ಅರಸೀಕೆರೆಯಲ್ಲಿ ಬೈಕ್ ವ್ಹೀಲಿಂಗ್ ಹಾವಳಿ

KannadaprabhaNewsNetwork |  
Published : May 13, 2026, 12:30 AM IST
ಇತ್ತೀಚಿಗೆ ಎನ್.ಹೆಚ್‌.ರೋಡ್‌ನಲ್ಲಿ ಸ್ಟಂಟ್ ಮಾಡುತ್ತಿರುವ ಯುವಕ | Kannada Prabha

ಸಾರಾಂಶ

ಕೆಲ ವಾಹನಗಳಲ್ಲಿ ನಂಬರ್‌ ಪ್ಲೇಟ್ ತೆಗೆದು ಹಾಕಿರುವುದು ಮಾತ್ರವಲ್ಲದೆ, ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಕರ್ಕಶ ಶಬ್ದ ಮಾಡುತ್ತಾ ಸಂಚರಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಶಬ್ದದಿಂದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ರಸ್ತೆಗಳಲ್ಲಿ ಓಡಾಡುವುದೇ ಕಷ್ಟವಾಗಿದ್ದು, ಜನರು ಕಿವಿ ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ಎದುರಾಗಿದೆ. ಅತಿ ವೇಗದಲ್ಲಿ ಕಾರು, ಲಾರಿಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಯುವಕರು ಜೀವವನ್ನು ಪಣಕ್ಕಿಟ್ಟು ಸ್ಟಂಟ್ ಮಾಡುತ್ತಿರುವುದು ಭಾರೀ ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ. ಒಂದು ಕ್ಷಣದ ನಿರ್ಲಕ್ಷ್ಯವೇ ಪ್ರಾಣಹಾನಿಗೆ ಕಾರಣವಾಗುವ ಸಾಧ್ಯತೆ ಇದ್ದರೂ, ಯಾವುದೇ ಭಯವಿಲ್ಲದೆ ಕೆಲವರು ಸಾಹಸ ಪ್ರದರ್ಶನಕ್ಕೆ ಮುಂದಾಗುತ್ತಿರುವುದು ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಜೀವದ ಬೆಲೆ ಮರೆತು ಬೈಕ್‌ಗಳನ್ನು ‘ಸಾಹಸದ ಆಟಿಕೆ’ಗಳಾಗಿ ಬಳಸುತ್ತಿರುವ ಯುವಕರ ಅಪಾಯಕಾರಿ ವೀಲಿಂಗ್ ಮತ್ತು ಸ್ಟಂಟ್‌ಗಳಿಂದ ಅರಸೀಕೆರೆ ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಾರ್ವಜನಿಕರ ಜೀವಕ್ಕೂ ಅಪಾಯ ಉಂಟುಮಾಡುತ್ತಿರುವ ಈ ಅಜಾಗರೂಕ ಚಟುವಟಿಕೆಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ದಿನೇದಿನೇ ಹೆಚ್ಚುತ್ತಿದೆ.ಎನ್. ಎಚ್‌. ರೋಡ್‌, ಸರ್ವಿಸ್ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕೆಲ ಯುವಕರು ಬೈಕ್‌ಗಳನ್ನು ಅತಿವೇಗದಲ್ಲಿ ಚಲಾಯಿಸಿ ವ್ಹೀಲಿಂಗ್ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಸಂಚಾರ ದಟ್ಟಣೆ ಇರುವ ಸಮಯದಲ್ಲಿಯೇ ಬೈಕ್‌ನ ಮುಂಭಾಗದ ಚಕ್ರವನ್ನು ಗಾಳಿಯಲ್ಲಿ ಎತ್ತಿ ಸ್ಟಂಟ್ ಪ್ರದರ್ಶಿಸುತ್ತಿರುವುದು ಇತರ ವಾಹನ ಸವಾರರಲ್ಲಿ ಭಯ ಹುಟ್ಟಿಸಿದೆ. ಸ್ಕೂಲ್‌, ಕಾಲೇಜ್‌ಗಳ ಬಳಿಯು ಈ ಸ್ಟಂಟ್ ದಿನೇ ದಿನೇ ಹೆಚ್ಚುತ್ತಿವೆ.