ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ ಬಿಜೆಪಿ

KannadaprabhaNewsNetwork | Published : Jun 23, 2025 12:33 AM

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ವಿರೋಧ ಪಕ್ಷದವರು ಸುಳ್ಳುಗಳನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣ ಹಾಗೂ ಗ್ರಾಮೀಣ ರಸ್ತೆಗಳು, ನೀರಾವರಿ ಯೋಜನೆಗಳು, ಒಳಚಂರಡಿ ಸೇರಿದಂತೆ ಅಭಿವೃದ್ಧಿ ಪೂರಕ ಕೆಲಸಗಳನ್ನು ಕೈಗೊಳ್ಳಲಾಗಿದೆ. ಬಿಜೆಪಿಯವರ ಸುಳ್ಳು ಮಾತುಗಳನ್ನು ಜನರು ನಂಬದೇ, ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸರ್ಕಾರದಲ್ಲಿ ದುಡ್ಡಿಲ್ಲ ಎಂದು ವಿರೋಧ ಪಕ್ಷದವರು ಸುಳ್ಳುಗಳನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣ ಹಾಗೂ ಗ್ರಾಮೀಣ ರಸ್ತೆಗಳು, ನೀರಾವರಿ ಯೋಜನೆಗಳು, ಒಳಚಂರಡಿ ಸೇರಿದಂತೆ ಅಭಿವೃದ್ಧಿ ಪೂರಕ ಕೆಲಸಗಳನ್ನು ಕೈಗೊಳ್ಳಲಾಗಿದೆ. ಬಿಜೆಪಿಯವರ ಸುಳ್ಳು ಮಾತುಗಳನ್ನು ಜನರು ನಂಬದೇ, ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ತಾಲೂಕಿನ ಹಿರೇಮುರಾಳದಲ್ಲಿ ಲೋಕೋಪಯೋಗಿ ಇಲಾಖೆಯಡಿಯಲ್ಲಿ ಸುಮಾರು ₹ 13 ಕೋಟಿಗಳ ವೆಚ್ಚದಲ್ಲಿ ತಾಲೂಕಿನ ಹಿರೇಮೂರಾಳದಿಂದ ಹುನಕುಂಟಿ ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಖಜಾನೆ ಇಲಾಖೆಯ ಪರವಾನಗಿ ಇಲ್ಲದೇ ಅವೈಜ್ಞಾನಿಕ ಕೆಲ ಕಾಮಗಾರಿಗಳನ್ನು ಕೈಗೊಂಡಿದ್ದು, ₹ 2.20 ಲಕ್ಷ ಕೋಟಿ ಹಣವನ್ನು ಯಾವುದೇ ಗುತ್ತಿಗೆದಾರರಿಗಾಗಲಿ ಅಥವಾ ಇನ್ನಿತರ ಅಭಿವೃದ್ಧಿಗೆ ಬಳಸದಂತೆ ಬಾಕಿ ಉಳಿಸಿ ಹೋಗಿದೆ. ಇದರಿಂದ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಿಜೆಪಿ ಬಿಟ್ಟು ಹೋಗಿರುವ ಅನುದಾನದ ಹಣವನ್ನು ನಮ್ಮ ಸರ್ಕಾರ ಭರಿಸುತ್ತಿದೆ. ಅದರಲ್ಲೂ ಕಮಲದಿನ್ನಿ, ಇಂಗಳಗೇರಿಯಿಂದ ಕೂಚಬಾಳ ರಸ್ತೆ, ಹಡಗಲಿ ಇಂದ ಅಮರಗೋಳದವರೆಗೆ ಆರ್‌ಡಿಪಿಆರ್ ಇಲಾಖೆಯಿಂದ ₹ 21 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಹಾಗೂ ಹೊಸ ರಸ್ತೆಗಳ ನಿರ್ಮಾಣಕ್ಕೆ ಆದಷ್ಟು ಬೇಗ ಭೂಮಿಪೂಜೆ ನೆರವೇರಿಸಲಾಗುವುದು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯವರ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಬಿಜೆಪಿಯವರಿಗೆ ನಮ್ಮ ಜನಪರ ಆಡಳಿತವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ತಾಲೂಕಿನಲ್ಲಿ ಎರಡು ಪಶು ಚಿಕಿತ್ಸಾಲಯಗಳನ್ನು ಈಗಾಗಲೇ ನಮ್ಮ ಸರ್ಕಾರ ಮಂಜೂರು ಮಾಡಿದ್ದು, ಅದರಲ್ಲಿ ಬಿಜ್ಜೂರು ಗ್ರಾಮದಲ್ಲಿ ಪಶು ಆಸ್ಪತ್ರೆ ತೆರೆಯಲಾಗಿದೆ. ನಾಗರಬೆಟ್ಟ ಏತ ನೀರಾವರಿ ಕಾಮಗಾರಿ ಬಹುತೇಕ ಸಂಪೂರ್ಣ ಮುಗಿದಿದ್ದು, ಮುಂಬರುವ ದಿನಗಳಲ್ಲಿ ಆದಷ್ಟು ಬೇಗ ಲೋಕಾರ್ಪಣೆಗೊಳಸಲಾಗುವುದು. ಜತೆಗೆ ಬೂದಿಹಾಳ ಪೀರಾಪೂರ ಯೋಜನೆಯನ್ನೂ ತೀವ್ರಗತಿಯಲ್ಲಿ ಪ್ರಾರಂಭಿಸುವ ಮೂಲಕ ಆ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಪಂಚ ಗ್ಯಾರಂಟಿ ಯೋಜನೆ ಸಮಿತಿಯ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್‌ ಮುಖಂಡ ಸಿ.ಬಿ.ಅಸ್ಕಿ, ಲೋಕೋಪಯೋಗಿ ಇಲಾಖೆ ಎಇಇ ಎಸ್.ಜಿ.ಶಿವನಗುತ್ತಿ, ಸಹಾಯಕ ಎಂಜಿನಿಯರ್‌ ಎ.ಬಿ.ರೆಡ್ಡಿ, ಶ್ರೀಶೈಲ ಮಲ್ಲಿಕಾರ್ಜುನ ದೇಶಮುಖ, ಅಮರೇಶ ಗೂಳಿ, ಶಾಂತಗೌಡ ನಾಡಗೌಡ, ಕಲ್ಲಣ್ಣ ಪ್ಯಾಟಿ, ಮಲ್ಲನಗೌಡ ಪಾಟೀಲ, ಶ್ರೀಶೈಲ ವಿಭೂತಿ, ಶ್ರೀಶೈಲ ಮೂರೋಳ, ರಾಜುಗೌಡ ಕೊಂಗಿ, ನಾಗಯ್ಯ ಹಾಲಗಂಗಾಧರಮಠ, ಮೈಬೂಬ್‌ ಮುಲ್ಲಾ ಸೇರಿದಂತೆ ಹಲವರು ಇದ್ದು..