ಉತ್ತರ ಕನ್ನಡ ಜಿಲ್ಲಾದ್ಯಂತ ಭೂಕಬಳಿಕೆ ವಿರುದ್ಧ ಬೀದಿಗಿಳಿದ ಬಿಜೆಪಿ

KannadaprabhaNewsNetwork |  
Published : Nov 05, 2024, 12:38 AM IST
ಪ್ರತಿಭಟನೆ ನಡೆಯಿತು  | Kannada Prabha

ಸಾರಾಂಶ

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಜನರಿಂದ ಲೂಟಿ ಮಾಡಿ ಬೊಕ್ಕಸ ತುಂಬಿಕೊಂಡಿದ್ದು ಸಾಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮತ ಬ್ಯಾಂಕ್ ಓಲೈಕೆಗಾಗಿ ನಾಡಿನ ರೈತರು ಜನಸಾಮಾನ್ಯರ ಭೂಮಿಯನ್ನು ವಕ್ಫ್‌ ಬೋರ್ಡಗೆ ವರ್ಗಾವಣೆ ಮಾಡುತ್ತಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

ಕಾರವಾರ: ವಕ್ಫ್ ಬೋರ್ಡನ ಭೂಕಬಳಿಕೆ ವಿರುದ್ಧ ಬಿಜೆಪಿ ಮುಖಂಡರು, ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಜನರಿಂದ ಲೂಟಿ ಮಾಡಿ ಬೊಕ್ಕಸ ತುಂಬಿಕೊಂಡಿದ್ದು ಸಾಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮತ ಬ್ಯಾಂಕ್ ಓಲೈಕೆಗಾಗಿ ನಾಡಿನ ರೈತರು ಜನಸಾಮಾನ್ಯರ ಭೂಮಿಯನ್ನು ವಕ್ಫ್‌ ಬೋರ್ಡಗೆ ವರ್ಗಾವಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಸಾವಿರಾರು ಎಕರೆ ಭೂಮಿಯನ್ನು ರೈತರ ಅರಿವಿಲ್ಲದೆ ವರ್ಗಾವಣೆ ಆಗುತ್ತಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಎಚ್ಚರಗೊಂಡು ಕಾಂಗ್ರೆಸ್‌ನ ಈ ನೀತಿಯನ್ನು ವಿರೋಧಿಸುತಿದ್ದೇವೆ. ಇಂತಹ ಅವಾಂತರಗಳಿಗೆ ಕಾರಣರಾದ ಸಚಿವ ಜಮೀರ್ ಅಹಮದ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನ ನಮ್ಮ ಜಮೀನುಗಳಲ್ಲಿ ನಮಗೆ ಕಾಲಿಡಲು ಸಾಧ್ಯವಾಗದು. ನಮ್ಮ ಜಮೀನು ಉಳಿಯಬೇಕಾದರೆ ಒಗ್ಗಟ್ಟಾಗಿ ಹೋರಾಡಬೇಕಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವುದಷ್ಟೇ ಅಲ್ಲ. ಅವರ ಜನವಿರೋಧಿ ನೀತಿಯನ್ನು ಬಲವಾಗಿ ಖಂಡಿಸುತ್ತೇವೆ. ರೈತರಿಗೆ ನೀಡಿರುವ ನೋಟಿಸ್‌ ಹಿಂಪಡೆದರೆ ಸಾಲದು, ಜತೆಗೆ ರೈತರ ಪಹಣಿಯಲ್ಲಿ ಅವರ ಹೆಸರನ್ನೇ ಸ್ಪಷ್ಟವಾಗಿ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಲೂಟಿ ಸರ್ಕಾರ. ಹಿಂದುಗಳನ್ನು ಸಂಪೂರ್ಣ ನಿರ್ಲಕ್ಷಿಸುವ ಮೂಲಕ ಮುಸ್ಲಿಮರಿಗೆ ಸಹಕಾರ ನೀಡುತ್ತಿದೆ. ರೈತ ವಿರೋಧಿ ನೀತಿಯನ್ನು ಅನುಸರಿಸಿ ಅವರನ್ನು ಬೀದಿಗೆ ತರುವ ಹುನ್ನಾರವನ್ನು ಖಂಡಿಸುತ್ತಿದ್ದೇವೆ. ಕೂಡಲೇ ಪ್ರಕ್ರಿಯೆ ಕೈಬಿಡಬೇಕು ಎಂದರು. ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರ್ಡೇಕರ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ, ಜಿಲ್ಲಾ ಉಪಾಧ್ಯಕ್ಷ ಸಂಜಯ್ ಸಾಳುಂಕೆ, ಸುನಿಲ್ ಸೋನಿ, ಕಿಶನ್ ಕಾಂಬ್ಳೆ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಜಾತಾ ಬಾಂದೇಕರ್, ಆಶಾ ಪಾಲನಕರ್, ದೇವಿದಾಸ್ ತಳೇಕರ್ ಮತ್ತಿತರರು ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಸರ್ಕಾರ ಮುಸ್ಲಿಂ ಓಲೈಕೆ ನೀತಿ ಕೈಬಿಡಲಿ

