- ಚೋರ ಗುರು, ಚಾಂಡಾಲ ಶಿಷ್ಯರಂತಹ ಜೋಡಿ: ದಿನೇಶ ಶೆಟ್ಟಿ ವಾಗ್ದಾಳಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲೆಗೆ ಚೋರ ಗುರು, ಚಾಂಡಾಲ ಶಿಷ್ಯರಿಂದ ಸಾಕಷ್ಟು ನಷ್ಟವಾಗಿದೆ. ಸಾರ್ವಜನಿಕರ ಬಗ್ಗೆ ಬಿಜೆಪಿ ನಾಯಕರಿಗೆ ಕಳಕಳಿ ಇದ್ದರೆ ಮೊದಲು ಜಿ.ಎಂ. ಸಿದ್ದೇಶ್ವರ, ಯಶವಂತ ರಾವ್ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೋರ ಗುರುವಿನಂತೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಚಾಂಡಾಲ ಶಿಷ್ಯನಂತೆ ಯಶವಂತ ರಾವ್ ಇದ್ದಾರೆ. ಒಂದು ಪಕ್ಷದಿಂದ ಅನೇಕ ಚುನಾವಣೆ ಎದುರಿಸಿ, ಸೋತ ಖ್ಯಾತಿ ಹೊಂದಿರುವ ಯಶವಂತ ರಾವ್ ಹಿಂದೆ ತಾವು ಏನು ಮಾಡುತ್ತಿದ್ದರು?, ನಗರಸಭೆ ಅಧ್ಯಕ್ಷ, ದೂಡಾ ಅಧ್ಯಕ್ಷರಾಗಿದ್ದ ಯಶವಂತರಾವ್ ಅಕ್ರಮವಾಗಿ ಡೋರ್ ನಂಬರ್ ನೀಡಿ ಸರ್ಕಾರಕ್ಕೆ, ಜನರಿಗೆ ವಂಚಿಸಿದ್ದಾರೆ. ದಾವಣಗೆರೆಯ ಹಲವಾರು ಮೂಲೆ ನಿವೇಶನಗಳನ್ನು ತಮ್ಮ ಹಾಗೂ ಕುಟುಂಬದವರ ಹೆಸರಿಗೂ ಬರೆದುಕೊಂಡಿದ್ದಾರೆ ಎಂದು ಟೀಕಿಸಿದರು.ಡಿಸಿಎಂ ಬಳಿ ರೈಲ್ವೆ ಕೆಳಸೇತುವೆ, ಅಶೋಕ ಟಾಕೀಸ್ ಬಳಿ ರೈಲ್ವೆ ಕೆಳಸೇತುವೆ, ಶಿರಮಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ಸೇತುವೆಗಳನ್ನು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಒಂದು ರೀತಿ ಜಿಲೇಬಿಯಂತೆ ಮಾಡಿಸಿದ್ದಾರೆ. ದಾವಣಗೆರೆ ಜಿಲ್ಲಾಡಳಿತ ಭವನ ನಿರ್ಮಿಸಿದ್ದು ಸರ್ಕಾರದ ಮುಂದುವರಿದ ಕೆಲಸವೇ ಹೊರತು, ಅದರಲ್ಲಿ ಸಿದ್ದೇಶ್ವರ- ಯಶವಂತ ರಾವ್ ಕೊಡುಗೆ ಏನೆಂಬುದೇ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಿಂದಿನ ಅವಧಿಯಲ್ಲಿ ಸಚಿವರಾಗಿದ್ದ ವೇಳೆ ಸ್ಮಾರ್ಟ್ ಸಿಟಿ ಯೋಜನೆಯ ಡಿಪಿಆರ್ ಮಾಡಿದ್ದನ್ನು ಬದಲಾವಣೆ ಮಾಡಿ, ಅವೈಜ್ಞಾನಿಕವಾಗಿ ಹಳೆ ಬಸ್ ನಿಲ್ದಾಣ ನಿರ್ಮಿಸಿದ ಸಿದ್ದೇಶ್ವರ ಹಾಗೂ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಕಾಮಗಾರಿಗಳ ಬಗ್ಗೆ ಕನಿಷ್ಠ ಗಮನಹರಿಸದೇ, ಕೇವಲ ಸೂಟ್ ಕೇಸ್ ಕಡೆಗಷ್ಟೇ ಗಮನ ಹರಿಸಿದ್ದರು ಎಂದು ಆರೋಪಿಸಿದರು.ದಾವಣಗೆರೆ ಅಭಿವೃದ್ಧಿಗೆ ಶಾಮನೂರು ಶಿವಶಂಕಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಕೊಡುಗೆ ಅಪಾರ. ಸಂಸದರಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಒಂದೇ ವರ್ಷದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಾಗ ಭದ್ರಾ ಜಲಾಶಯ ಅಭಿವೃದ್ಧಿ ಸೇರಿದಂತೆ ಅನೇಕ ಸಮಸ್ಯೆಗಳಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ ಜಾಧವ್, ಎ.ನಾಗರಾಜ, ಮಂಗಳಮ್ಮ ಇತರರು ಇದ್ದರು.- - -
-30ಕೆಡಿವಿಜಿ9: ಕಾಂಗ್ರೆಸ್ ಮುಖಂಡ ದಿನೇಶ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.