ಕೊಪ್ಪಳ:
ರಾಜ್ಯ ಸರ್ಕಾರದ ಬಜೆಟ್ ವಿರೋಧಿಸಿ ಶನಿವಾರ ನಗರದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಟ್ರ್ಯಾಕ್ಟರ್ನಲ್ಲಿ ಬಂದ ಮುಖಂಡರು ಹಾಗೂ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಹಿಂದುಳಿದ, ದಲಿತರು ಹಾಗೂ ಶೋಷಿತರ ವಿರೋಧಿ ಬಜೆಟ್ ಆಗಿದೆ ಎಂದು ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು, ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಗೆ ದಲಿತರ ಮೀಸಲಿಟ್ಟ ಅನುದಾನ ಬಳಕೆ ಮಾಡಿದ್ದಾರೆ. ಇದನ್ನು ಸಮುದಾಯ ಜನ ಒಪ್ಪುವುದಿಲ್ಲ ಎಂದರು. ಶುಕ್ರವಾರ ಮಂಡಿಸಿರುವ ಬಜೆಟ್ ಸಹ ಒಂದು ಸಮುದಾಯ ಓಲೈಕೆ ಮಾಡುವ ಬಜೆಟ್ ಆಗಿದೆ ಎಂದು ದೂರಿದರು.ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಬಜೆಟ್ ಪ್ರಾರಂಭದ ಮುನ್ನ ಬಸವಣ್ಣನವರ ವಚನ ಓದಿದ ಮುಖ್ಯಮಂತ್ರಿ ಅವರ ಆಸೆಯಂತೆ ಬಜೆಟ್ ಮಂಡಿಸಲಿಲ್ಲ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಆದ್ಯತೆ ಮೇರೆಗೆ ಬಜೆಟ್ ಮಂಡಿಸುವೆ ಎಂದಿದ್ದರೂ. ಆದರೆ, ಸಾಲ ಮಾಡಿ ಬಜೆಟ್ ಮಂಡಿಸುವ ಮೂಲಕ ಸಾಲದ ಹೊರೆ ಜನರ ಮೇಲೆ ಹಾಕಿದ್ದಾರೆ. ಮುಖ್ಯಮಂತ್ರಿಗಳು ಕೇವಲ ಒಂದು ಸಮುದಾಯ ಓಲೈಕೆ ಮಾಡಲು ಹೋಗಿ ಸರ್ವ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೆಲವೊಂದು ಕ್ಷೇತ್ರಗಳನ್ನು ಪ್ರಮುಖವಾಗಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. ಮೈಸೂರಿಗೆ ಹೆಚ್ಚು ಯೋಜನೆ ಘೋಷಣೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯಿಸಿದ್ದಾರೆ. ಬರಿ ಗ್ಯಾರಂಟಿ ಯೋಜನೆಗಳ ಜಪ ಮಾಡಿದ್ದಾರೆಯೇ ವಿನಃ ಜನಪರ ಯೋಜನೆಗಳು ಈ ಬಜೆಟ್ನಲ್ಲಿ ಕಾಣಲಿಲ್ಲ. ತೆರಿಗೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದ್ದಾರೆ. ಈ ಸರ್ಕಾರದ ಆಡಳಿತ ವೈಖರಿಗೆ ಜನರು ರೋಸಿ ಹೋಗಿದ್ದಾರೆ ಎಂದರು.ಪ್ರತಿಭಟನೆಯಲ್ಲಿ ಮಹಾಲಕ್ಷ್ಮಿ ಕಂದಾರಿ, ಗಣೇಶ ಹೊರತಟ್ನಾಳ, ಡಿ. ಮಲ್ಲಣ್ಣ, ರಾಜು ಬಾಕಳೆ, ನರಸಿಂಗರಾವ್ ಕುಲಕರ್ಣಿ, ರಮೇಶ ಕವಲೂರ, ರಮೇಶ ನಾಡಿಗೇರ, ಸುನಿಲ್ ಹೆಸರೂರು, ಜಯಶ್ರೀ ಗೊಂಡಬಾಳ ಇದ್ದರು.