ಕುಮಟಾ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡದಂತೆ ತಡೆಹಿಡಿದಿರುವುದು ತಾತ್ಕಾಲಿಕ ಕ್ರಮವಾಗಿದ್ದು, ಚುನಾವಣೆಯ ತಂತ್ರವಾಗಿದೆ. ಮುಸ್ಲಿಂ ಓಲೈಕೆ ಹಾಗೂ ಹಿಂದು ವಿರೋಧಿ ಧೋರಣೆಯನ್ನು ಕಾಂಗ್ರೆಸ್ ಕೈಬಿಡಬೇಕು ಹಾಗೂ ಹಗರಣಗಳ ಸರ್ಕಾರದಿಂದ ಸಿದ್ದರಾಮಯ್ಯ, ಜಮೀರ್ ಅಹಮದ್ ಅವರ ಉಚ್ಚಾಟನೆಯಾಗಬೇಕು ಎಂದು ಶಾಸಕ ದಿನಕರ ಶೆಟ್ಟಿ ಆಗ್ರಹಿಸಿದರು.ಇಲ್ಲಿನ ಬಿಜೆಪಿ ಮಂಡಲದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಕೇಂದ್ರದಿಂದ ವಕ್ಫ್ ತಿದ್ದುಪಡಿ ಖಚಿತವಾಗುತ್ತಿದ್ದಂತೆ ರಾಜ್ಯದಲ್ಲಿ ವಕ್ಫ್‌ ಬೋರ್ಡ್ ತನ್ನ ಕರಾಳತನ ಪ್ರದರ್ಶಿಸಿ, ಹಿಂದುಗಳ ಹಾಗೂ ಸಾರ್ವಜನಿಕ ಆಸ್ತಿಯನ್ನು ಕಬಳಿಸತೊಡಗಿದೆ. ಇದು ಅತ್ಯಂತ ಆತಂಕಕಾರಿ ನಡೆಯಾಗಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಕುಮ್ಮಕ್ಕು ಕೊಡುತ್ತಿದೆ. ಆದ್ದರಿಂದ ಸಿದ್ದರಾಮಯ್ಯ ತೊಲಗಬೇಕು. ಜಮೀರ್ ಅಹಮದ್ ಅವರನ್ನು ಗಡೀಪಾರು ಮಾಡಬೇಕು. ನಮ್ಮ ತಾಲೂಕಿನಲ್ಲಿ ಎಲ್ಲೇ ಹಿಂದುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದಲ್ಲಿ ಬಿಜೆಪಿ ಅವರೊಂದಿಗೆ ಹೋರಾಟಕ್ಕೆ ಕೈಜೋಡಿಸಲಿದೆ. ಜನರು ಜಾಗೃತರಾಗಬೇಕಿದೆ ಎಂದರು.ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಮಾತನಾಡಿದರು. ಬಳಿಕ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದ ಮಹಾಸತಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಸೌಧದವರೆಗೆ ನಡೆಯಿತು. ಡಾ. ಜಿ.ಜಿ. ಹೆಗಡೆ, ಜಿ.ಎಸ್. ಗುನಗಾ, ಎಂ.ಜಿ. ಭಟ್, ಹೇಮಂತಕುಮಾರ, ತಿಮ್ಮಪ್ಪ ಮುಕ್ರಿ, ಸಂತೋಷ ನಾಯ್ಕ, ವಿ.ಐ. ಹೆಗಡೆ, ರಾಜೇಶ ನಾಯಕ, ಜಗನ್ನಾಥ ನಾಯ್ಕ, ಜಯಾ ಶೇಟ, ಅನುರಾಧಾ ಭಟ್, ಗಿರಿಯಾ ಗೌಡ, ಮಂಜುನಾಥ ಜನ್ನು, ಅಶೋಕ ಪ್ರಭು, ಪ್ರಶಾಂತ ನಾಯ್ಕ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು
ಸಾಕ್ಷಿಗಳಿಗೆ ಬೆದರಿಕೆ ಬಂದರೆ ‘ಹೊಸ ಬಾಗಿಲು’!