ಕನ್ನಡಪ್ರಭ ವಾರ್ತೆ ಹಾಸನ
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿಗೆ ಬಿಜೆಪಿ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ಶ್ರೀಗಂಧದ ಕೋಠಿ ಬಳಿ ಆರ್.ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಜೈಕಾರದ ಘೋಷಣೆ ಕೂಗುವುದರ ಮೂಲಕ ಸಂಭ್ರಮಾಚರಣೆ ಮಾಡಿದರು.ಇದೇ ವೇಳೆ ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಹರಿಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿಗೆ ಬಿಜೆಪಿ ಜಯಭೇರಿಗೆ ದೇಶದ ಪ್ರಧಾನಿ ನರೇಂಧ್ರ ಮೋದಿ ಪಕ್ಷದ ಕಾರ್ಯಕರ್ತರ ಅಪಾರ ಶ್ರಮ ಹಾಗೂ ಕೊಡುಗೆಯನ್ನು ನಾವು ಇಂದು ನೆನಪಿಸಿಕೊಳ್ಳಬೇಕಾಗುತ್ತದೆ. ಮಾಧ್ಯಮಗಳು ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದರೂ ಅದೆಲ್ಲವೂ ತಲೆ ಕೆಳಕಾಗಿ ಬಿಜೆಪಿ ಜಯಗಳಿಸಿದೆ. ಎಲ್ಲಾರ ಸಮೀಕ್ಷೆ ಮೀರಿ ಇವತ್ತು ಹರಿಯಾಣ ನಮ್ಮ ಪಕ್ಷದ ಪರ ಇರುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಹಾಸನ ನಗರದಲ್ಲಿ ಪಕ್ಷದಿಂದ ಸಂಭ್ರಮ ಆಚರಣೆ ಮಾಡುತ್ತಿದ್ದೇವೆ. ಈ ವೇಳೆ ಬಿಜೆಪಿಯ ಎಲ್ಲಾ ರಾಷ್ಟ್ರೀಯ ನಾಯಕರಿಗೆ ಅಭಿನಂದನೆ ತಿಳಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಅಭೂತಪೂರ್ವ ಫಲಿತಾಂಶವನ್ನು ಭಾರತೀಯ ಜನತಾ ಪಾರ್ಟಿ ಪಡೆದುಕೊಂಡಿದ್ದು, ಬಿಜೆಪಿ ಹೀನಾಯ ಸೋಲು ಎಂದು ಮಾಧ್ಯಮದಲ್ಲಿ ಕಂಡಿದ್ದೇವೆ. ಈಗ ಅದನ್ನು ಮೀರಿ ಬಿಜೆಪಿ ಪಕ್ಷ ಹರಿಯಾಣದಲ್ಲಿ ಬಂದಿದೆ. ಮುಂದೆ ನಡೆಯುವ ಎಲ್ಲಾ ಚುನಾವಣೆಯಲ್ಲೂ ಕೂಡ ಬಿಜೆಪಿ ಗೆಲುವು ಪಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ಕೂಡ ಬಿಜೆಪಿಗೆ ಉತ್ತಮ ಫಲಿತಾಂಶ ಬಂದಿದೆ ಎಂದರು.ಜೆ.ಪಿ. ನಡ್ಡಾ ಕೂಡ ಹರಿಯಾಣದವರು ಆಗಿರುವುದರಿಂದ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಬಂದಿರುವುದು ದೇಶದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತಂದಿದೆ. ನೆನಪಿನಲ್ಲಿ ಹಾಸನ ನಗರದಲ್ಲಿ ಬಿಜೆಪಿಯಿಂದ ಒಂದು ವಿಜಯೋತ್ಸವ ಆಚರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿಯಲಿದೆ ಎಂದರು.
ಬಿಜೆಪಿ ನಗರಾಧ್ಯಕ್ಷ ಮಂಜುನಾಥ್, ಮುಖಂಡರಾದ ಪ್ರೀತಿವರ್ಧನ್, ಚನ್ನಂಗಿಹಳ್ಳಿ ಶ್ರೀಕಾಂತ್, ಶೋಭನ್ ಬಾಬು, ಎಸ್.ಟಿ.ಮೋರ್ಚಾದ ಜಿಲ್ಲಾಧ್ಯಕ್ಷ ಬಿ.ಎಸ್. ರವಿಕುಮಾರ, ಪ್ರಧಾನ ಕಾರ್ಯದರ್ಶಿ ಕಿರಣ್. ಖಜಾಂಚಿ ಬಿ.ಎನ್.ಮೂರ್ತಿ, ರಾಜೀವ್, ಚನ್ನಕೇಶವ, ವೇದವತಿ, ರಾಜೀವ್, ಗುರುಪ್ರಸಾದ್, ಕಾರ್ತಿಕ್ ಇತರರು ಇದ್ದರು. ಫೋಟೋ: ಹಾಸನದ ಆರ್.ಸಿ. ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಎದುರು ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರು.