು. ಅವರಲ್ಲಿದ್ದ ಸಾಹಿತ್ಯದ ವಿದ್ವತ್, ಶಕ್ತಿಯುತ ಬರವಣಿಗೆಯಿಂದ, ವಿಶಿಷ್ಠ ಕಥನ ತಂತ್ರದ ಮೂಲಕ ಕನ್ನಡಿಗರಷ್ಟೇ ಅಲ್ಲ, ಭಾರತೀಯ ಎಲ್ಲ ಭಾಷೆಗಳಲ್ಲೂ ಜನಪ್ರಿಯತೆ ಗಳಿಸಿದ್ದರು. ಅವರ ಅಗಲಿಕೆಯಿಂದ ಇಡೀ ಕನ್ನಡ ನಾಡು, ನುಡಿ ಆಘಾತಕ್ಕೊಳಗಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಮಾತನಾಡಿ, ಭೈರಪ್ಪ ಮೇರು ಕೃತಿ ಪರ್ವವು ಮಹಾಭಾರತವನ್ನು ಅದರ ಪೌರಾಣಿಕ, ಅತಿ ಮಾನವ ಸಂಗತಿಗಳಿಂದ ಪ್ರತ್ಯೇಕಿಸಿ ವೇದೋತ್ತರ ಕಾಲದ ಜನರ ಸಾಮಾಜಿಕ ಪದ್ಧತಿ, ಅವರ ರೀತಿ-ರಿವಾಜುಗಳ ಆಧಾರದ ಮೇಲೆ ಪುನಾರಚಿಸಿದ ಕಥೆಯಾಗಿ ಕನ್ನಡ ಅಷ್ಟೇ ಭಾರತೀಯ ಭಾಷೆಗಳಲ್ಲಿಯೇ ಅದೊಂದು ಶ್ರೇಷ್ಠ ಕಾದಂಬರಿಯಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದೆ ಎಂದರು.ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಸೋಮನಾಥ್ ಹೆಬ್ಬಡದ, ಮಂಜುನಾಥ್ ಚಿಕೇನಕೊಪ್ಪ, ಎನ್.ಮಾರುತಿ ಮತ್ತು ಮಂಜುನಾಥ ಮಸ್ಕಿ ಮಾತನಾಡಿದರು.