ಬಿಜೆಪಿ ಈಗ ಮನೆಯೊಂದು ಮೂರು ಬಾಗಿಲು: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ

KannadaprabhaNewsNetwork | Published : Dec 4, 2024 12:33 AM

ಸಾರಾಂಶ

ಡಿಸೆಂಬರ್ 5 ರಂದು ನಡೆಯುತ್ತಿರುವ ಹಾಸನದ ಸ್ವಾಭಿಮಾನಿ ಸಮಾವೇಶವು ಕಾಂಗ್ರೆಸ್ ಪಕ್ಷದ ಸಮಾವೇಶವಾಗಿದ್ದು, ಕಾಂಗ್ರೆಸ್ ಪಕ್ಷವು ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಗ್ಯಾರಂಟಿ ಸೌಲಭ್ಯಗಳನ್ನು ಒದಗಿಸಿರುವ ಸಂತೋಷಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾದ ನಂತರ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವುದು ಪೊಲೀಸರ ಕರ್ತವ್ಯ. ಚಂದ್ರಶೇಖರನಾಥ ಸ್ವಾಮೀಜಿ ಅವರ ವಿಚಾರದಲ್ಲೂ ಇದೇ ಆಗಿದೆ. ತನಿಖೆ ನಡೆಸುತ್ತಿರುವ ಮಾತ್ರಕ್ಕೆ ಅವರನ್ನು ಬಂಧಿಸುವ ಪ್ರಮೇಯ ಬರುವುದಿಲ್ಲ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ತಮ್ಮ ಮನೆದೇವರಾದ ವಿಜಯಪುರ ಪಟ್ಟಣದ ಶ್ರೀ ಸೌಮ್ಯಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಾಯಿ ಉಮಾ ಬಚ್ಚೇಗೌಡ, ಪತ್ನಿ ಪ್ರತಿಭಾ ಬಚ್ಚೇಗೌಡರವರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ವರದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದವರು ಮೊದಲಿಗೆ ಅವರಲ್ಲಿನ ಒಳಜಗಳಗಳನ್ನು ಪರಿಹರಿಸಿಕೊಂಡು ನಂತರ ಬೇರೆ ವಿಷಯಗಳಿಗೆ ತಲೆಹಾಕಲಿ. ಅವರ ಪಕ್ಷದಲ್ಲೀಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದು, ಮಾಡುವುದಕ್ಕೆ ಬೇರೆ ಯಾವುದೇ ವಿಷಯವಿಲ್ಲದೆ ಅನಾವಶ್ಯಕವಾಗಿ ಕಾಂಗ್ರೆಸ್ ಪಕ್ಷದ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಡಿಸೆಂಬರ್ 5 ರಂದು ನಡೆಯುತ್ತಿರುವ ಹಾಸನದ ಸ್ವಾಭಿಮಾನಿ ಸಮಾವೇಶವು ಕಾಂಗ್ರೆಸ್ ಪಕ್ಷದ ಸಮಾವೇಶವಾಗಿದ್ದು, ಕಾಂಗ್ರೆಸ್ ಪಕ್ಷವು ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಗ್ಯಾರಂಟಿ ಸೌಲಭ್ಯಗಳನ್ನು ಒದಗಿಸಿರುವ ಸಂತೋಷಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಸಚಿವರು, ಶಾಸಕರು ಸೇರಿ ಆಚರಿಸಲಾಗುತ್ತಿರುವ ಸಮಾವೇಶವಾಗಿದೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷ ಎಂ ಸತೀಶ್ ಕುಮಾರ್, ಮಾಜಿ ಸದಸ್ಯರಾದ ಸಂಪತ್ ಕುಮಾರ್, ಮುನಿ ಚಿನ್ನಪ್ಪ, ರಮೇಶ್, ಗುತ್ತಿಗೆದಾರರಾದ ರವೀಶ್, ದೊಡ್ಡ ತತ್ತಮಂಗಲ ನಾರಾಯಣಸ್ವಾಮಿ, ಆರ್.ಎಂ.ಮಂಜುನಾಥ್, ಶ್ರೀ ಸೌಮ್ಯ ಚನ್ನಕೇಶವ ಸ್ವಾಮಿ ದೇವಾಲಯದ ಅರ್ಚಕರಾದ ಮುರಳಿಧರ್ ಭಟ್ಟಾಚಾರ್ಯ ರಾಜು ಸ್ವಾಮಿ, ರಥೋತ್ಸವ ಸಮಿತಿಯ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

Share this article