ಕೊಪ್ಪಳ: ಮಹಿಳೆಯರ ಬಗ್ಗೆ ಮತ್ತು ಮಹಿಳಾ ಮೀಸಲಾತಿಯ ಬಗ್ಗೆ ಕಾಂಗ್ರೆಸ್ಸಿಗೆ ಇರುವಷ್ಟು ಕಾಳಜಿ ಬಿಜೆಪಿಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಹಿಳಾ ಮೀಸಲಾತಿ ಜಾರಿ ಅವರಿಗೆ ಇಷ್ಟ ಇಲ್ಲ. ಅದಕ್ಕಾಗಿಯೇ ಅದರ ಜತೆಗೆ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ವಿಷಯ ಸೇರ್ಪಡೆ ಮಾಡಿದ್ದಾರೆ. ಕೇವಲ ಚುನಾವಣೆ ಗಿಮಿಕ್, ಹೊರತು ನಿಜವಾದ ಕಳಕಳಿ ಇಲ್ಲ ಎಂದರು.
ಸಾಂಸ್ಕೃತಿಕ ಕಾಯ್ದೆ: ರಾಜ್ಯದಲ್ಲಿ ಸಾಂಸ್ಕೃತಿಕ ಕಾಯ್ದೆ ಜಾರಿ ಮಾಡಬೇಕು ಎನ್ನುವ ದಿಸೆಯಲ್ಲಿ ಪ್ರಯತ್ನ ನಡೆದಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.ಸ್ಥಳೀಯರನ್ನೇ ಗಮನದಲ್ಲಿಟ್ಟುಕೊಂಡು, ಅವರಿಗೆ ಆದ್ಯತೆ ನೀಡಬೇಕು ಎನ್ನುವ ಕಾರಣಕ್ಕಾಗಿ ಮತ್ತು ಸಾಂಸ್ಕೃತಿಕ ವಲಯದಲ್ಲಿಯೂ ಸ್ಥಳೀಯರ ಆದ್ಯತೆ ನೀಡಲು ಈ ಕಾನೂನು ಜಾರಿಗೆ ತರಲಾಗುತ್ತದೆ ಎಂದರು.
ನಟ ಚೇತನ್ ಅವರಿಗೆ ಗೊತ್ತಿಲ್ಲ. ಡಾ. ರಾಜಕುಮಾರ ಅವರು ಕೊಡುಗೆ, ಅವರ ಹೋರಾಟ, ಗೋಕಾಕ ಚಳವಳಿ, ಅಷ್ಟೇ ಯಾಕೆ? ಅವರು ಅನ್ಯ ಭಾಷೆಯ ಸಿನಿಮಾಗಳಿಗೆ ಎಷ್ಟೇ ಕರೆದರೂ ಹೋಗಿಲ್ಲ. ಅವರು ತೋರಿದ ಕನ್ನಡ ಪ್ರೀತಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರಿಗೆ 2.5 ಎಕರೆಯಲ್ಲ, ಹತ್ತು ಎಕರೆ ಕೊಟ್ಟರೂ ಕಡಿಮೆಯೇ ಎಂದರು.
ಡಾ. ರಾಜಕುಮಾರ ಅವರು ಇದ್ದಿದ್ದರೆ ಕೇಳುತ್ತಿರಲಿಲ್ಲ ಎಂದು ಚೇತನ್ ಹೇಳಿದ್ದಾರೆ. ಆದರೆ, ಅವರು ಕೇಳುವುದಲ್ಲ. ಅವರು ಎಂದೂ ಕೇಳುವವರು ಅಲ್ಲ. ನಮ್ಮ ನಾಡಿನ ಹಿರಿಮೆಯಾಗಿದ್ದಕ್ಕೆ ನಾವು ಅವರನ್ನು ಗೌರವಿಸಬೇಕು ಎಂದರು.ನಾನು ಶಿಸ್ತಿನ ಶಿಪಾಯಿ-ಶಿವರಾಜ ತಂಗಡಗಿ: ನಾನು ರಾಜಕೀಯ ಮಾತನಾಡುವುದಿಲ್ಲ. ಹೈಕಮಾಂಡ್ ಸೂಚನೆ ಇರುವುದರಿಂದ ನಾನು ಯಾವುದೇ ಕಾರಣಕ್ಕೂ ರಾಜಕೀಯ ಮಾತನಾಡುವುದಿಲ್ಲ, ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಸಚಿವರು ಯಾರು ಬೇಕಾದರೂ ಆಗಬಹುದು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಸಹ ಆಗಬಹುದು. ಹಾಗೆ ಶಿವರಾಜ ತಂಗಡಗಿ ಅವರು ಮುಂದುವರಿಯಬಹುದು. ಇದ್ಯಾವುದು ನಮ್ಮ ಕೈಯಲ್ಲಿ ಇಲ್ಲ. ಶಾಸಕರಾಗಿ ಆಯ್ಕೆಯಾಗಿರುವವರು ಹಿರಿತನದ ಆಧಾರದಲ್ಲಿ ಸಚಿವರಾಗಲು ಎಲ್ಲರೂ ಅರ್ಹರು ಇರುತ್ತಾರೆ. ಆದರೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಮಾತಿಗೆ ಕೌಂಟರ್ ಕೊಡುವಷ್ಟು ದೊಡ್ಡವನು ನಾನಲ್ಲ ಎಂದರು.