ಯಲಹಂಕ: ಇಲ್ಲಿಗೆ ಸಮೀಪದ ಹೆಸರಘಟ್ಟದಲ್ಲಿ ಅಂಗವಿಕಲರಿಂದ ಮತದಾನ ಜಾಗೃತಿ ಬೈಕ್ ರ್ಯಾಲಿ ನಡೆಯಿತು. ಬೆಂಗಳೂರು ನಗರ ಜಿಲ್ಲಾಡಳಿತ, ಬೆಂ.ಉತ್ತರ ಮತ್ತು ಯಲಹಂಕ ತಾಲೂಕು ಪಂಚಾಯಿತಿ ಹಾಗೂ ಅಂಗವಿಕಲರ-ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಭಾಗಿತ್ವದಲ್ಲಿ ಶನಿವಾರ ಜಾಗೃತಿ ರ್ಯಾಲಿ ಆಯೋಜಿಸಲಾಗಿತ್ತು. ರ್ಯಾಲಿಗೆ ಬೆಂಗಳೂರು ಉತ್ತರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಓ.ರಮೇಶ್, ಯಲಹಂಕ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಅಪೂರ್ವ ಎ.ಕುಲಕರ್ಣಿ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಯಮುನಾಚಾಲನೆ ನೀಡಿದರು.
ರ್ಯಾಲಿ ಉದ್ದೇಶಿಸಿ ಬೆಂ.ಉತ್ತರ ತಾಪಂ ಇಒ ರಮೇಶ್ ಮಾತನಾಡಿ, ಏಪ್ರಿಲ್ 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದ ದಿನದಂದು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ದಿಸೆಯಲ್ಲಿ ಶೇಕಡ 100ರಷ್ಟು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಚ್.ಆರ್.ರಾಜೇಶ್, ಸಿದ್ದಪ್ಪ, ಡಿ.ಜಿ.ರೇವಿನಾ, ಜಿಲ್ಲಾ ಐಇಸಿ ಸಂಯೋಜಕ ನವೀನ್ ಬಾಬು, ವಾಯ್ಸ್ ಆಫ್ ನೀಡಿ ಸಂಘದ ಸಂಸ್ಥಾಪಕ ಅರುಣ್ ಕುಮಾರ್, ಈರಪ್ಪ ಕುಂಬಾರ ಇದ್ದರು.