ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಘಟಕದ ವತಿಯಿಂದ ಏ.1ರಂದು ಸಂಜೆ 4ಕ್ಕೆ ಬಿ.ಎಚ್.ರಸ್ತೆಯ ಸೈನ್ಸ್ ಮೈದಾನದಲ್ಲಿ ಪಕ್ಷದ ಬೂತ್ ಸಮಿತಿಯ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಡಾ.ಧನಂಜಯ ಸರ್ಜಿ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಾವೇಶದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಮಾಜಿ ಶಾಸಕ ಎಂ.ಬಿ. ಭಾನುಪ್ರಕಾಶ್, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಜಿಲ್ಲಾ ಚುನಾವಣಾ ಸಂಚಾಲಕ ಆರ್.ಕೆ.ಸಿದ್ರಾಮಣ್ಣ, ಗಿರೀಶ್ ಪಟೇಲ್, ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್, ಕೆ.ಜಿ.ಕುಮಾರಸ್ವಾಮಿ ಭಾಗವಹಿಸುವರು ಎಂದು ತಿಳಿಸಿದರು.
ಜೊತೆಗೆ ಶಿವಮೊಗ್ಗ ಗ್ರಾಮಾಂತರ ಮಂಡಲ 156 ಮತ್ತು ಹೊಳೆಹನ್ನೂರು ಮಂಡಲದ 75 ಬೂತ್ಗಳಿವೆ. 13 ಜನರ ಕಾರ್ಯಕರ್ತರ ತಂಡದ ಒಟ್ಟು 231 ಬೂತ್ಗಳ ಕಾರ್ಯಕರ್ತರು ಸಮಾವೇಶಗೊಳ್ಳಲಿದ್ದಾರೆ. ಪ್ರತಿ ಬೂತ್ ಸಮಿತಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಮಹಿಳಾ ಪ್ರಮುಖರು, ಎಸ್ಸಿ,ಎಸ್ಟಿ, ಒಬಿಸಿ ಹಾಗೂ ಬಿಎಲ್ಎ-2 ಗಳ 3000 ಸಾವಿರಕ್ಕೂ ಹೆಚ್ಚು ಬೂತ್ ಸಮಿತಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷ ಎಸ್.ಇ.ಸುರೇಶ್, ಹೊಳೆಹನ್ನೂರು ಮಂಡಲ ಅಧ್ಯಕ್ಷ ಎಂ. ಮಲ್ಲೇಶಪ್ಪ, ಸಂಚಾಲಕರಾದ ಜಿ.ಇ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್, ಕೆ.ಜಿ.ಕುಮಾರ ಸ್ವಾಮಿ, ಗ್ರಾಮಾಂತರ ಮಂಡಲ ಪ್ರಭಾರಿ ರಮೇಶ್ , ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಗಣೇಶ್, ಎಸ್. ಆರ್. ಚಂದ್ರಕುಮಾರ್, ಪ್ರಮುಖರಾದ ಅಣ್ಣಪ್ಪ ಆಯನೂರು, ಎಂ.ಬಿ.ಶಂಕರ ಮೂರ್ತಿ ಮತ್ತಿತರರಿದ್ದರು.
ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ, ಬೂತ್ ಕಾರ್ಯಕರ್ತರಿಂದ ಹಿಡಿದು ರಾಜ್ಯ, ರಾಷ್ಟ್ರಮಟ್ಟದವರೆಗೆ ಎಲ್ಲರಿಗೂ ಸಮನಾದ ಗೌರವ ನೀಡುತ್ತಾ ಬಂದಿದೆ. ಬೂತ್ ಗೆದ್ದರೆ ದೇಶ ಗೆದ್ದಂತೆ , ಬೂತ್ ಗೆದ್ದರೆ ಬಿಜೆಪಿ ಗೆದ್ದಂತೆ ಎಂದು ಮೋದಿ ಬಲವಾಗಿ ಪ್ರತಿಪಾದಿಸಿದ್ದಾರೆ. ದೊಡ್ಡ ದೊಡ್ಡ ಸಮಾವೇಶಕ್ಕಿಂತ ಕಾರ್ಯಚಟುವಟಿಕೆಗಳೆಲ್ಲವೂ ಬೂತ್ ಮಟ್ಟದಲ್ಲಿಯೇ ನಡೆಯಬೇಕು.
ಡಾ.ಧನಂಜಯ ಸರ್ಜಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ--------
ಬಿಎಸ್ವೈ ವಿರುದ್ಧ ಟೀಕೆ ಸಮರ್ಥನೀಯವಲ್ಲ: ಡಾ.ಧನಂಜಯ ಸರ್ಜಿಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶೀರ್ವಾದ ಮತ್ತು ಬಿಜೆಪಿಯಿಂದ ನಾಲ್ಕೂ ಸದನಗಳಲ್ಲೂ ಸ್ಥಾನಮಾನ, ಅಧಿಕಾರ ಅನುಭವಿಸಿದ ಎಲ್ಲ ರೀತಿಯ ಫಲಾನುವಿ ಆಯನೂರು ಮಂಜುನಾಥ್. ಈಗ ಕಾಂಗ್ರೆಸ್ನಲ್ಲಿದ್ದೀನಿ ಎನ್ನುವ ಕಾರಣಕ್ಕೋಸ್ಕರ ಯಡಿಯೂರಪ್ಪ ಅವರ ವಿರುದ್ಧ ಟೀಕೆ ಮಾಡುವುದು ಸಮರ್ಥನೀಯವಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಧನಂಜಯ ಸರ್ಜಿ ಹೇಳಿದರು.
ಬಿಜೆಪಿಯಿಂದ ಬೇರೆ ಯಾರೂ ಪಡೆಯಲಾಗದ ಎಲ್ಲ ಫಲಗಳ ಪಡೆದ ಬಹುದೊಡ್ಡ ಫಲಾನುಭವಿ. ಬರೀ ಮಾತನಾಡಲೊಬ್ಬರು ರಾಜಕಾರಣಿಬೇಕೆನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಮನ್ನಣೆ ಹಾಕಿದೆಯಷ್ಟೇ. ಅಂತವರು ಯಡಿಯೂರಪ್ಬ ಬಗ್ಗೆ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗಳಿಸಿಕೊಂಡ ಮತಗಳ ಸಂಖ್ಯೆ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಅದಕ್ಕಿಂತ ಬೇರೆ ಅವರ ಸಾಮರ್ಥ್ಯ ಅಳೆಯಬೇಕಿಲ್ಲ. ಮುಂದಿನ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ವಿದ್ಯಾವಂತರು ಹಾಗೂ ಪ್ರಜ್ಞಾವಂತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.