ಶಾಂತಿ ಕದಡಲು ಬಿಜೆಪಿಗೆ ಅವಕಾಶ ನೀಡುವುದಿಲ್ಲ

KannadaprabhaNewsNetwork |  
Published : Aug 26, 2026, 02:15 AM IST
ಆಸಾರ ಓಣಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯಲ್ಲಿ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿ ಹುಬ್ಬಳ್ಳಿ ಇಂಡಿಪಂಪ್‌ ವೃತ್ತದಲ್ಲಿ ಕಾಂಗ್ರೆಸ್‌ ಹಾಗೂ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದಿಂದ ರಸ್ತೆ ತಡೆದು ಪ್ರತಿಭಟಿಸಿದರು. | Kannada Prabha

ಸಾರಾಂಶ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ತಾವು ಶಾಸಕರಾಗಿದ್ದ ವೇಳೆ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದಾಗ ವಿರೋಧ ವ್ಯಕ್ತಪಡಿಸದವರು ಇದೀಗ ವಿವಾದ ಸೃಷ್ಟಿಸುತ್ತಿರುವುದು ಏಕೆ.

ಹುಬ್ಬಳ್ಳಿ:

ಆಸಾರ ಓಣಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ನಾಯಕರು ವಿರೋಧಿಸುವ ಮೂಲಕ ಶಾಂತಿ ಕದಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಹಾಗೂ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳದಿಂದ ಮಂಗಳವಾರ ನಗರದ ಇಂಡಿಪಂಪ್‌ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.

ಆಸಾರ ಓಣಿಯಲ್ಲಿನ ಪುಷ್ಕರಣಿ ವಿವಾದವನ್ನು ಮುಂದಿಟ್ಟುಕೊಂಡು ನಗರದಲ್ಲಿ ಶಾಂತಿ ಭಂಗ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ತಾವು ಶಾಸಕರಾಗಿದ್ದ ವೇಳೆ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದಾಗ ವಿರೋಧ ವ್ಯಕ್ತಪಡಿಸದವರು ಇದೀಗ ವಿವಾದ ಸೃಷ್ಟಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಪಾಂಡುರಂಗ ಪಾಟೀಲ ಪಾಲಿಕೆ ಸದಸ್ಯರಾಗಿದ್ದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಾಗಲೂ ಮೌನವಾಗಿದ್ದವರು. ಈಗ ರಾಜಕೀಯ ಕಾರಣಕ್ಕಾಗಿ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಅವರನ್ನು ಧಾರವಾಡ ಜಿಲ್ಲೆಯಿಂದ ಮಾತ್ರವಲ್ಲ ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಆರ್‌ಎಸ್‌ಎಸ್‌ ಸೇರಿದಂತೆ ಕೆಲವು ಸಂಘಟನೆಗಳು ಶಾಂತಿ ಭಂಗದ ಮೂಲಕ ರಾಜಕೀಯ ಲಾಭ ಪಡೆಯುವ ಉದ್ದೇಶ ಹೊಂದಿವೆ. ಪುಷ್ಕರಣಿ ಹಾಗೂ ದೇವಸ್ಥಾನವು ಪುರಾತತ್ವ ಅಥವಾ ಪರಂಪರೆ ಇಲಾಖೆಯಿಂದ ಸಂರಕ್ಷಿತ ಪ್ರದೇಶವೆಂಬುದಕ್ಕೆ ದಾಖಲೆಗಳಿದ್ದರೆ ಅವುಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು.

ಬಿಜೆಪಿ ನಾಯಕರಿಗೆ ಹಲವು ಪ್ರಶ್ನೆ ಮುಂದಿಟ್ಟ ಪ್ರತಿಭಟನಾಕಾರರು, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಜಾಗ ಒತ್ತುವರಿ, ಅಂಬೇಡ್ಕರ್ ಹಾಗೂ ಸಿದ್ದಪ್ಪ ಕಂಬಳಿ ಅವರು ಬಳಸಿದ್ದರೆಂದು ಹೇಳಲಾಗುವ ಬಾವಿಯ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳಲ್ಲೂ ಪ್ರತಿಭಟನೆ ನಡೆಸಲಿ ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಅಧಿಕಾರಿಗಳು ಕಾನೂನುಬದ್ಧವಾಗಿ ಕೆಲಸ ಮಾಡಲು ಅಡ್ಡಿಪಡಿಸಿದರೆ ಬೀದಿ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗುರುನಾಥ ಉಳ್ಳಿಕಾಶಿ, ಸದಾನಂದ ಡಂಗನವರ, ನಾಗರಾಜ ಗೌರಿ, ಶ್ರೀನಿವಾಸ ಬೆಳದಡಿ, ಪ್ರಕಾಶ ಕುರಹಟ್ಟಿ, ರಜತ್‌ ಉಳ್ಳಾಗಡ್ಡಿಮಠ, ಮಂಜುನಾಥ ಉಳ್ಳಿಕಾಶಿ, ಸಂದಿಲ್ ಕುಮಾರ, ಸುವರ್ಣ ಕಲಕುಂಟ್ಲ, ದೊರೆರಾಜ ಮಣಕುಂಟ್ಲ, ಸುನಿಲ ಕಠಾರೆ, ಪ್ರಭು ಪ್ರಭಾಕರ, ಮಾರುತಿ ದೊಡ್ಡಮನಿ, ಅಕ್ಕಮ್ಮ ಕಾಂಬಳೆ, ಚೇತನಾ ಲಿಂಗದಾಳ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದರಿಯಾದ ಪದವಿ ರೈತನ ಕೃಷಿ ಕಾಯಕ
ವೈಯಕ್ತಿಕ ಕಾಮಗಾರಿ ಸದುಪಯೋಗ ಪಡೆಯಿರಿ:ಯಂಕಂಚಿ