ಕೆಲ ವಾಹನಗಳಲ್ಲಿ ನಂಬರ್‌ ಪ್ಲೇಟ್ ತೆಗೆದು ಹಾಕಿರುವುದು ಮಾತ್ರವಲ್ಲದೆ, ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಕರ್ಕಶ ಶಬ್ದ ಮಾಡುತ್ತಾ ಸಂಚರಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಶಬ್ದದಿಂದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ರಸ್ತೆಗಳಲ್ಲಿ ಓಡಾಡುವುದೇ ಕಷ್ಟವಾಗಿದ್ದು, ಜನರು ಕಿವಿ ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ಎದುರಾಗಿದೆ. ಅತಿ ವೇಗದಲ್ಲಿ ಕಾರು, ಲಾರಿಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಯುವಕರು ಜೀವವನ್ನು ಪಣಕ್ಕಿಟ್ಟು ಸ್ಟಂಟ್ ಮಾಡುತ್ತಿರುವುದು ಭಾರೀ ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ. ಒಂದು ಕ್ಷಣದ ನಿರ್ಲಕ್ಷ್ಯವೇ ಪ್ರಾಣಹಾನಿಗೆ ಕಾರಣವಾಗುವ ಸಾಧ್ಯತೆ ಇದ್ದರೂ, ಯಾವುದೇ ಭಯವಿಲ್ಲದೆ ಕೆಲವರು ಸಾಹಸ ಪ್ರದರ್ಶನಕ್ಕೆ ಮುಂದಾಗುತ್ತಿರುವುದು ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ.ಇನ್ನು ಕೆಲ ಯುವಕರು ವ್ಹೀಲಿಂಗ್ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು, ಇತರ ಯುವಕರಿಗೂ ಪ್ರೇರಣೆ ಆಗುತ್ತಿರುವುದು ಮತ್ತಷ್ಟು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ವರ್ಷ ರಸ್ತೆ ಸುರಕ್ಷತಾ ಮಾಸಾಚರಣೆ, ಜಾಗೃತಿ ಅಭಿಯಾನಗಳು ನಡೆದರೂ, ಇಂತಹ ಅಪಾಯಕಾರಿ ಚಟುವಟಿಕೆಗಳು ಕಡಿಮೆಯಾಗದಿರುವುದು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿ ಮೇಲೂ ಪ್ರಶ್ನೆ ಹುಟ್ಟಿಸಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದ ಪ್ರಕರಣಗಳಲ್ಲಿ ಪೋಷಕರ ವಿರುದ್ಧವೇ ಪ್ರಕರಣ ದಾಖಲಿಸಿ ದಂಡ ವಿಧಿಸಿರುವ ಉದಾಹರಣೆಗಳಿದ್ದರೂ, ಕೆಲ ಪೋಷಕರು ಮಕ್ಕಳಿಗೆ ನಿರ್ಬಂಧವಿಲ್ಲದೆ ದುಬಾರಿ ಬೈಕ್‌ಗಳನ್ನು ನೀಡುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.ಹೆದ್ದಾರಿ ಗಸ್ತು ಪೊಲೀಸರು ಹಾಗೂ ಸಂಚಾರ ಪೊಲೀಸರು ತಕ್ಷಣ ವಿಶೇಷ ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಸಂಚಾರ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿ ರದ್ದುಪಡಿಸುವ ಜೊತೆಗೆ ವಾಹನಗಳನ್ನು ವಶಕ್ಕೆ ಪಡೆದು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು, ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣ ಹೆಸರಲ್ಲಿ ಕೇಂದ್ರ ಬಿಜೆಪಿ ಮಹಿಳೆಗೆ ಮೋಸ: ಸೈಯ್ಯದ್ ಹನೀಫ್
ಮಕ್ಕಳ ಮಾನಸಿಕ ವಿಕಸನಕ್ಕೆ ಬೇಸಿಗೆ ಶಿಬಿರಗಳು ಅವಶ್ಯ