ಜನ್ಮದಿನ ಆಚರಣೆ ಮಾದರಿ ಆಗಿರಬೇಕು: ಪುಷ್ಪಗಿರಿ ಶ್ರೀ

KannadaprabhaNewsNetwork | Published : Jun 27, 2025 12:48 AM

ಜನ್ಮದಿನ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಜನಸಾಮಾನ್ಯರಿಗೆ ಸಮುದಾಯಕ್ಕೆ ಸಹಾಯಹಸ್ತ ನೀಡುವ ಮೂಲಕ ಆದರ್ಶವಾಗಿ ಆಚರಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರಾದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಎಂ.ಆರ್. ಮಹೇಶ ಜನ್ಮದಿನ: ಉಚಿತ ಹೊಲಿಗೆ ತರಬೇತಿ ಶಿಬಿರ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜನ್ಮದಿನ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಜನಸಾಮಾನ್ಯರಿಗೆ ಸಮುದಾಯಕ್ಕೆ ಸಹಾಯಹಸ್ತ ನೀಡುವ ಮೂಲಕ ಆದರ್ಶವಾಗಿ ಆಚರಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಪುಷ್ಪಗಿರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರಾದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನ್ಯಾಮತಿ ಪಟ್ಟಣದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ ಭಗತ್‌ ಸಿಂಗ್ ಟ್ರಸ್ಟ್ ಮತ್ತು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಸಾಮಾಜಿಕ ಕಾರ್ಯಕರ್ತ ಎಂ.ಆರ್. ಮಹೇಶ ತಮ್ಮ ಜನ್ಮದಿನ ಅಂಗವಾಗಿ ತಾಲೂಕಿನ ಮಹಿಳೆಯರಿಗೆ ಏರ್ಪಡಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಣದ ಶ್ರೀಮಂತರು, ದೊಡ್ಡ ಹೋಟೆಲ್, ಬಾರ್, ರೆಸಾರ್ಟ್‌ಗಳಲ್ಲಿ ಜನ್ಮದಿನ ಆಚರಿಸಿಕೊಂಡು ಹಣ ವ್ಯಯ ಮಾಡುತ್ತಾರೆ. ಅದರ ಬದಲು ಅನಾಥಶ್ರಮ, ದೀನದಲಿತರಿಗೆ ನೆರವು ನೀಡುವುದು ಉತ್ತಮ. ಈ ನಿಟ್ಟಿನಲ್ಲಿ ಎಂ.ಆರ್.ಮಹೇಶ ಅವರು ಜನ್ಮದಿನ ಆಚರಣೆ ಇತರರಿಗೂ ಮಾದರಿಯಾಗುವಂತೆ, ಆದರ್ಶವಾಗಿ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಶ್ರೀಗಳು ಹೊನ್ನಾಳಿ-ನ್ಯಾಮತಿ ತಾಲೂಕುಕು ಶ್ರೀ ಪುಷ್ಪಗಿರಿ ಧರ್ಮಸಂಸತ್ ಘಟಕ ಉದ್ಘಾಟಿಸಿದರು. ಈ ತಂಡವು 15 ಜನರನ್ನು ಹೊಂದಿದೆ. ಯಾವುದೇ ಜಾತ್ರೆ ಸಮಾರಂಭ, ಸರ್ಕಾರಿ ಕಾರ್ಯಕ್ರಮವಾಗಲಿ, ಪ್ರಕೃತಿ ವಿಕೋಪದಂತಹ ಸಮಯದಲ್ಲಿ ಭಾಗವಹಿಸಿ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯಹಸ್ತ ನೀಡುವ ಮೂಲಕ ಪೀಠದ ಘನತೆ ಎತ್ತಿಹಿಡಿಯಬೇಕು ಎಂದು ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್.ಮಹೇಶ ಮಾತನಾಡಿ, ಕಳೆದ ಒಂದೂವರೆ ದಶಕದಿಂದ ಸಮಾಜ ಸೇವೆಯಲ್ಲಿ ತೊಡಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ತಾಲೂಕಿನ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ, ಮುಂದಿನ ದಿನಗಳಲ್ಲಿ ಅವರ ಆರ್ಥಿಕಾಭಿವೃದ್ಧಿಗೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಶಾಂತರಾಜ ಪಾಟೀಲ್, ಎ.ಬಿ. ಹನುಮಂತಪ್ಪ, ನೆಲವನ್ನೆ ದೇವರಾಜ, ಯಕ್ಕನಹಳ್ಳಿ ಜಗದೀಶ, ಸಿ.ಕೆ.ರವಿಕುಮಾರ, ನಟರಾಜ ಆಚಾರ್, ಕರಿಬಸವ ರೆಡ್ಡಿ, ರಮೇಶ, ಶೇಖರಪ್ಪ, ಸಂದೀಪ, ಪುಷ್ಪಗಿರಿ ಸಂಸ್ಥೆಯ ಅರುಣ, ಗದಿಗೇಶ, ಗೀತಗೌಡ, ಯರಗನಾಳ್ ಮಂಜಪ್ಪ ಹಾಗೂ ಪುಷ್ಪಗಿರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

- - -

-25ಎಚ್.ಎಲ್.ಐ3.ಜೆಪಿಜಿ:

ಉಚಿತ ಟೈಲರಿಂಗ್ ತರಬೇತಿ ಶಿಬಿರವನ್ನು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಬಿಜೆಪಿ ಮುಖಂಡ ಎಂ.ಆರ್.ಮಹೇಶ, ಇತರರು ಇದ್ದರು.